ತುಮಕೂರು : ಅಪರಿಚಿತ ವಾಹನ ಡಿಕ್ಕಿ ಹೊಡೆದು ಗಂಭೀರವಾಗಿ ಗಾಯಗೊಂಡಿದ್ದ ವ್ಯಕ್ತಿಯನ್ನು ಆಸ್ಪತ್ರೆಗೆ ಸಾಗಿಸಲು 108 ವಾಹನ ಸಿಬ್ಬಂದಿ ಸ್ಪಂದಿಸದ ಹಿನ್ನೆಲೆ, ಪೊಲೀಸ್ ಗಸ್ತು ವಾಹನ ಸಿಬ್ಬಂದಿ ಗಾಯಾಳುವನ್ನು ಆಸ್ಪತ್ರೆಗೆ ಕರೆದೊಯ್ದರು.
ಕೈಕೊಟ್ಟ ಆ್ಯಂಬುಲೆನ್ಸ್: ಪೊಲೀಸ್ ಹೆದ್ದಾರಿ ಗಸ್ತು ವಾಹನದಲ್ಲೇ ಗಾಯಾಳು ಆಸ್ಪತ್ರೆಗೆ ದಾಖಲು
ಹಿಟ್ ಆ್ಯಂಡ್ ರನ್ನಿಂದಾಗಿ ಹೆದ್ದಾರಿಯಲ್ಲಿ ಗಂಭೀರವಾಗಿ ಗಾಯಗೊಂಡು ನರಳುತ್ತಿದ್ದ ವ್ಯಕ್ತಿಯನ್ನು ತಮ್ಮ ಹೆದ್ದಾರಿ ಗಸ್ತು ವಾಹನದಲ್ಲಿಯೇ ಆಸ್ಪತ್ರೆಗೆ ಸಾಗಿಸುವ ಮೂಲಕ ಪೊಲೀಸರು ಮಾನವೀಯತೆ ಮೆರೆದಿದ್ದಾರೆ.
ತುಮಕೂರು ಮತ್ತು ಕೊರಟಗೆರೆ ಮಾರ್ಗಮಧ್ಯದಲ್ಲಿರುವ ಗೊಲ್ಲಳ್ಳಿ ರಸ್ತೆಯಲ್ಲಿ ಅಪರಿಚಿತ ವಾಹನವೊಂದು ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿತ್ತು. ಈ ವೇಳೆ ದ್ವಿಚಕ್ರ ವಾಹನ ಸವಾರನ ಕಾಲಿಗೆ ಗಂಭೀರ ಗಾಯವಾಗಿತ್ತು. ಸ್ಥಳೀಯರು ಆ್ಯಂಬುಲೆನ್ಸ್ಗೆ ಕರೆ ಮಾಡಿದರೂ ಸ್ಪಂದನೆ ದೊರೆಯಲಿಲ್ಲ. ಇದೇ ವೇಳೆ ಬಂದ ಪೊಲೀಸ್ ಹೆದ್ದಾರಿ ಗಸ್ತು ವಾಹನದ ಸಿಬ್ಬಂದಿ ತಕ್ಷಣ ಕಾರ್ಯಪ್ರವೃತ್ತರಾಗಿ ಗಾಯಾಳುವನ್ನು ಆಸ್ಪತ್ರೆಗೆ ಕರೆದುಕೊಂಡು ಹೋದರು.
ಪೊಲೀಸ್ ಹೆದ್ದಾರಿ ಗಸ್ತು ವಾಹನ ಚಾಲಕ ಕಾಂತರಾಜು ಮತ್ತು ಎಎಸ್ಐ ಶಂಕ್ರಪ್ಪ ಅವರ ಕಾರ್ಯಕ್ಕೆ ಸ್ಪಂದನೆಗೆ ಸಾಕಷ್ಟು ಪ್ರಶಂಸೆ ವ್ಯಕ್ತವಾಗಿದೆ. ಅಲ್ಲದೆ ನಿರ್ಲಕ್ಷ್ಯ ತೋರಿದ 108 ಸಿಬ್ಬಂದಿಗೆ ಸ್ಥಳೀಯರಿಂದ ವ್ಯಾಪಕ ವಿರೋಧ ವ್ಯಕ್ತವಾಯಿತು.