ಮಂಗಳೂರು: 'ಅಕ್ಷರ ಸಂತ' ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬರಿಗೆ ಪಶುಸಂಗೋಪನೆ, ಮೀನುಗಾರಿಕೆ ಹಾಗೂ ಅಲ್ಪಸಂಖ್ಯಾತ ಇಲಾಖೆಯ ಕಾರ್ಯದರ್ಶಿ ಹಾಗೂ ದ.ಕ. ಮಾಜಿ ಜಿಲ್ಲಾಧಿಕಾರಿ ಎ.ಬಿ. ಇಬ್ರಾಹೀಂ ಇಂದು ಸನ್ಮಾನ ಮಾಡಿದರು.
'ಪದ್ಮಶ್ರೀ ಪುರಸ್ಕೃತ' ಹರೇಕಳ ಹಾಜಬ್ಬರಿಗೆ ಸನ್ಮಾನ ಮಾಡಿದ, ಮಾಜಿ ಡಿಸಿ, ಎ.ಬಿ.ಇಬ್ರಾಹೀಂ ಕಿತ್ತಳೆ ಮಾರಾಟ ಮಾಡಿ ಕನ್ನಡ ಶಾಲೆ ನಿರ್ಮಿಸಿ ಸರ್ಕಾರಕ್ಕೆ ಹಸ್ತಾಂತರ ಮಾಡಿರುವ ಹರೇಕಳ ಹಾಜಬ್ಬರಿಗೆ ಪದ್ಮಶ್ರೀ ಪ್ರಶಸ್ತಿ ಒಲಿದು ಬಂದಿರುವ ಹಿನ್ನೆಲೆಯಲ್ಲಿ ನಗರದ ಪಾಂಡೇಶ್ವರದಲ್ಲಿರುವ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಲ್ಲಿ ಎ.ಬಿ. ಇಬ್ರಾಹೀಂ ಇಂದು ಸನ್ಮಾನ ಮಾಡಿದರು.
ಬಳಿಕ ಮಾತನಾಡಿದ ಅವರು, ಹರೇಕಳ ಹಾಜಬ್ಬರಿಗೆ ಪದ್ಮಶ್ರೀ ಪ್ರಶಸ್ತಿ ದೊರೆತಿರೋದು ಹೆಮ್ಮೆಯ ವಿಚಾರ. ಸಮಾಜದಲ್ಲಿ ಹಲವಾರು ಮಂದಿ ಸಾಧಕರು ಇರುತ್ತಾರೆ. ಆದರೆ ಎಲೆಮರೆಯ ಕಾಯಿಯಂತಿರುವ ಹಾಜಬ್ಬರನ್ನು ಗುರುತಿಸಿರುವ ಕೇಂದ್ರ ಸರ್ಕಾರದ ಕಾರ್ಯ ಶ್ಲಾಘನೀಯ ಎಂದರು.
ಅವಿದ್ಯಾವಂತನಾದರೂ ಹರೇಕಳ ಹಾಜಬ್ಬ ಶಿಕ್ಷಣಕ್ಕೆ ಮಹತ್ವ ನೀಡಿ ಶಾಲೆಯನ್ನು ನಿರ್ಮಿಸಿದ್ದಾರೆ. ಈ ವರ್ಷ ಅವರ ಶಾಲೆಯನ್ನು ಇಂಗ್ಲಿಷ್ ಮಾಧ್ಯಮ ದರ್ಜೆ ಮಾಡಲಾಗುತ್ತದೆ. ಈ ಬಗ್ಗೆ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳೊಂದಿಗೆ ಮಾತನಾಡಿದ್ದೇನೆ. ಅದೇ ರೀತಿ ಮುಂದಿನ ವರ್ಷ ಪಿಯುಸಿ ತರಗತಿಗಳನ್ನು ಆರಂಭಿಸುವ ಬಗ್ಗೆಯೂ ಚಿಂತನೆ ನಡೆಸಲಾಗುತ್ತದೆ ಎಂದು ಎ.ಬಿ ಇಬ್ರಾಹೀಂ ಹೇಳಿದರು.