ಕರ್ನಾಟಕ

karnataka

ETV Bharat / city

ಶಿಕ್ಷಕರ ವರ್ಗಾವಣೆ ನಿಯಂತ್ರಣ ವಿಧೇಯಕ - 2020ಕ್ಕೆ ವಿಧಾನ ಪರಿಷತ್ ಅಂಗೀಕಾರ

ವರ್ಗಾವಣೆ ಸಮಯದಲ್ಲಿ ಕುಂದು-ಕೊರತೆ ಆಲಿಸಲು ಜಿಲ್ಲಾ ಮಟ್ಟದಲ್ಲಿ ಅಧಿಕಾರಯೊಬ್ಬರನ್ನು ನೇಮಿಸಲಾಗುತ್ತದೆ. ಆತನ ಬಳಿ ಸಮಸ್ಯೆ ಹೇಳಿಕೊಳ್ಳಬಹುದು. ಅಲ್ಲಿಯೂ ಆಗದಿದ್ದಲ್ಲಿ ಮೇಲ್ಮಟ್ಟದ ಅಧಿಕಾರಿಗೆ ಹೇಳಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ ಎಂದು ಸುರೇಶ್​​ ಕುಮಾರ್​ ಹೇಳಿದರು.

By

Published : Mar 18, 2020, 8:50 PM IST

teacher-transfer-control-compliance-2020
ವಿಧಾನ ಪರಿಷತ್

ಬೆಂಗಳೂರು: ಶಿಕ್ಷಕರ ಕಡ್ಡಾಯ ವರ್ಗಾವಣೆಯಲ್ಲಿನ ಕಡ್ಡಾಯ ಅಂಶವನ್ನು ತೆಗೆದುಹಾಕುವ ಕರ್ನಾಟಕ ಸಿವಿಕ್ ಸೇವೆಗಳು ಶಿಕ್ಷಕರ ವರ್ಗಾವಣೆ ನಿಯಂತ್ರಣ ವಿಧೇಯಕ-2020ಕ್ಕೆ ವಿಧಾನ ಪರಿಷತ್ ಅಂಗೀಕಾರ ನೀಡಿದೆ.

ವಿಧಾನ ಪರಿಷತ್​​ನಲ್ಲಿ ವಿಧೇಯಕ ಮಂಡಿಸಿಡಿದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್, ಕಡ್ಡಾಯ ವರ್ಗಾವಣೆಗೆ ಶಿಕ್ಷಕರ ಪರದಾಟ ನೋಡಿದ್ದೇನೆ. ಕಡ್ಡಾಯ ನಿವೃತ್ತಿ, ಕಡ್ಡಾಯ ರಜೆ ಅಂದರೆ ಶಿಕ್ಷೆ, ಆದರೆ ಕಡ್ಡಾಯ ವರ್ಗಾವಣೆ ಅಂದರೆ ಏನು ಎಂಬುದನ್ನು ಯೋಚಿಸಿ ವರ್ಗಾವಣೆ ಮಾಡಬೇಕು. ಹಾಗಾಗಿ ಈ ವಿಧೇಯಕ ತರಲಾಗಿದೆ ಎಂದರು.

ಜೂನ್ ನಂತರ ವರ್ಗಾವಣೆ ಆಗಬಾರದು. ಏಪ್ರಿಲ್, ಮೇನಲ್ಲೇ ವರ್ಗಾವಣೆ ಪ್ರಕ್ರಿಯೆ ಮುಗಿಯಬೇಕು. ನಂತರ ಪಾಠಕ್ಕೆ ಸೀಮಿತವಾಗಿರಬೇಕು. ಸಮಗ್ರ ಶಿಕ್ಷಕರ ಹಿತ ಗಮನದಲ್ಲಿ‌ರಿಸಿ ಕಾಯ್ದೆ ರಚಿಸಿದ್ದೇನೆ. ವರ್ಗಾವಣೆಗೆ ಎ, ಬಿ, ಸಿ ವಲಯ ಇದೆ. 'ಸಿ' ಅಂದರೆ ಯಾರೂ ಹೋಗದ ಗ್ರಾಮೀಣ ಪ್ರದೇಶಗಳು, 'ಬಿ' ಅಂದರೆ ಮಧ್ಯಮ,‌ 'ಎ' ಅಂದರೆ ‌ನಗರಗಳು ಎಂದು ಹೇಳಿದರು.

ಮೊದಲ ನೇಮಕಾತಿ ಹೊಸದಾಗಿ ಆದಾಗ 'ಸಿ' ವಲಯದಲ್ಲೇ ಕೆಲಸ‌ ಮಾಡಬೇಕು‌. 10 ವರ್ಷ ಕೆಲಸ ಮಾಡಿದ ನಂತರ 'ಬಿ', 'ಎ' ವಲಯಕ್ಕೆ ಕಳಿಸಲಾಗುತ್ತದೆ. ಹೆಚ್ಚುವರಿ ಶಿಕ್ಷಕರಿರುವ ಕಡೆ ವರ್ಗಾವಣೆ ಹಾಗೂ ವಲಯವಾರು ವರ್ಗಾವಣೆ ಮಾಡುವ ತೀರ್ಮಾನ ಮಾಡಲಾಗಿದೆ. ಒಟ್ಟು 30 ಸಾವಿರ ಶಿಕ್ಷಕರ ಕೊರತೆ (ತಾಲೂಕಿಗೆ ಶೇ.20ರಷ್ಟು) ಇದೆ ಎಂದು ವಿವರಿಸಿದರು.

ಬರುವ ಮೂರು ವರ್ಷದಲ್ಲಿ 24 ಸಾವಿರ ಶಿಕ್ಷಕರು ನಿವೃತ್ತಿಯಾಗಲಿದ್ದಾರೆ. ಅದನ್ನು ಗಮನದಲ್ಲಿಸಿಕೊಂಡು ನೇಮಕಾತಿ ಮಾಡಲಾಗುತ್ತದೆ. ವರ್ಗಾವಣೆ ಕೌನ್ಸೆಲಿಂಗ್ ಮೂಲಕವೇ ಆಗಲಿದೆ. ಕನಿಷ್ಠ 3 ವರ್ಷ ಕೆಲಸ‌ ಮಾಡಿದ್ದರೆ ಮಾತ್ರ ವರ್ಗಾವಣೆಗೆ ಅರ್ಹ ಎಂದು ವಿಧೇಯಕದಲ್ಲಿನ ವಿವರ ನೀಡಿದರು. ವಿಧವೆಯರು, ಅಂಗವಿಕಲರು, ಮಾಜಿ ಸೈನಿಕರ ಮೃತಪಟ್ಟ ಪತ್ನಿಯರು, ಒಂದು ವರ್ಷ ಮಗುವಿನ ಬಾಣಂತಿಗೆ ಕಾಯ್ದೆಯಿಂದ ವಿನಾಯತಿ ನೀಡಲಾಗಿದೆ ಎಂದರು. ವರ್ಗಾವಣೆ ಶಿಕ್ಷೆಯಾಗಬಾರದು ಎಂದು ಈ ವಿಧೇಯಕ ತಂದಿದ್ದು ಇದಕ್ಕೆ‌ ಸದನ ಬೆಂಬಲ ನೀಡಬೇಕು ಎಂದು ಮನವಿ ಮಾಡಿದರು.

ನಂತರ ಆಡಳಿತ ಪಕ್ಷ ಮತ್ತು ಪ್ರತಿಪಕ್ಷದ 17 ಸದಸ್ಯರು ವಿಧೇಯಕದ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡಿದ್ದರು. ಸದಸ್ಯರ ಅಭಿಪ್ರಾಯ, ಸಲಹೆ ಆಲಿಸಿದ ಸಚಿವ ಸುರೇಶ್ ಕುಮಾರ್, ಒಂದು ದಿನ ಶಿಕ್ಷಣ, ಶಿಕ್ಷಣ ಕ್ಷೇತ್ರದ ಬಗ್ಗೆ ಚರ್ಚೆ ಆಗಬೇಕು. ಸರ್ಕಾರಿ ಶಾಲೆ ಉಳಿಸಿಕೊಳ್ಳುವುದು ಹೇಗೆ ಎನ್ನುವುದನ್ನು ಚರ್ಚಿಸಬೇಕು. ಈ ವಿಧೇಯಕ ಎಲ್ಲಾ ಸಮಸ್ಯೆಗೆ ರಾಮಬಾಣ ಎನ್ನಲ್ಲ. ಶೇ.80ರಷ್ಟು ಪರಿಹಾರ ಸಿಗಲಿದೆ. ಶೇ.60ಕ್ಕಿಂತ ಹೆಚ್ಚಿರುವ ಶಿಕ್ಷಕಿಯರನ್ನು ಉದ್ದೇಶವಾಗಿಟ್ಟುಕೊಂಡು ವಿಧೇಯಕ ತರಲಾಗಿದೆ. ಎಲ್ಲಾ ಸದಸ್ಯರ ಸಲಹೆ ಬಳಸಿಕೊಳ್ಳುತ್ತೇನೆ ಎಂದು ಭರವಸೆ ನೀಡಿದರು. ನಂತರ ಕರ್ನಾಟಕ ಸಿವಿಕ್ ಸೇವೆಗಳು ಶಿಕ್ಷಕರ ವರ್ಗಾವಣೆ ನಿಯಂತ್ರಣ ವಿಧೇಯಕ-2020 ಅನ್ನು ಧ್ವನಿ ಮತದ ಮೂಲಕ ವಿಧಾನ ಪರಿಷತ್ ಅಂಗೀಕರಿಸಿತು.

ABOUT THE AUTHOR

...view details