ಧಾರವಾಡ: ರಾಜ್ಯ ಪಶ್ಚಿಮ ಪದವೀಧರ ಚುನಾವಣೆಯ ಮತ ಏಣಿಕೆ ನಾಳೆ ಬೆಳಿಗ್ಗೆ 8 ಗಂಟೆಯಿಂದ ಕೃಷಿ ವಿಶ್ವವಿದ್ಯಾಲಯದ ಆವರಣದಲ್ಲಿ ಜರುಗಲಿದೆ ಎಂದು ಬೆಳಗಾವಿ ವಿಭಾಗದ ಪ್ರಾದೇಶಿಕ ಆಯುಕ್ತ ಚುನಾವಣಾಧಿಕಾರಿ ಆಮ್ಲಾನ್ ಆದಿತ್ಯ ಬಿಸ್ವಾಸ್ ತಿಳಿಸಿದರು.
ಧಾರವಾಡ, ಗದಗ, ಹಾವೇರಿ ಮತ್ತು ಉತ್ತರ ಕನ್ನಡ ಜಿಲ್ಲೆಗಳನ್ನು ಕರ್ನಾಟಕ ಪಶ್ಚಿಮ ಪದವೀಧರ ಮತಕ್ಷೆತ್ರ ಒಳಗೊಂಡಿದೆ. ಒಟ್ಟು 74,268 ನೋಂದಾಯಿತ ಮತದಾರ ಪೈಕಿ 35,660 ಪುರುಷ, 16,406 ಮಹಿಳೆಯರು ಮತ್ತು ಇತರೆ ಒಂದು ಹಾಗೂ ಒಂದು ಅಂಚೆ ಮತಪತ್ರ ಸೇರಿದಂತೆ ಒಟ್ಟು 52,068 ಜನ ಮತದಾರರು ತಮ್ಮ ಮತದಾನದ ಹಕ್ಕು ಚಲಾಯಿಸಿದ್ದಾರೆ. ಒಟ್ಟು ಶೇ. 70.11 ಪ್ರಮಾಣದಲ್ಲಿ ಮತದಾನವಾಗಿದೆ ಎಂದು ಮಾಹಿತಿ ನೀಡಿದರು.
64 ಸಿಬ್ಬಂದಿ ನೇಮಕ
ನಾಳೆ ಬೆಳಗ್ಗೆ 8 ಗಂಟೆಯಿಂದ ಮತ ಎಣಿಕೆ ಕಾರ್ಯ ಪ್ರಾರಂಭವಾಗುತ್ತದೆ. ಮತ ಎಣಿಕೆಗಾಗಿ ಎರಡು ಕೊಠಡಿಗಳನ್ನು ನಿಗದಿಗೊಳಿಸಿದ್ದು, 14 ಟೇಬಲ್ಗಳಲ್ಲಿ ಮತ ಎಣಿಕೆ ಕಾರ್ಯ ನಡೆಯುತ್ತದೆ. ಓರ್ವ ಚುನಾವಣಾಧಿಕಾರಿ, 4 ಜನ ಸಹಾಯಕ ಚುನಾವಣಾಧಿಕಾರಿಗಳು ಮತ್ತು ಹೆಚ್ಚುವರಿಯಾಗಿ 4 ಜನ ಚುನಾವಣಾಧಿಕಾರಿಗಳು ಸೇರಿದಂತೆ ವಿವಿಧ ಕಾರ್ಯಗಳಿಗಾಗಿ ಒಟ್ಟು 64 ಸಿಬ್ಬಂದಿ ನೇಮಿಸಲಾಗಿದೆ ಎಂದು ತಿಳಿಸಿದರು.
ಮತ ಎಣಿಕೆ ಕೇಂದ್ರಕ್ಕೆ ಬರುವ ಪ್ರತಿಯೊಬ್ಬರು ಕಡ್ಡಾಯವಾಗಿ ಮಾಸ್ಕ್ ಧರಿಸಿರಬೇಕು ಮತ್ತು ಸಾಮಾಜಿಕ ಅಂತರ ಕಾಪಾಡಬೇಕು ಹಾಗೂ ಪ್ರತಿ ಗಂಟೆಗೊಮ್ಮೆ ಸ್ಯಾನಿಟೈಸರ್ ಬಳಸಬೇಕು ಎಂದು ಹೇಳಿದರು.
ಮತ ಎಣಿಕೆ ಕೇಂದ್ರದಲ್ಲಿ ಭದ್ರತೆ ವ್ಯವಸ್ಥೆ
ಮತ ಕೇಂದ್ರದಲ್ಲಿ ಮತ ಪೆಟ್ಟಿಗೆಗಳನ್ನು ಭದ್ರತಾ ಕೊಠಡಿಯಲ್ಲಿ ಇರಿಸಲಾಗಿದೆ. ಎಸಿ ಹಾಗೂ ಎಸಿಪಿ ನೇತೃತ್ವದಲ್ಲಿ ಭದ್ರತೆಯನ್ನು ಒದಗಿಸಲಾಗಿದೆ. ಮತಎಣಿಕೆ ಕೇಂದ್ರದಲ್ಲಿ ಸಿಸಿಟಿವಿ ಅಳವಡಿಸಲಾಗಿದ್ದು ದಿನದ 24 ಗಂಟೆ ಪೊಲೀಸ್ ತಂಡ ಇದರ ನಿಗಾವಹಿಸಿದೆ. ಭದ್ರತಾ ಕೊಠಡಿಗೆ ಒಂದೇ ಪ್ರವೇಶ ದ್ವಾರವಿದ್ದು, ಅಭ್ಯರ್ಥಿಗಳು ಭದ್ರತಾ ಕೊಠಡಿಯನ್ನು ಹೊರಗಿನಿಂದ ತಪಾಸಣೆ ಮಾಡಲು ಅವಕಾಶ ಕಲ್ಪಿಸಲಾಗಿದೆ.
ಶುಷ್ಕ ದಿನ
ಮತ ಎಣಿಕೆ ಕಾರ್ಯ ನಿಮಿತ್ತ ಮುಂಜಾಗ್ರತಾ ದೃಷ್ಟಿಯಿಂದ ನವೆಂಬರ್ 10, 2020ರ ಬೆಳಗ್ಗೆ 8 ಗಂಟೆಯಿಂದ ನವೆಂಬರ್ 11ರ ಬೆಳಗ್ಗೆ 8 ಗಂಟೆಯವರೆಗೆ ಮದ್ಯಪಾನ, ಮದ್ಯ ಮಾರಾಟ, ಮದ್ಯ ಸಾಗಾಣಿಕೆ ಮತ್ತು ಮದ್ಯ ಸಂಗ್ರಹಣೆಯನ್ನು ನಿಷೇಧಿಸಿ ಸದರಿ ದಿನಗಳಂದು ಶುಷ್ಕ ದಿವಸಗಳೆಂದು ಘೋಷಿಸಿ ಡಿಸಿ ಆದೇಶಿಸಿದ್ದಾರೆ.
274 ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ ನಿಯೋಜನೆ
ಮತ ಎಣಿಕೆ ದಿನ ಶಾಂತಿ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡಲು 4 ಸಹಾಯಕ ಪೊಲೀಸ್ ಆಯುಕ್ತರು, 12 ಪೊಲೀಸ್ ಇನ್ಸಪೆಕ್ಟರ್, 16 ಪೊಲೀಸ್ ಸಬ್ ಇನ್ಸಪೆಕ್ಟರ್, 31 ಸಹಾಯಕ ಸಬ್ ಇನ್ಸಪೆಕ್ಟರ್, 71 ಹೆಡ್ ಕಾನ್ಸಟೇಬಲ್, 126 ಪೊಲೀಸ್ ಪೇದೆ, 14 ಜನ ಮಹಿಳಾ ಪೊಲೀಸ್ ಸಿಬ್ಬಂದಿ ಸೇರಿ ಒಟ್ಟು 274 ಜನ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳನ್ನು ನೇಮಿಸಲಾಗಿದ್ದು ಮೂರು ಹಂತದ ಭದ್ರತಾ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ ಎಂದು ಧಾರವಾಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಹುಬ್ಬಳ್ಳಿ-ಧಾರವಾಡ ಮಹಾನಗರ ಉಪ ಪೊಲೀಸ್ ಆಯುಕ್ತ ಪಿ. ಕೃಷ್ಣಕಾಂತ ಹೇಳಿದರು.
ಗುರುತಿನ ಚೀಟಿ ಕಡ್ಡಾಯ
ನಾಳೆ ಜರುಗುವ ಮತ ಎಣಿಕೆ ಕಾರ್ಯಕ್ಕೆ ಆಗಮಿಸುವ ಸಿಬ್ಬಂದಿ, ರಾಜಕೀಯ ಪಕ್ಷಗಳ ಮತ ಎಣಿಕೆ ಏಜೆಂಟರು, ಮಾಧ್ಯಮ ಪ್ರತಿನಿಧಿಗಳು ಸೇರಿದಂತೆ ಆಗಮಿಸುವ ಎಲ್ಲರೂ ಚುನಾವಣಾಧಿಕಾರಿಗಳು ನೀಡಿರುವ ಚುನಾವಣಾ ಕಾರ್ಯದ ಗುರುತಿನ ಪತ್ರ (ಪಾಸ್)ವನ್ನು ಕಡ್ಡಾಯವಾಗಿ ಧರಿಸಿರಬೇಕು ಎಂದು ತಿಳಿಸಿದರು.