ಶಿವಮೊಗ್ಗ: ಮೋದಿ ಹೆಸರು ಕೇಳಿದ್ರೆ ಕಾಂಗ್ರೆಸ್ನವರಿಗೆ ಭೇದಿ ಬರುತ್ತದೆ ಎಂದು ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್ ವ್ಯಂಗ್ಯವಾಡಿದರು.
ಸಮಾರಂಭವೊಂದರಲ್ಲಿ ಶಿವಮೊಗ್ಗ ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರಾಘವೇಂದ್ರ ಗೆಲುವು ಕಂಡದ್ದಕ್ಕೆ ಹರ್ಷ ವ್ಯಕ್ತಪಡಿಸಿದರು. ಈ ಚುನಾವಣೆಯಲ್ಲಿ 300ಕ್ಕೂ ಹೆಚ್ಚು ಸ್ಥಾನಗಳ ಗಡಿ ದಾಟಿದ್ದೇವೆ. ಅದರ ಪ್ರತಿಫಲವಾಗಿ ಇಡೀ ದೇಶದಲ್ಲಿ ಕಾಂಗ್ರೆಸ್ ಧೂಳಿಪಟವಾಗಿದೆ. ಮೋದಿ ಹೇಳಿದಂತೆ 22 ರಾಜ್ಯಗಳು ಕಾಂಗ್ರೆಸ್ ಮುಕ್ತ ಆಗಿವೆ ಎಂದು ಕುಟುಕಿದರು.
ನಿರೀಕ್ಷೆ ಮೀರಿ ನುಗ್ಗಿದ ಮೋದಿ ಸುನಾಮಿಗೆ ಸ್ಮೃತಿ ಇರಾನಿ ವಿರುದ್ಧ ರಾಹುಲ್ ಗಾಂಧಿ ಕೊಚ್ಚಿ ಹೋಗಿದ್ದಾರೆ. ಪಪ್ಪು ರಾಜಕೀಯ ಹಸುಳೆ . ತಲತಲಾಂತರದಿಂದ ಉಳಿಸಿಕೊಂಡುಬಂದ ಅವರ ಕ್ಷೇತ್ರವನ್ನು ಇಂದು ಕಳೆದುಕೊಂಡಿದ್ದಾರೆ ಎಂದರು. ಕೋತಿ ಹಾಗೆ ಕುಣಿಯುತ್ತಿದ್ದ ಸಿದ್ದರಾಮಯ್ಯ ಇಂದು ಉಸಿರಾಡಲು ಸಹ ಅಸಾಧ್ಯವಾಗಿದೆ ಎಂದರು.
ಸಿದ್ದರಾಮಯ್ಯ, ಯಡಿಯೂರಪ್ಪ ಹಾಗೂ ಮೋದಿ ವಿರುದ್ಧ ಏಕವಚನದಲ್ಲಿ ಆಡಿದ್ದ ದುರಹಂಕಾರದ ಮಾತುಗಳಿಗೆ ಜನರು ತಕ್ಕ ಪಾಠ ಕಲಿಸಿದ್ದಾರೆ. ಯಡಿಯೂರಪ್ಪ ನಾಯಕತ್ವದಲ್ಲಿ ಇತಿಹಾಸ ಸೃಷ್ಟಿಸಿದ್ದೇವೆ. ಯಡಿಯೂರಪ್ಪನವರು ರಾತ್ರಿ-ಹಗಲೆನ್ನದೆ, ದಣಿವರಿಯದೆ ಪಕ್ಷವನ್ನು ಕಟ್ಟಿದ್ದಕ್ಕೆ ಇಂದು ತಕ್ಕ ಪ್ರತಿಫಲ ಸಿಕ್ಕಿದೆ ಎಂದರು.
ಬಿಜೆಪಿಯವರಿಗೆ ಎರಡಂಕಿ ದಾಟಲು ಬಿಡುವುದಿಲ್ಲ ಎಂದು ಕಾಂಗ್ರೆಸ್ನವರು ಹೇಳುತ್ತಿದ್ದರು. ಆದರೆ ಅವರಿಗೇ ಎರಡಂಕಿ ದಾಟಲು ಸಾಧ್ಯವಾಗಿಲ್ಲ ಎಂದು ಕಿಚಾಯಿಸಿದರು.