ಬೆಂಗಳೂರು:ಇಡೀ ದೇಶ ನಮ್ಮ ವಿಧಾನಸಭೆ ಕಡೆ ತಿರುಗಿ ನೋಡುವಂತೆ ಸಂವಿಧಾನಕ್ಕೆ ನಿಷ್ಠರಾಗಿ ಕಾರ್ಯನಿರ್ವಹಿಸಬೇಕೆಂದು ನೂತನ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ಮಾಜಿ ಸ್ಪೀಕರ್ ರಮೇಶ್ಕುಮಾರ್ ಸಲಹೆ ನೀಡಿದ್ದಾರೆ.
ವಿಧಾನಸಭೆಯ ಸಭಾಧ್ಯಕ್ಷರಾಗಿ ಇಂದು ಅವಿರೋಧವಾಗಿ ಆಯ್ಕೆಯಾದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರನ್ನು ಅಭಿನಂದಿಸಿ ಸದನದಲ್ಲಿ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಮಾತನಾಡಿ, ಸಭಾಧ್ಯಕ್ಷರ ಸ್ಥಾನದ ಗೌರವ ಹೆಚ್ಚುವ ರೀತಿಯಲ್ಲಿ ಜನರ ವಿಚಾರಗಳು ಹೆಚ್ಚು ಚರ್ಚೆ ಆಗಬೇಕು. ಧ್ವನಿ ಇಲ್ಲದವರ ಹಾಗೂ ಜನರ ವಿಚಾರದ ಬಗ್ಗೆ ಹೆಚ್ಚು ಅವಕಾಶ ದೊರೆಯಬೇಕು. ಸಂಸದೀಯ ವೇದಿಕೆಗಳಲ್ಲಿ ರಜೆಯ ವಿಚಾರ ಚರ್ಚೆಯಾಗುವುದಿಲ್ಲ ಎಂಬುದನ್ನು ದೂರ ಮಾಡಬೇಕು. ನೀವು ಆರ್ಎಸ್ಎಸ್ ಹಿನ್ನೆಲೆಯಿಂದ ಬಂದವರು. ಅದರಿಂದ ಹೊರ ಬಂದು ಸಂವಿಧಾನಕ್ಕೆ ಮಾತ್ರ ನಿಷ್ಠರಾಗಿ ಇರಬೇಕು ಎಂದರು.
ಸಭಾಧ್ಯಕ್ಷ ಕಾಗೇರಿಗೆ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅಭಿನಂದನೆ ಸಂವಿಧಾನ ಶಿಲ್ಪಿ ಅಂಬೇಡ್ಕರ್ ವಾದ, ಮನುವಾದ ಪರಸ್ಪರ ವಿರುದ್ಧ ದಿಕ್ಕಿನಲ್ಲಿವೆ. ನಿಮ್ಮ ಮೇಲೆ ತಕ್ಕಡಿ ಇದೆ. ಭಗತ್ಸಿಂಗ್ ಅವರನ್ನು ನೇಣಿಗೆ ಹಾಕಿದಾಗ ಅವರ ಕಾಲಿಗೆ ಮರಳು ಮೂಟೆ ಕಟ್ಟಲಾಗಿತ್ತು. ಆ ಮೂಟೆ ಕೆಳಗೆ ಪ್ರಜಾಪ್ರಭುತ್ವ ರೂಪಿಸಲಾಗಿದೆ. ಜಲಿಯನ್ ವಾಲಾಬಾಗ್ ಹತ್ಯಾಕಾಂಡದ ರಕ್ತದ ಕಲೆಯನ್ನು ನಿಮ್ಮ ಹಣೆಗೆ ತಿಲಕವಾಗಿ ಇಟ್ಟಿದ್ದಾರೆ. ಇತಿಹಾಸ ಮರೆಯುವವರು ದೇಶ ಕಟ್ಟಲು ಸಾಧ್ಯವಿಲ್ಲ. ಸಂವಿಧಾನ ಅನುಷ್ಠಾನಗೊಂಡ ಮೇಲೆ ಅಸಮಾನತೆ ಹೋಗಬೇಕು. ಆದರೆ ಈ ದೇಶದಲ್ಲಿ ಅಸಮಾನತೆ ವಿಜೃಂಭಿಸುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದರು.
ಮನುವಾದದಲ್ಲಿ ಚಾತುವರ್ಣದ ಪ್ರಸ್ತಾಪವಿದೆ. ಆದರೆ ಪಂಚಮವನ್ನು ಲೆಕ್ಕಕ್ಕೆ ತೆಗೆದುಕೊಂಡಿಲ್ಲ. ಆರ್ಎಸ್ಎಸ್ ಸಂಸ್ಥಾಪಕರು ಇದ್ದದ್ದು ನಾಗಪುರದಲ್ಲೇ. ಅಂಬೇಡ್ಕರ್ ಅವರು ಬೌದ್ಧ ಧರ್ಮಕ್ಕೆ ಸೇರ್ಪಡೆಯಾಗಿದ್ದು ನಾಗಪುರದಲ್ಲಿ. ಅಂಬೇಡ್ಕರ್ ಅವರು ಸಮಾನತೆ ಆಧಾರದ ಮೇಲೆ ಅಖಂಡ ಭಾರತ ಇರಬೇಕು ಎಂದಯ ಬಯಸಿದರು. ಬ್ರಿಟಿಷರ ಆಳ್ವಿಕೆ ಕಾಲದಲ್ಲಿ ಶಾಸನ ಸಭೆ ಆರಂಭಗೊಂಡಿದ್ದು ಎಂದು ಅದರ ಇತಿಹಾಸವನ್ನು ಮೆಲುಕು ಹಾಕಿದರು.
ನೂತನ ಸಭಾಧ್ಯಕ್ಷರಾದವರನ್ನು ಅಭಿನಂದಿಸುವುದು ಸಂಪ್ರದಾಯ. ಸಭಾಧ್ಯಕ್ಷರ ಪೀಠಕ್ಕೆ ಅದರದೇ ಆದ ಇತಿಹಾಸವಿದೆ. ನೀವು ಸಚಿವರಾಗಿದ್ದಾಗ ತಮ್ಮ ಮನವಿಯೊಂದನ್ನು ಪರಿಗಣಿಸಿದ್ದೀರಿ. ಹಣಕಾಸಿನ ವಿಚಾರದಲ್ಲೂ ಕೂಡ ಎಚ್ಚರಿಕೆಯಿಂದ ಇದ್ದವರು. ಪ್ರಾಮಾಣಿಕರಾಗಿದ್ದೀರಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಸಾರ್ವಜನಿಕರ ಹಿತದೃಷ್ಟಿಯಿಂದ ನಿಮ್ಮ ನೋವು ಹಂಚಿಕೊಳ್ಳಲು ನಿಮ್ಮೊಂದಿಗೆ ಇರುವುದಾಗಿ ಹೇಳಿದರು.