ಬೆಂಗಳೂರು:ಲಾಕ್ಡೌನ್ ಸಂಬಂಧ ಭದ್ರತಾ ವಲಯದ ಸ್ಥಿತಿಗತಿ ಕುರಿತು ಗೃಹ ಸಚಿವ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಇಂದು ವಿಸ್ತೃತ ಮಾಹಿತಿ ನೀಡಿದ್ದಾರೆ.
ಇಡೀ ದಿನ ವಿಶ್ರಾಂತಿ ಪಡೆದ ಸಿಎಂ; ಲಾಕ್ಡೌನ್ ಮಾಹಿತಿ ನೀಡಿದ ಬೊಮ್ಮಾಯಿ..!
ಲಾಕ್ಡೌನ್ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಇಡೀ ದಿನ ನಿವಾಸದಲ್ಲಿ ಇದ್ದು ವಿಶ್ರಾಂತಿ ಪಡೆದುಕೊಂಡಿದ್ದಾರೆ. ಹೀಗಾಗಿ ಗೃಹ ಸಚಿವ ಬಸವರಾಜ ಬೊಮ್ಮಾಯಿ ಲಾಕ್ಡೌನ್ ಸಂಬಂಧ ಭದ್ರತಾ ವಲಯದ ಸ್ಥಿತಿಗತಿ ಕುರಿತು ಸಿಎಂಗೆ ವಿಸ್ತೃತ ಮಾಹಿತಿ ನೀಡಿದ್ದಾರೆ.
ಭಾನುವಾರದಂದು ಬೆಂಗಳೂರಿನಲ್ಲಿ ಲಾಕ್ಡೌನ್ ಯಾವ ರೀತಿಯಿದೆ, ಪೊಲೀಸ್ ಭದ್ರತೆ ಯಾವ ರೀತಿ ಕಲ್ಪಿಸಲಾಗಿದೆ, ಅನಗತ್ಯವಾಗಿ ಸಂಚಾರ ಮಾಡುವವರ ವಿರುದ್ಧ ಯಾವ ರೀತಿ ಕ್ರಮ ಕೈಗೊಳ್ಳಲಾಗಿದೆ, ಪ್ರತಿ ವಾರ್ಡ್ನಲ್ಲಿಯೂ ಪೊಲೀಸರ ಗಸ್ತು, ಎಚ್ಚರಿಕೆಯ ಸಂದೇಶಗಳನ್ನು ನೀಡಿ ಜನರು ಮನೆಯಲ್ಲಿಯೇ ಇರುವಂತೆ ನೋಡಿಕೊಳ್ಳುತ್ತಿರುವ ಕುರಿತು ದೂರವಾಣಿ ಮೂಲಕ ಸಿಎಂ ಬಿ.ಎಸ್.ಯಡಿಯೂರಪ್ಪ ಅವರಿಗೆ ಗೃಹ ಸಚಿವ ಬಸವರಾಜ ಬೊಮ್ಮಾಯಿ ಮಾಹಿತಿ ನೀಡಿದರು. ಗೃಹ ರಕ್ಷಕ ದಳ ಸಿಬ್ಬಂದಿ ಬಳಕೆ ಸೇರಿದಂತೆ ಅಗತ್ಯವಿರುವ ಎಲ್ಲವನ್ನೂ ಇಲಾಖೆಯಿಂದ ಕೈಗೊಳ್ಳಲಾಗಿದೆ. ಹೆಚ್ಚು-ಹೆಚ್ಚು ಕೊರೊನಾ ಪರೀಕ್ಷೆ ಮಾಡುತ್ತಿರುವ ಕಾರಣ ಸೋಂಕಿತರ ಸಂಖ್ಯೆಯಲ್ಲಿಯೂ ಹೆಚ್ಚಾಗುತ್ತಿದೆ ಎಂದು ಸಮಜಾಯಿಷಿ ನೀಡಿದ್ದು, ಇದಕ್ಕೆ ಸಿಎಂ ತೃಪ್ತರಾಗಿಲ್ಲ ಎನ್ನಲಾಗಿದೆ.
ಲಾಕ್ಡೌನ್ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಮ್ಮ ಸರ್ಕಾರಿ ನಿವಾಸ ಕಾವೇರಿ ಬಿಟ್ಟು ಕದಲಲಿಲ್ಲ. ಇಡೀ ದಿನ ನಿವಾಸದಲ್ಲಿ ಇದ್ದು ವಿಶ್ರಾಂತಿ ಪಡೆದುಕೊಂಡರು. ಯಾವ ಅತಿಥಿಗಳನ್ನೂ ಭೇಟಿಯಾಗದೆ ಲಾಕ್ಡೌನ್ ನಿಯಮ ಪಾಲಿಸಿದರು. ಇನ್ನು, ನಾಳೆ ಕೊರೊನಾ ಟಾಸ್ಕ್ ಫೋರ್ಸ್ ಸಭೆ ನಿಗದಿಯಾಗಿದೆ. ವಿಧಾನಸೌಧದಲ್ಲಿ ಸಭೆ ನಡೆಯಲಿದ್ದು, ಮಹತ್ವದ ಚರ್ಚೆ ನಡೆಯಲಿದೆ. ಸದ್ಯಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಭೆಯ ನೇತೃತ್ವ ವಹಿಸುವ ಕುರಿತು ನಿರ್ಧಾರ ಆಗಿಲ್ಲ. ನಾಳೆ ಯಾವುದೇ ಪೂರ್ವ ನಿಗದಿತ ಕಾರ್ಯಕ್ರಮ ಹಾಕಿಕೊಂಡಿಲ್ಲ. ಒಂದು ವೇಳೆ ಲಾಕ್ಡೌನ್ ನಂತರದಲ್ಲಿನ ಕೊರೊನಾ ನಿಯಂತ್ರಣದ ಬಗ್ಗೆ ತೃಪ್ತಿ ಆಗದೇ ಇದ್ದಲ್ಲಿ ಸಭೆಯಲ್ಲಿ ಭಾಗಿಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.