ಮಂಗಳೂರು: ದ.ಕ.ಜಿಲ್ಲೆಯಲ್ಲಿ ಮರಳು ಪರವಾನಿಗೆಯನ್ನು ತಕ್ಷಣ ನವೀಕರಣ ಮಾಡಿ ಜಿಲ್ಲೆಯಲ್ಲಿ ಮರಳು ದೊರೆಯುವಂತೆ ಮಾಡಲಿ. ಇಲ್ಲದಿದ್ದಲ್ಲಿ ಯೂತ್ ಇಂಟಕ್ ಉಗ್ರ ಪ್ರತಿಭಟನೆ ನಡೆಸಲಾಗುತ್ತದೆ ಎಂದು ಯೂತ್ ಇಂಟಕ್ ರಾಜ್ಯಾಧ್ಯಕ್ಷ ವರುಣ್ ಕುಮಾರ್ ಎಸ್.ಕೆ.ತಿಳಿಸಿದರು.
ನಗರದ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿದ ಅವರು, ಜಿಲ್ಲಾಡಳಿತ ತಕ್ಷಣ ಈ ಬಗ್ಗೆ ಎಚ್ಚರ ವಹಿಸಿ ಮರಳು ಸಮಸ್ಯೆಯನ್ನು ಪರಿಹರಿಸಲಿ ಎಂದು ಹೇಳಿದರು. ದ.ಕ.ಜಿಲ್ಲೆಯಲ್ಲಿ ಕಳೆದ 12 ತಿಂಗಳಿನಿಂದ ಜಿಲ್ಲಾಡಳಿತ ಹಾಗೂ ಗಣಿ ಮತ್ತು ಭೂವಿಜ್ಞಾನ ಇಲಾಖೆ ಮರಳು ಪರವಾನಿಗೆ ನವೀಕರಿಸದ ಪರಿಣಾಮ ಅಕ್ರಮ ಮರಳುಗಾರಿಕೆ ಅವ್ಯವಹಾರವಾಗಿ ನಡೆಯುತ್ತಿದೆ ಎಂದರು.
ಯೂತ್ ಇಂಟಕ್ ರಾಜ್ಯಾಧ್ಯಕ್ಷ ವರುಣ್ ಕುಮಾರ್ ಎಸ್.ಕೆ ಇದೀಗ ಆರು ಸಾವಿರ ರೂ.ಗೆ ದೊರಕುವ ಮರಳು 20 ಸಾವಿರ ರೂ.ಗೆ ಏರಿದೆ. ಸಿಆರ್ ಝಡ್ನ ಮರಳನ್ನು ನೀಡದೆ ನಾನ್ ಸಿಆರ್ ಝಡ್ ಮರಳನ್ನು ಹೆಚ್ಚಿನ ಬೆಲೆಗೆ ಅಕ್ರಮವಾಗಿ ಮಾರಾಟ ಮಾಡಲಾಗುತ್ತದೆ. ಹಾಗಾದರೆ ಹೆಚ್ಚಿನ ಬೆಲೆ ನೀಡಿದರೆ ಮರಳು ದೊರಕುತ್ತದೆ ಎಂದರೆ ಯಾಕೆ ಇಲ್ಲಿನ ಜನಪ್ರತಿನಿಧಿಗಳು ಚಕಾರ ಎತ್ತುತ್ತಿಲ್ಲ ಎಂದು ಹೇಳಿದರು.
ಮರಳು ಸಮಸ್ಯೆಯಿಂದ ಕಟ್ಟಡ ಕಾಮಗಾರಿ ಸಂಪೂರ್ಣ ಸ್ಥಗಿತಗೊಂಡಿದ್ದು, ಕೂಲಿ ಕಾರ್ಮಿಕರು, ಬಿಲ್ಡರ್, ಸೆಂಟ್ರಿಂಗ್, ಇಂಜಿನಿರ್ಯಸ್, ಪೇಯಿಂಟಿಂಗ್, ಸಿಮೆಂಟ್ ವ್ಯಾಪಾರಿಗಳು, ಗುತ್ತಿಗೆದಾರರು ಹೀಗೆ ಸಾಕಷ್ಟು ಜನರು ಸಂಕಷ್ಟಕ್ಕೊಳಗಾಗಿದ್ದಾರೆ. ಈ ನಡುವೆ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲು ಅವರು ಮುಂದಿನ ದಿನಗಳಲ್ಲಿ ಜಿಲ್ಲೆಯಲ್ಲಿ ಯುನಿಟ್ಗೆ 2,000 ಸಾವಿರ ರೂ.ಗೆ ಮರಳು ಸರಬರಾಜು ಮಾಡಲಾಗುತ್ತದೆ ಎಂದು ಹೇಳಿದ್ದಾರೆ. ಈ ಹೇಳಿಕೆ ಯಾವ ಆಧಾರದ ಮೇಲೆ ಹೇಳಿದ್ದಾರೆ ಎಂದು ತಿಳಿಯುತ್ತಿಲ್ಲ. ಜಿಲ್ಲಾಡಳಿತ ಮರಳು ಪರವಾನಿಗೆ ನವೀಕರಣ ಮಾಡದಿರುವುದು ಪರೋಕ್ಷವಾಗಿ ಅವ್ಯವಹಾರಕ್ಕೆ ದಾರಿ ಮಾಡಿಕೊಟ್ಟಂತೆ ಕಾಣುತ್ತಿದೆ. ಜಿಲ್ಲೆಯ ಮರಳು ಸಮಸ್ಯೆಯ ವಿರುದ್ಧ ನಾಳೆ ಕಟ್ಟಡ ಕಾರ್ಮಿಕರು ಜಂಟಿಯಾಗಿ ನಾಳೆ ನಡೆಸುವ ಪ್ರತಿಭಟನೆಗೆ ಇಂಟಕ್ ಸಂಪೂರ್ಣ ಬೆಂಬಲ ನೀಡುತ್ತದೆ ಎಂದರು.
ಮಾಜಿ ಮೇಯರ್ ಕವಿತಾ ಸನಿಲ್ ಮಾತನಾಡಿ, ಹಿಂದೆ ಕಾಂಗ್ರೆಸ್ ಸರ್ಕಾರ ಇರುವಾಗ ಮಾಜಿ ಸಚಿವರಾದ ರಮಾನಾಥ ರೈ ಹಾಗೂ ಯು.ಟಿ.ಖಾದರ್ ಅವರು ಮರಳು ಮಾಫಿಯಾ ನಡೆಸುತ್ತಿದ್ದರು ಎಂದು ಬಿಜೆಪಿಗರು ಆರೋಪಿಸಿ ಯಾವಾಗಲೂ ಪ್ರೆಸ್ ಮೀಟ್ ಕರೆಯುತ್ತಿದ್ದರು. ಈಗ ಅವರದ್ದೇ ಸರ್ಕಾರ ಇದೆ. ಹಾಗಾದರೆ ಇವರೂ ಮರಳು ಮಾಫಿಯಾ ನಡೆಸುತ್ತಿದ್ದಾರೆಯೇ ಎಂದು ಪ್ರಶ್ನಿಸಿದರು.