ಕರ್ನಾಟಕ

karnataka

ETV Bharat / city

2 ವರ್ಷವಾದ್ರು ಗುರು ರಾಘವೇಂದ್ರ ಬ್ಯಾಂಕ್ ತಪ್ಪಿತಸ್ಥರಿಗೆ ಶಿಕ್ಷೆಯಾಗಿಲ್ಲ: ಸಂಸದ,ಶಾಸಕರ ನಡೆಗೆ ಷೇರುದಾರರ ಆಕ್ರೋಶ

DICGC ವಿಮೆ ಹಣದ ಬಗ್ಗೆ ಮಾತನಾಡುವ ಸಂಸದ ತೇಜಸ್ವಿ ಸೂರ್ಯ ಮತ್ತು ಶಾಸಕ ರವಿ ಸುಬ್ರಮಣ್ಯ ಅವರು ಠೇವಣಿದಾರರ ಪೂರ್ಣ ಹಣ ವಾಪಸ್‌ ಮಾಡಿಸುವುದರ ಬಗ್ಗೆ ಯಾಕೆ ಮಾತನಾಡುತ್ತಿಲ್ಲ. ವಂಚನೆ ಪ್ರಕರಣದ ತನಿಖೆಯ ಬಗ್ಗೆ ಏಕೆ ಚಕಾರವೆತ್ತುತ್ತಿಲ್ಲ. ಪ್ರಕರಣವನ್ನು ಸಿಬಿಐ ಗೆ ವಹಿಸುವುದರ ಬಗ್ಗೆ ಎಷ್ಟೇ ಒತ್ತಡ ಬಂದರೂ ಸಹ ಆ ಬಗ್ಗೆ ಯಾಕೆ ಮಾತನಾಡುತ್ತಿಲ್ಲ ಎಂದು ಶಂಕರ್‌ ಗುಹಾ ದ್ವಾರಕನಾಥ್‌ ತಿಳಿಸಿದ್ದಾರೆ.

By

Published : Jan 6, 2022, 5:30 AM IST

Updated : Jan 7, 2022, 3:57 AM IST

ಗುರು ರಾಘವೇಂದ್ರ ಬ್ಯಾಂಕ್
ಗುರು ರಾಘವೇಂದ್ರ ಕ್ರೆಡಿಟ್‌ ಕೋ-ಆಪರೇಟಿವ್‌ ಬ್ಯಾಂಕ್‌

ಬೆಂಗಳೂರು:ಶ್ರೀ ಗುರು ರಾಘವೇಂದ್ರ ಕ್ರೆಡಿಟ್‌ ಕೋ-ಆಪರೇಟಿವ್‌ ಬ್ಯಾಂಕ್‌ ವಂಚನೆ ಪ್ರಕರಣದ ತಪ್ಪಿತಸ್ಥರಿಗೆ ಶಿಕ್ಷೆಯಾಗಲೆಬೇಕು. ಈ ಪ್ರಕರಣದಲ್ಲಿ ವಂಚನೆಗೆ ಒಳಗಾದವರಿಗೆ ನ್ಯಾಯ ದೊರಕಿದ ನಂತರ ನಾವೇ ಸಂಸದರಿಗೆ ಸನ್ಮಾನ ಮಾಡುತ್ತೇವೆ ಎಂದು ಶ್ರೀ ಗುರು ರಾಘವೇಂದ್ರ ಕ್ರೆಡಿಟ್‌ ಕೋ-ಆಪರೇಟಿವ್‌ ಬ್ಯಾಂಕ್‌ ಷೇರುದಾರರು ಮತ್ತು ಠೇವಣಿದಾರರ ಹಿತರಕ್ಷಣಾ ವೇದಿಕೆಯ ಮಹಾಪೋಷಕರಾದ ಡಾ. ಶಂಕರ್‌ ಗುಹಾ ದ್ವಾರಕನಾಥ್‌ ಬೆಳ್ಳೂರು ಹೇಳಿದ್ದಾರೆ.

