ಹುಬ್ಬಳ್ಳಿ : ಬಿಜೆಪಿ ಮುಖಂಡನೊಬ್ಬ ಮೊದಲ ಪತ್ನಿ ಇದ್ರೂ ಅವರಿಗೆ ತಿಳಿಯದಂತೆ 2ನೇ ಮದುವೆಯಾಗಿ ಅವಳ ಬಳಿ ಪಡೆದಿದ್ದ ಹಣವನ್ನ ಮರಳಿ ಕೇಳಿದ್ದಕ್ಕೆ ಪತ್ನಿಯನ್ನೇ ರಸ್ತೆಯಲ್ಲೇ ಓಡಾಡಿಸಿ ಹಿಗ್ಗಾಮುಗ್ಗಾ ಥಳಿಸಿದ ಘಟನೆ ನಗರದ ಅಕ್ಷಯ ಕಾಲೋನಿಯಲ್ಲಿ ನಡೆದಿದೆ.
ಕಲಘಟಗಿ ತಾಲೂಕಿನ ಹಿರೇಹೊನ್ನಳ್ಳಿಯ ಬಿಜೆಪಿ ಮುಖಂಡ ಬಸವರಾಜ ಕೆಲಗೇರಿ ಹಾಗೂ ಆತನ ಮೊದಲ ಪತ್ನಿ ಹಾಗೂ ಆತನ ಮಕ್ಕಳು 2ನೇ ಪತ್ನಿ ಹಾಗೂ ಮಕ್ಕಳ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ.
ಬಿಜೆಪಿ ಮುಖಂಡನ ಎರಡನೇ ಮದುವೆ ಅವಾಂತರ ಬಸವರಾಜ್ ಕೆಲಗೇರಿಗೆ ತನ್ನ ಮೊದಲ ಪತ್ನಿ ಇದ್ದರೂ ಅವಳು ಮೃತಪಟ್ಟಿದ್ದಾಳೆ ಎಂದು ಅನಿತಾ ರೇವಣಕರ್ ಎಂಬ ಮಹಿಳೆಯನ್ನು ಪ್ರೀತಿಸಿ 2012ರಲ್ಲಿ ಮನೆಯಲ್ಲೆಯೇ ಮದುವೆಯಾಗಿದ್ದ. ಮದುವೆ ನಂತರ ಮೊದಲ ಪತ್ನಿಯ ಕಣ್ತಪ್ಪಿಸಿ ಕೆಲ ವರ್ಷಗಳ ಕಾಲ ಅನಿತಾಳ ಜೊತೆ ಸಂಸಾರ ನಡೆಸಿದ್ದ.
ಅಲ್ಲದೆ 2ನೇ ಪತ್ನಿಯ ಸೈಟ್ ಮಾರಿಸಿ 28 ಲಕ್ಷ ರೂಪಾಯಿ ಹಣ ಪಡೆದಿದ್ದ. ಸದ್ಯ ಆ ಹಣವನ್ನ ಮರಳಿಸುವಂತೆ ಅನಿತಾ ಕೇಳಿದ್ದಕ್ಕೆ ಹಣ ಕೊಡುವುದಾಗಿ ಮನೆಗೆ ಕರೆಸಿ ಹಿಗ್ಗಾಮುಗ್ಗಾ ಹಲ್ಲೆ ಮಾಡಿದ್ದಾರೆ.
ಈ ಕುರಿತು ಅನಿತಾ ಮೊದಲು ಕಲಘಟಗಿ ಠಾಣೆಯಲ್ಲಿ ಹಾಗೂ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಆದರೆ, ಬಿಜೆಪಿ ನಾಯಕರ ಕೃಪಾ ಕಟಾಕ್ಷದಿಂದಾಗಿ ಬಸವರಾಜನನ್ನ ಪೊಲೀಸರು ಈವರೆಗೂ ಬಂಧಿಸಿಲ್ಲ ಎಂದು ಅನಿತಾ ಆರೋಪಿಸಿದ್ದಾರೆ.