ಹುಬ್ಬಳ್ಳಿ : ಕೊರೊನಾ ಮಹಾಮಾರಿಯ ಹಾವಳಿಯಿಂದ ಜನರು ತತ್ತರಿಸಿದ್ದು, ಲಾಕ್ಡೌನ್ ತೆರವಿನ ಬಳಿಕ ಜನಜೀವನ ಸಹಜ ಸ್ಥಿತಿಗೆ ಬರುತ್ತಿದೆ. ಆದರೆ, ಸರ್ಕಾರದ ಯೋಜನೆಗಳ ಪುನಾರಂಭಕ್ಕೆ ಮಾತ್ರ ಇನ್ನೂ ಕೊರೊನಾ ಹಾವಳಿಯ ನೆಪವಾಗಿಯೇ ಉಳಿದಿದೆ. ಇದರಿಂದಾಗಿ ಜನರಿಗೆ ಅನುಕೂಲಕರವಾಗಬೇಕಿದ್ದ ಯೋಜನೆಗಳು ಹಳ್ಳ ಹಿಡಿದಿವೆ. ಇದನ್ನೇ ಕೆಲವರು ದುರ್ಬಳಕೆ ಮಾಡಿಕೊಂಡು ಹಗಲು ದರೋಡೆ ಮಾಡುತ್ತಿರುವ ಆರೋಪ ಕೇಳಿ ಬರುತ್ತಿದೆ.
ವಾಣಿಜ್ಯ ನಗರಿ ಹುಬ್ಬಳ್ಳಿಯ ರೈಲ್ವೆ ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಅನುಕೂಲ ಆಗಲಿ ಅನ್ನೋ ಕಾರಣಕ್ಕೆ ಕಳೆದ ವರ್ಷ ಜನವರಿಯಲ್ಲಿ ಪ್ರಿಪೇಯ್ಡ್ ಆಟೋ ಸೇವೆಯನ್ನು ಆರಂಭಿಸಲಾಗಿತ್ತು. 1.6 ಕಿ.ಮೀಗೆ 28 ರೂಪಾಯಿ ಪಡೆಯುತ್ತಿದ್ದ ಆಟೋ ಚಾಲಕರು ತಮ್ಮ ಪ್ರಯಾಣಿಕರನ್ನು ಕರೆದುಕೊಂಡು ಹೋಗುತ್ತಿದ್ದರು.
ಆರಂಭಿಕ ಹಂತದಲ್ಲಿ ಅವಳಿ ನಗರದಲ್ಲಿ ಓಡಾಡಿದ ಆಟೋಗಳು ಕೊರೊನಾ ಆತಂಕದಿಂದಾಗಿ ಸೇವೆಯನ್ನು ಸ್ಥಗಿತಗೊಳಿಸಿದ್ದವು. ಆದರೆ, ಇದೀಗ ರೈಲುಗಳು ಆರಂಭವಾದ್ರೂ ಪ್ರಿಪೇಯ್ಡ್ ಆಟೋ ಸೇವೆ ಆರಂಭವಾಗಿಲ್ಲ. ಇದರಿಂದ ಜನರಿಗೆ ಅನಾನುಕೂಲ ಆಗುತ್ತಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.