ಹುಬ್ಬಳ್ಳಿ: ಜನರ ನಂಬಿಕೆಯನ್ನು ಬಂಡವಾಳ ಮಾಡಿಕೊಂಡು ನಕಲಿ ಔಷಧ ಮಾರಾಟ ಮಾಡುತ್ತಿದ್ದ ಮೂವರು ಆರೋಪಿಗಳಿಗೆ ಒಂದನೇ ಸೆಷನ್ಸ್ ಕೋರ್ಟ್ ಮೂರು ವರ್ಷ ಜೈಲು ಶಿಕ್ಷೆ, ತಲಾ 10 ಸಾವಿರ ರೂ. ದಂಡ ವಿಧಿಸಿದೆ.
ಹುಬ್ಬಳ್ಳಿಯ ಜೆಸಿ ನಗರದ ರಾಧಾ ಫಾರ್ಮಾ ಪ್ರೊಡಕ್ಷನ್ ಔಷಧ ಮಳಿಗೆ ಮಾಲೀಕರಾದ ಗೋವಿಂದ ತ್ರಿವೇದಿ, ಜಗದೀಶ ತ್ರಿವೇದಿ ಮತ್ತು ಬೆಂಗಳೂರಿನ ದೀಪಕ್ ಇಂಟರ್ನ್ಯಾಷನಲ್ ಫಾರ್ಮಾ ಕಂಪನಿ ಮಾಲೀಕ ವಿಕ್ರಮ ಭೋಜಾನಿಗೆ 3 ವರ್ಷ ಜೈಲು ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದ್ದಾರೆ.
2005ರಲ್ಲಿ ಔಷಧ ಪರಿವೀಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಶರಣಬಸಪ್ಪ ಹನುಮನಾಳ ಅವರು ತಪಾಸಣೆ ನಡೆಸಿದಾಗ ಐದು ಬಗೆಯ ನಕಲಿ ಔಷಧಗಳು ದೊರೆತಿದ್ದವು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶ ಸುಶಾಂತ ಚೌಗಲೆ, ಆರೋಪಿಗಳಿಗೆ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ. ಆದರೆ, ಪಿಕಾಕ್ ಫಾರ್ಮಾ ಕಂಪನಿಯ ಸತೀಶ ಶರ್ಮಾ ತಲೆಮರೆಸಿಕೊಂಡಿದ್ದು, ಪ್ರಕರಣ ಪ್ರತ್ಯೇಕಿಸಲಾಗಿದೆ.