ಮಂಗಳೂರು: ಲೋಕಸಭಾ ಚುನಾವಣೆಗೆ ಪೂರಕವಾಗಿ ದ.ಕ ಜಿಲ್ಲೆಯಲ್ಲಿ 55 ಸಾರ್ವಜನಿಕ ಕಾರ್ಯಕ್ರಮಗಳು ನಡೆಯಲಿವೆ. ಇದರಲ್ಲಿ ನರೇಂದ್ರ ಮೋದಿ ಅಥವಾ ಅಮಿತ್ ಶಾ ಕಾರ್ಯಕ್ರಮವೂ ಸೇರಿದೆ ಎಂದು ಶಾಸಕ ಸಂಜೀವ ಮಠಂದೂರು ತಿಳಿಸಿದ್ದಾರೆ.
ನಗರದ ಕೊಡಿಯಾಲ್ಬೈಲ್ನಲ್ಲಿರುವ ದ.ಕ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ನಡೆದ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ನರೇಂದ್ರ ಮೋದಿ ಅಥವಾ ಅಮಿತ್ ಶಾ ಮಂಗಳೂರಿಗೆ ಯಾವಾಗ ಬರುತ್ತಾರೆಂಬುದರ ಬಗ್ಗೆ ದಿನಾಂಕ ನಿಗದಿಯಾಗಿಲ್ಲ ಎಂದರು.
ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ನಳಿನ್ ಕುಮಾರ್ ಕಟೀಲ್ ಹ್ಯಾಟ್ರಿಕ್ ಸಾಧನೆ ಮಾಡಬೇಕೆಂದು ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಏಪ್ರಿಲ್ 3, 5ರಂದು ದ.ಕ ಜಿಲ್ಲೆಯ ಎಲ್ಲಾ ಬೂತ್ಗಳಲ್ಲಿ ಮನೆ ಮನೆ ಸಂಪರ್ಕ ಮಾಡುವ ಮೂಲಕ ಎಲ್ಲಾ ಮತದಾರರನ್ನು ಮುಟ್ಟುವ ಕೆಲಸವನ್ನು ಬಿಜೆಪಿ ಜನಪ್ರತಿನಿಧಿಗಳು ಮಾಡಲಿದ್ದಾರೆ. ಏ. 7ರಂದು ಸಂಸದರು ಮತ್ತು ನಮ್ಮ ಎಲ್ಲಾ ಶಾಸಕರು ಒಂದೊಂದು ಬೂತ್ಗಳಲ್ಲಿ ಬೆಳಗ್ಗಿನಿಂದ ಸಂಜೆಯವರೆಗೆ ಮಹಾಸಂಪರ್ಕ ಅಭಿಯಾನದ ಮೂಲಕ ಇಡೀ ಜಿಲ್ಲೆಯ ಎಲ್ಲಾ ಮತದಾರರನ್ನು ಮುಟ್ಟಲಿದ್ದೇವೆ. ಏ. 8ರಿಂದ 14ರವರೆಗೆ ಗ್ರಾಮೀಣ ಸಂವಾದ ಮತ್ತು ನಗರ ಸಂವಾದ ನಡೆಸಲಿದ್ದೇವೆ. 15-16 ರಂದು ಇಡೀ ಜಿಲ್ಲೆಯಲ್ಲಿ ರೋಡ್ ಶೋಗಳು ನಡೆಯಲಿವೆ ಎಂದರು.
ನಮ್ಮ ನಾಯಕ ಬಿ.ಎಸ್.ಯಡಿಯೂರಪ್ಪರ ಮೇಲೆ ಕಾಂಗ್ರೆಸ್ ಮುಖಂಡ ರಣದೀಪ್ ಸುರ್ಜೇವಾಲ ಡೈರಿಯ ಸುಳ್ಳು ಆರೋಪ ಮಾಡಿದ್ದಾರೆ. ಐಟಿ ಇಲಾಖೆ ಕೂಡಾ ಇದು ಸುಳ್ಳು ಎಂದು ರಿಪೋರ್ಟ್ ಮಾಡಿದೆ. ಮತದಾರರಿಗೆ ಗೊಂದಲ ಉಂಟುಮಾಡುವ ಕೆಲಸವನ್ನು ಇಂದು ಕಾಂಗ್ರೆಸ್ ಮಾಡುತ್ತಿದೆ. ಒಂದು ಹಂತದಲ್ಲಿ ಇದು ಅವರು ಸೋಲೊಪ್ಪಿಕೊಂಡಂತಿದೆ. ಈ ಹಿನ್ನೆಲೆಯಲ್ಲಿ ಸುರ್ಜೇವಾಲರ ಮೇಲೆ ಚುನಾವಣಾ ಆಯೋಗ ಶಿಸ್ತುಕ್ರಮ ತೆಗೆದುಕೊಳ್ಳಬೇಕು. ಅದರ ಜೊತೆಯಲ್ಲಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ಭಾರತೀಯ ಜನತಾ ಪಾರ್ಟಿ ಒತ್ತಾಯ ಮಾಡುತ್ತಿದೆ ಎಂದರು.
ಇನ್ನು ಕರ್ನಾಟಕದಲ್ಲಿ ಕುಮಾರಸ್ವಾಮಿ ಸರ್ಕಾರ ಅಧಿಕಾರ ದುರುಪಯೋಗ ಮಾಡುತ್ತಿದೆ. ಅಧಿಕಾರಿಗಳನ್ನು ಅವರಿಗೆ ಬೇಕಾದ ಹಾಗೆ ಉಪಯೋಗ ಮಾಡುತ್ತಿದೆ. ಇದರ ಬಗ್ಗೆಯೂ ಚುನಾವಣಾ ಆಯೋಗ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದರು.