ಕರ್ನಾಟಕ

karnataka

ಶಾಲಾ-ಕಾಲೇಜು ಪುನಾರಂಭಕ್ಕೆ ಬೇಕು ಇನ್ನೂ‌ ಒಂದು ತಿಂಗಳು?

ವರ್ಚುವಲ್ ಕ್ಲಾಸ್​ನಿಂದಾಗಿ ಮಕ್ಕಳಲ್ಲಿ ಒತ್ತಡ ಹೆಚ್ಚಾಗಿದೆ.‌ ಆಫ್​​ಲೈನ್​​ ತರಗತಿಗಳು ಶುರುವಾಗುವುದೇ ಉತ್ತಮ ಎಂದು ಮಣಿಪಾಲ್ ಆಸ್ಪತ್ರೆಯ ಕ್ಲಿನಿಕಲ್ ಸೈಕಾಲಜಿಸ್ಟ್ ಡಾ.ಸತೀಶ್ ಕುಮಾರ್ ತಿಳಿಸಿದ್ದಾರೆ

By

Published : Oct 8, 2020, 7:52 PM IST

Published : Oct 8, 2020, 7:52 PM IST

Updated : Oct 8, 2020, 8:11 PM IST

schools-reopen
ಶಾಲಾ-ಕಾಲೇಜು ಪುನಾರಂಭ

ಬೆಂಗಳೂರು:ರಾಜ್ಯದಲ್ಲಿ ಕೊರೊನಾ ವೈರಸ್ ಎಷ್ಟು ಚರ್ಚಾ ವಿಷಯವಾಗಿದೆಯೋ ಅಷ್ಟೇ ಚರ್ಚೆ ಶಾಲಾ-ಕಾಲೇಜು ಆರಂಭದ ಕುರಿತು ನಡೆಯುತ್ತಿದೆ. ಕೇಂದ್ರ ಸರ್ಕಾರ ಶಾಲಾ-ಕಾಲೇಜು ಆರಂಭಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದೆ.‌ ಆದರೆ, ರಾಜ್ಯದಲ್ಲಿ ಕೊರೊನಾ ನಿಯಂತ್ರಣಕ್ಕೆ ಬಾರದಿರುವ ಕಾರಣ ಶಿಕ್ಷಣ ಇಲಾಖೆ ಮತ್ತೆ ಸಕ್ರಿಯವಾಗುತ್ತಾ ಎಂಬ ಪ್ರಶ್ನೆ ಮೂಡಿದೆ. 24 ಗಂಟೆಯಲ್ಲಿ 10 ಸಾವಿರಕ್ಕೂ ಅಧಿಕ ಮಂದಿಗೆ ಸೋಂಕು ದೃಢಪಡುತ್ತಿದೆ.‌ ಹೀಗಿರುವಾಗ ಶಾಲೆ ಆರಂಭಿಸುವುದಾದರೂ ಹೇಗೆ? ಪೋಷಕರು ಮಕ್ಕಳು ಒಪ್ಪುತ್ತಾರೆಯೇ ಎಂಬ ಪ್ರಶ್ನೆ ಮೂಡುತ್ತದೆ. ಕೊರೊನಾ ನಿಯಂತ್ರಣಕ್ಕೆ ಬರುವವರೆಗೂ ಅಥವಾ ಲಸಿಕೆ ಬರುವರೆಗೂ ನಮ್ಮ ಮಕ್ಕಳನ್ನು ಶಾಲೆಗೆ ಕಳಿಸುವುದಿಲ್ಲ ಎಂದು ಕೆಲ ಪೋಷಕರು ಪಟ್ಟು ಹಿಡಿದು ಕೂತಿದ್ದಾರೆ. ‌ಹೀಗಿರುವಾಗ ಶಾಲೆ ಆರಂಭಿಸಿದರೂ ಮಕ್ಕಳು ಬರುತ್ತಾರೆಯೇ?

ಅನ್​ಲಾಕ್ 5.0ರ ಜಾರಿ ನಂತರ ಶಾಲೆ ಪುನರಾಂಭಕ್ಕೆ ಇರುವ ಅಡೆತಡೆಗಳು ಮತ್ತು ಶಿಕ್ಷಣ ತಜ್ಞರು ನೀಡಿರುವ ವರದಿ ಏನು? ‌ಈ ಬಗ್ಗೆ ಈಟಿವಿ ಭಾರತ್ ಜೊತೆಗೆ ಆರೋಗ್ಯ ಇಲಾಖೆ ಅಧಿಕಾರಿಗಳು, ಶಿಕ್ಷಣ ಸಂಸ್ಥೆಯ ಮಾಲೀಕರು, ಆರೋಗ್ಯ ತಜ್ಞರು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಒಂದು ತಿಂಗಳು ಶಾಲೆ ತೆರೆಯಲ್ಲ:ಶಾಲಾ-ಕಾಲೇಜು ಆರಂಭ ಸಂಬಂಧ ಇನ್ನು ಚರ್ಚೆ-ಸಭೆಗಳು ನಡೆಯುತ್ತಿವೆ. ಕೇಂದ್ರ ಸರ್ಕಾರ ಶಾಲೆ ತೆರೆಯಲು ಪರವಾನಗಿ ನೀಡಿದೆ. ಆದರೆ, ಸದ್ಯದ ಪರಿಸ್ಥಿತಿಯಲ್ಲಿ ಶಾಲೆಗಳನ್ನು ಕನಿಷ್ಠ ತಿಂಗಳವರೆಗೆ ತೆರೆಯಲು ಸಾಧ್ಯವಿಲ್ಲ. ಆದರೆ, ಪರಿಸ್ಥಿತಿ ಅವಲೋಕಿಸಿ ಮುಂದಿನ‌‌ ನಿರ್ಧಾರ ಮಾಡಲಾಗುತ್ತದೆ ಎಂದು ಆರೋಗ್ಯ ಇಲಾಖೆ ನಿರ್ದೇಶಕ ಓಂ ಪ್ರಕಾಶ ಪಾಟೀಲ್ ತಿಳಿಸಿದ್ದಾರೆ. ಗುಣಮಟ್ಟ ಕಾರ್ಯನಿರ್ವಹಣೆ ಶಿಷ್ಠಾಚಾರ (ಎಸ್​​​ಒಪಿ) ಸಿದ್ಧವಿದ್ದು ಶಾಲೆಗಳು ತೆರೆಯುವುದು ಅನುಮಾನ. ಖಾಸಗಿ ಶಿಕ್ಷಣ ಸಂಸ್ಥೆಗಳು ಮನವಿ ಕೊಟ್ಟಿದ್ದು, ಮಾರ್ಗಸೂಚಿಗಳ ಪ್ರಕ್ರಿಯೆ ನಡೆಯುತ್ತಿದೆ ಎಂದರು.

ಮಲತಾಯಿ ಧೋರಣೆ ನಿಲ್ಲಿಸಲಿ:ಕೇಂದ್ರ ಸರ್ಕಾರ ತೆಗೆದುಕೊಂಡಿರುವ ನಿರ್ಧಾರಕ್ಕೆ ಪೂರಕವಾಗಿ ರಾಜ್ಯ ಸರ್ಕಾರ ಹಾಗೂ ಶಿಕ್ಷಣ ಇಲಾಖೆ ಅಚಲ ನಿರ್ಧಾರ ಕೈಗೊಳ್ಳಬೇಕು. ಸರ್ಕಾರಕ್ಕೆ ಸಲ್ಲಿಸಲ್ಲು ವರದಿಯೊಂದನ್ನು ಸಿದ್ದಪಡಿಸಲಾಗಿದೆ. ಇಲಾಖೆಯು ತಳಮಟ್ಟದಲ್ಲಿ ವರದಿ ರಚಿಸಿ ನಿರ್ಧಾರ ಕೈಗೊಳ್ಳಲಿ.‌ ಸರ್ಕಾರದ ನಿರ್ಧಾರವನ್ನು ನಾವು ಸ್ವಾಗತಿಸುತ್ತೇವೆ. ಆದರೆ, ಸರ್ಕಾರ ಮಲತಾಯಿ ಧೋರಣೆ ಮಾಡದೇ ಸರಿಯಾದ ಮಾರ್ಗದರ್ಶನ‌ ನೀಡಲಿ ಎಂದು ಖಾಸಗಿ ಶಾಲೆಗಳ ಒಕ್ಕೂಟ (ಕಾಮ್ಸ್‌) ಕಾರ್ಯದರ್ಶಿ ಶಶಿಕುಮಾರ್ ತಿಳಿಸಿದ್ದಾರೆ.‌

ಮಧ್ಯಮ‌ ಹಾಗೂ ಬಡವರ್ಗದವರು ಶಾಲೆ ಆರಂಭವಾಗಲಿ ಎಂಬ ಅಭಿಪ್ರಾಯ ಹೊರ ಹಾಕಿದ್ದಾರೆ. ಮನೆಯಲ್ಲಿ ಮಕ್ಕಳನ್ನು‌ ನೋಡಿಕೊಳ್ಳಲು ಯಾರಿಲ್ಲದಿರುವುದು, ಬಾಲಕಾರ್ಮಿಕರು ಕೆಲಸಕ್ಕೆ ‌ಹೋಗುವುದನ್ನು ತಡೆಯಲು, ಬಾಲ್ಯ ವಿವಾಹಕ್ಕೆ ಕಡಿವಾಣ ಹಾಕಲು ಹೀಗೆ ಬೇರೆ ಬೇರೆ ಸಮಸ್ಯೆಗಳಿವೆ. ಹೀಗಾಗಿ, ಶಾಲೆಗಳನ್ನು ಆರಂಭಿಸಲು ಒತ್ತಾಯಿಸಿದ್ದಾರೆ. ಇತ್ತ ದೊಡ್ಡ ದೊಡ್ಡ ಶಾಲೆಗಳಲ್ಲಿ ಓದುತ್ತಿರುವ ಮಕ್ಕಳ ಪೋಷಕರು, ನಮ್ಮ ಮಕ್ಕಳು ಆನ್​​​ಲೈನ್ ಮೂಲಕವೇ ಓದಲಿ ಎಂಬ ಅಭಿಪ್ರಾಯ ಹೊರ ಹಾಕಿದ್ದಾರೆ. ಹೀಗಾಗಿ ಈ ಎರಡು ಅಭಿಪ್ರಾಯಗಳ ಮಧ್ಯೆ ಶಿಕ್ಷಣ ಸಂಸ್ಥೆಗಳು ಗೊಂದಲಕ್ಕೆ ಸಿಲುಕಿವೆ. ಸರ್ಕಾರ ಸೂಕ್ತ ನಿರ್ಧಾರ‌ ತೆಗೆದುಕೊಂಡರೆ ಉತ್ತಮ ಎಂದು ಹೇಳಿದರು.

ಶಾಲೆ ಆರಂಭಿಸುವ ಕುರಿತು ಅಭಿಪ್ರಾಯಗಳು

ಲಾಭ-ನಷ್ಟ ಎರಡೂ ಇದೆ:ರಾಜ್ಯದಲ್ಲಿ ಮಕ್ಕಳು ಶಾಲೆಗೆ ಹೋಗಬೇಕಾದ ಅವಶ್ಯಕತೆ ಇದೆ. ಶಾಲೆ ಆರಂಭದಿಂದಾಗಿ ಲಾಭ-ನಷ್ಟ ಎರಡು ಇದೆ ಅಂತ ಮಣಿಪಾಲ್ ಆಸ್ಪತ್ರೆಯ ಕ್ಲಿನಿಕಲ್ ಸೈಕಾಲಜಿಸ್ಟ್ ಡಾ.ಸತೀಶ್ ಕುಮಾರ್ ತಿಳಿಸಿದ್ದಾರೆ. ವರ್ಚುವಲ್ ಕ್ಲಾಸ್​ನಿಂದಾಗಿ ಮಕ್ಕಳಲ್ಲಿ ಒತ್ತಡ ಹೆಚ್ಚಾಗಿದೆ.‌ ಆಫ್​​ಲೈನ್​​ ತರಗತಿಗಳು ಶುರುವಾಗುವುದೇ ಉತ್ತಮ. ಆದರೆ, ಹೆಚ್ಚು‌ ಎಚ್ಚರವಹಿಸುವ ಅಗತ್ಯ. ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು, ಗಂಟೆಗೊಮ್ಮೆ ಕೈ ಸ್ವಚ್ಛಗೊಳ್ಳಿಸಬೇಕು. ಆದರೆ, ಮಕ್ಕಳು ಕೊರೊನಾ ಮರೆತು ಸ್ನೇಹಿತರೊಂದಿಗೆ ಒಡನಾಟ ಇಟ್ಟುಕೊಂಡರೆ ಕಷ್ಟವಾಗಲಿದೆ. ಬ್ಯಾಚ್ ವೈಸ್​​ ಪಾಠ ಮಾಡುವುದು ಉತ್ತಮ. ಆದರೆ ಇಲ್ಲಿ ಶಿಕ್ಷಕರಿಗೆ ಮತ್ತೊಂದಿಷ್ಟು ಒತ್ತಡವಾಗಲಿದೆ ಎಂದು ಶಾಲಾ ಆರಂಭದ ಸ್ಥಿತಿಗತಿ ಬಗ್ಗೆ ತಿಳಿಸಿದರು.

ಶಾಲಾ-ಕಾಲೇಜು ಆರಂಭಿಸುವ ವಿಚಾರವಾಗಿ ಹಲವು ಅಧ್ಯಯನಗಳು ನಡೆದಿದ್ದು, ಸರ್ಕಾರಕ್ಕೆ ‌ಶಿಕ್ಷಣ ತಜ್ಞರು ವರದಿ ಸಲ್ಲಿಸಿದ್ದಾರೆ.‌ ಶಿಕ್ಷಣ ತಜ್ಞ ಪ್ರೋ.ನಿರಂಜನ್ ಆರಾಧ್ಯ ವರದಿ ಸಿದ್ಧಪಡಿಸಿ ಹಲವು ಸಲಹೆಗಳನ್ನು ನೀಡಿದ್ದಾರೆ. ಶಾಲೆ ಆರಂಭಿಸುವ ಮುನ್ನ ಪೋಷಕರಲ್ಲಿ ಅರಿವು ಮೂಡಿಸಬೇಕು. ಕೊರೊನಾ ಮಾರ್ಗಸೂಚಿಗಳನ್ನು ಕಟ್ಟು ನಿಟ್ಟಾಗಿ ಪಾಲಿಸಬೇಕು. 2020-21ರಲ್ಲಿ ಪರೀಕ್ಷಾ ರಹಿತ ಕಲಿಕಾ ವರ್ಷ ಎಂದು ಘೋಷಿಸಬೇಕು. ಮೊದಲು 30ಕ್ಕಿಂತ ಕಡಿಮೆ ಮಕ್ಕಳಿಂದ ತರಗತಿ ಆರಂಭಿಸಬೇಕು ಎಂಬ ಅಂಶ ಸೇರಿಸಿ ವರದಿ ನೀಡಿದ್ದಾರೆ. ಆದರೆ ಶಾಲೆಗಳನ್ನು ಆರಂಭಿಸುವ ಕುರಿತು ಇನ್ನೊಂದು ವಾರದಲ್ಲಿ ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದು ಶಿಕ್ಷಣ ಸಚಿವ ಸುರೇಶ್‌ಕುಮಾರ್ ಹೇಳಿದ್ದಾರೆ.

Last Updated : Oct 8, 2020, 8:11 PM IST

ABOUT THE AUTHOR

...view details