ದಾವಣಗೆರೆ:ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯ ಮೃತದೇಹ ನೀಡಲು ನಾಲ್ಕು ಸಾವಿರ ರೂಪಾಯಿಯನ್ನು ಜಿಲ್ಲಾಸ್ಪತ್ರೆಯ ಶವಾಗಾರದ ಸಿಬ್ಬಂದಿ ಪಡೆದ ಆರೋಪ ಕೇಳಿ ಬಂದಿದೆ.
ವಿಷ್ಣು ಅಭಿಮಾನಿಯ ಮೃತದೇಹ ನೀಡಲು 4 ಸಾವಿರ ರೂ. ಪಡೆದ್ರಾ ಜಿಲ್ಲಾಸ್ಪತ್ರೆ ಸಿಬ್ಬಂದಿ?
ವಿಷ್ಣುವರ್ಧನ್ ಅಭಿಮಾನಿಯೋರ್ವ ಸಾಲ ಬಾಧೆಯಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ದಾವಣಗೆರೆಯಲ್ಲಿ ನಡೆದಿದೆ. ಆದರೆ, ವ್ಯಕ್ತಿಯ ಮೃತದೇಹ ನೀಡಲು ಜಿಲ್ಲಾಸ್ಪತ್ರೆಯ ಶವಾಗಾರದ ಸಿಬ್ಬಂದಿ ನಾಲ್ಕು ಸಾವಿರ ರೂ. ಹಣ ಪಡೆದಿದ್ದಾರೆ ಎನ್ನಲಾಗುತ್ತಿದೆ.
ವಿಷ್ಣುವರ್ಧನ್ ಅಭಿಮಾನಿ ಲೋಕೇಶ್ ಸಾಲದ ಬಾಧೆ ಹಿನ್ನೆಲೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದರು. ಜಿಲ್ಲಾಸ್ಪತ್ರೆಯಲ್ಲಿ ಕೋವಿಡ್ ಟೆಸ್ಟ್ ಕೂಡ ನಡೆಸಲಾಯಿತು. ರಿಪೋರ್ಟ್ ನೆಗೆಟಿವ್ ಎಂದು ಬಂದಿತ್ತು. ಆದ್ರೆ ಆಸ್ಪತ್ರೆಯಲ್ಲಿ ಶವಾಗಾರದ ಬಳಿ ಮೃತದೇಹ ನೀಡಲು ಸಂಬಂಧಿಕರಿಂದ ಹಣ ಪಡೆದ ದೂರು ಕೇಳಿ ಬಂದಿದ್ದು, ಸಂಬಂಧಿಕರು ಹಣ ಕೊಟ್ಟ ವಿಡಿಯೋ ಈಗ ವೈರಲ್ ಆಗಿದೆ.
ಹಣ ಕೊಡದಿದ್ದರೆ ಮೃತದೇಹವನ್ನು ಸರಿಯಾದ ರೀತಿಯಲ್ಲಿ ಪ್ಯಾಕ್ ಮಾಡುವುದಿಲ್ಲ. ಹಣ ಕೊಟ್ಟರೆ ಸರಿಯಾಗಿ ಬಟ್ಟೆಯಿಂದ ಸುತ್ತಿ ನೀಡುತ್ತಾರೆ. ಜಿಲ್ಲಾಸ್ಪತ್ರೆಯಲ್ಲಿ ಇಷ್ಟೆಲ್ಲಾ ನಡೆಯುತ್ತಿದ್ದರೂ ಜಿಲ್ಲಾಡಳಿತ ಕಣ್ಮುಚ್ಚಿ ಕುಳಿತಿದೆ ಎಂದು ಜನರು ಆರೋಪಿಸಿದ್ದಾರೆ. ಲೋಕೇಶ್ ಅಂತ್ಯಕ್ರಿಯೆಯನ್ನು ಕೆಟಿಜೆ ನಗರದ ರುದ್ರಭೂಮಿಯಲ್ಲಿ ನೆರವೇರಿಸಲಾಯಿತು.