ತುಮಕೂರು: ದೆಹಲಿಯಿಂದ ಜಿಲ್ಲೆಯ ಗುಬ್ಬಿ ತಾಲೂಕಿನ ಚೇಳೂರಿಗೆ ಬಂದಿದ್ದ ಜೆಸಿಬಿ ಆಪರೇಟರ್ ಆಗಿ ಕೆಲಸ ಮಾಡುತ್ತಿದ್ದ ವ್ಯಕ್ತಿಯಲ್ಲಿ ಕೊರೊನಾ ಸೋಂಕು ದೃಢಪಟ್ಟಿದ್ದು, ಈ ಮೂಲಕ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 43ಕ್ಕೆ ಏರಿಕೆಯಾಗಿದೆ.
ದೆಹಲಿಯಿಂದ ಬೆಂಗಳೂರಿಗೆ ಜೂನ್ 15ರಂದು ರೈಲಿನಲ್ಲಿ ಬಂದಿದ್ದ ಸೋಂಕಿತ ವ್ಯಕ್ತಿ ನಂತರ ಗುಬ್ಬಿಗೆ ಬಂದಿದ್ದ. ಅಲ್ಲದೆ ಚೇಳೂರಿನಲ್ಲಿ ಇವರನ್ನು ಕ್ವಾರಂಟೈನ್ ಮಾಡಲಾಗಿತ್ತು. ಜೂನ್ 16ರಂದು ಇವರ ಗಂಟಲು ದ್ರವದ ಮಾದರಿಯನ್ನು ತೆಗೆಯಲಾಗಿತ್ತು. ಜೂನ್ 18ರಂದು ಜಿಲ್ಲಾಸ್ಪತ್ರೆಯ ಕೋವಿಡ್-19 ಪರೀಕ್ಷಾ ಘಟಕದಲ್ಲಿ ಪಾಸಿಟಿವ್ ಎಂದು ದೃಢವಾಗಿದೆ.
ಇವರನ್ನು ಜಿಲ್ಲಾ ಕೋವಿಡ್-19 ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲು ಮಾಡಲಾಗಿದೆ. ಸೋಂಕಿತ ವ್ಯಕ್ತಿಯ ಜೊತೆ ಬೆಂಗಳೂರಿನಿಂದ ಚೇಳೂರಿಗೆ ಬಂದಿದ್ದ ಪ್ರಾಥಮಿಕ ಸಂಪರ್ಕದಲ್ಲಿದ್ದ 25 ಮಂದಿಯನ್ನು ಕ್ವಾರಂಟೈನ್ ಮಾಡಲಾಗಿದೆ. ತುಮಕೂರು ಜಿಲ್ಲೆಯ ವಿವಿಧೆಡೆ 700 ಮಂದಿಯನ್ನು ಕ್ವಾರಂಟೈನ್ ಮಾಡಲಾಗಿದೆ. ಇದುವರೆಗೂ ತುಮಕೂರು ಜಿಲ್ಲೆಯಲ್ಲಿ 13,078 ಮಂದಿಯ ಗಂಟಲು ದ್ರವ ಪರೀಕ್ಷೆ ನಡೆಸಲಾಗಿದೆ. ಅದರಲ್ಲಿ 12,070 ಮಂದಿಯಲ್ಲಿ ನೆಗೆಟಿವ್ ಬಂದಿದೆ.
ಇನ್ನೂ 880 ಮಂದಿಯ ಗಂಟಲು ದ್ರವದ ಮಾದರಿಗಳ ವರದಿ ನಿರೀಕ್ಷೆಯಲ್ಲಿ ಜಿಲ್ಲಾಡಳಿತವಿದೆ. 31 ಮಂದಿ ಸೋಂಕಿತರು ಈಗಾಗಲೇ ಗುಣಮುಖರಾಗಿದ್ದಾರೆ. ಇಬ್ಬರು ಮೃತಪಟ್ಟಿದ್ದು, ಇನ್ನೂ 10 ಮಂದಿ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ.