ಬೆಂಗಳೂರು:ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನಾಡೋಜ ಡಾ. ಬಿ ಟಿ ರುದ್ರೇಶ್ ಅವರ ವೈದ್ಯ ಜೀವನ ಕಥನ 'ಸಾಧನೆಯೇ ಬದುಕು' ಕೃತಿಯನ್ನು ಲೋಕಾರ್ಪಣೆ ಮಾಡಿದರು. ಗೃಹ ಕಚೇರಿ ಕೃಷ್ಣಾದಲ್ಲಿ ನಿವೃತ್ತ ಐಎಎಸ್ ಅಧಿಕಾರಿ ಸಿ ಸೋಮಶೇಖರ್, ಅಂಕಣಕಾರ ಎಸ್ ಷಡಕ್ಷರಿ, ಡಾ. ಬಿ ಟಿ ರುದ್ರೇಶ್ ಮತ್ತು ಇತರರ ಸಮ್ಮುಖದಲ್ಲಿ ಕೃತಿಯನ್ನು ಲೋಕಾರ್ಪಣೆ ಮಾಡಲಾಯಿತು.
ನಂತರ ಮಾತನಾಡಿದ ಸಿಎಂ ಬೊಮ್ಮಾಯಿ, ಬಿ.ಟಿ ರುದ್ರೇಶ್ ಯಾವಾಗಲೂ ಬಹಳ ಕ್ರಿಯಾಶೀಲರಾಗಿರುತ್ತಾರೆ. ಚಟುವಟಿಕೆಯಿಂದ ಕೆಲಸ ಮಾಡುತ್ತಾರೆ ಒಂದು ದಿನವೂ ಬೇಸರ ವ್ಯಕ್ತಪಡಿಸಿದ್ದನ್ನು ನಾನು ನೋಡಿಲ್ಲ. ಇದು ಕೂಡ ದೊಡ್ಡ ಸಾಧನೆ ಎಂದು ಹೇಳಿದರು. ಸದಾ ಸಾಧಿಸುವ ಗುಣ ಇವರಲ್ಲಿದೆ. ಹುಟ್ಟಿದಾಗ ಮುಗ್ಧರಂತೆ ಇರುವ ಮಕ್ಕಳು ಬೆಳೆಯುತ್ತಾ ಬೆಳೆಯುತ್ತಾ ಬದಲಾಗುತ್ತಾರೆ. ಆದರೆ ಕಳೆದ ಮೂವತ್ತು ವರ್ಷಗಳಿಂದ ರುದ್ರೇಶ್ ಬದಲಾಗಿಲ್ಲ, ಮಕ್ಕಳ ರೀತಿ ಮುಗ್ಧತೆಯಿಂದಲೇ ಇದ್ದಾರೆ ಎಂದು ಬಣ್ಣಿಸಿದರು.