ಡಾ. ಶಂಕರ್‌ ಗುಹಾ ದ್ವಾರಕನಾಥ್‌ ಬೆಳ್ಳೂರು

ನಗರದ ಪ್ರೆಸ್‌ಕ್ಲಬ್‌ನಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ಸಂಸದ ತೇಜಸ್ವಿ ಸೂರ್ಯ ಮತ್ತು ಸ್ಥಳೀಯ ಶಾಸಕ ರವಿ ಸುಬ್ರಮಣ್ಯ ಅವ್ರ ನಡೆಯನ್ನು ಖಂಡಿಸಿದರು. ಇದೇ ಜನವರಿ 10ಕ್ಕೆ ಶ್ರೀ ಗುರು ರಾಘವೇಂದ್ರ ಕ್ರೆಡಿಟ್‌ ಕೋ-ಆಪರೇಟಿವ್‌ ಬ್ಯಾಂಕ್‌ ವಂಚನೆ ಪ್ರಕರಣ ಬೆಳಕಿಗೆ ಬಂದು ಎರಡು ವರ್ಷಗಳಾಗಲಿದೆ. ಈಗಾಗಲೇ 100ಕ್ಕೂ ಹೆಚ್ಚು ಠೇವಣಿದಾರರು ಸಾವನ್ನಪ್ಪಿದ್ದಾರೆ. ಸಾವಿರಾರು ಜನ ಠೇವಣಿದಾರರು ನಿತ್ಯ ಜೀವನ ನಡೆಸುವುದಕ್ಕೂ ಆಗದೆ ಪರದಾಡುತ್ತಿದ್ದಾರೆ. 46 ಸಾವಿರ ನೇರ ಠೇವಣಿದಾರರು, 120 ಸಹಕಾರಿ ಸಂಸ್ಥೆಗಳಲ್ಲಿ ಠೇವಣಿಯಿಟ್ಟಿದ್ದ ಸುಮಾರು 60ರಿಂದ 80 ಸಾವಿರ ಜನ ಗುರು ರಾಘವೇಂದ್ರ ಬ್ಯಾಂಕ್‌ ವಂಚನೆಯಿಂದ ಸಂಕಷ್ಟಕ್ಕೀಡಾಗಿದ್ದಾರೆ. ಇವರ ನೆರವಿಗೆ ಧಾವಿಸಿ ಠೇವಣಿದಾರರ ಹಿತಕಾಯಬೇಕಿದ್ದ ಸ್ಥಳೀಯ ಸಂಸದ ತೇಜಸ್ವಿ ಸೂರ್ಯ ಮತ್ತು ಸ್ಥಳೀಯ ಶಾಸಕ ರವಿ ಸುಬ್ರಮಣ್ಯ ಮಾತ್ರ DICGC ವಿಮೆ ಹಣವನ್ನು ತಾವೇ ಕೊಡಿಸಿದ್ದು ಎಂದು ಹೇಳಿಕೊಂಡು ಸನ್ಮಾನ ಮಾಡಿಸಿಕೊಳ್ಳುತ್ತಿದ್ದಾರೆ.

DICGC ವಿಮೆ ಹಣದ ಬಗ್ಗೆ ಮಾತನಾಡುವ ಸಂಸದ ತೇಜಸ್ವಿ ಸೂರ್ಯ ಮತ್ತು ಶಾಸಕ ರವಿ ಸುಬ್ರಮಣ್ಯ ಅವರು ಠೇವಣಿದಾರರ ಪೂರ್ಣ ಹಣ ವಾಪಸ್‌ ಮಾಡಿಸುವುದರ ಬಗ್ಗೆ ಯಾಕೆ ಮಾತನಾಡುತ್ತಿಲ್ಲ. ವಂಚನೆ ಪ್ರಕರಣದ ತನಿಖೆಯ ಬಗ್ಗೆ ಏಕೆ ಚಕಾರವೆತ್ತುತ್ತಿಲ್ಲ. ಪ್ರಕರಣವನ್ನು ಸಿಬಿಐಗೆ ವಹಿಸುವುದರ ಬಗ್ಗೆ ಎಷ್ಟೇ ಒತ್ತಡ ಬಂದರೂ ಸಹ ಆ ಬಗ್ಗೆ ಯಾಕೆ ಮಾತನಾಡುತ್ತಿಲ್ಲ. ವಸಿಷ್ಠ ಕೋ-ಆಪರೇಟಿವ್‌ ಸೊಸೈಟಿ ವಂಚನೆ ಪ್ರಕರಣದ ಬಗ್ಗೆ ಸಹ ಇದೇ ನಿರ್ಲಕ್ಷ್ಯ ವಹಿಸಿರುವುದು ಏಕೆ ಎಂದು ಡಾ. ಶಂಕರ್‌ ಗುಹಾ ದ್ವಾರಕನಾಥ್‌ ಬೆಳ್ಳೂರು ಅಸಮಾಧಾನ ಹೊರಹಾಕಿದರು.

ಇನ್ನು ಗುರು ಸಾರ್ವಭೌಮ ಸೊಸೈಟಿಯಲ್ಲಿ ನೂರಾರು ಕೋಟಿ ಅವ್ಯವಹಾರ ನಡೆದಿದೆ. ಆ ಸೊಸೈಟಿಯ ಠೇವಣಿದಾರರಿಗೆ ಹೇಗೆ ಪರಿಹಾರ ಕೊಡಿಸುತ್ತೀರಿ. ವಂಚಕರಿಗೆ ಶಿಕ್ಷೆಯಾಗುವಂತೆ ಮಾಡಿ ಆ ನಂತರ ನೀವು ಸನ್ಮಾನ ಮಾಡಿಸಿಕೊಂಡರೆ ಅದಕ್ಕೆ ಯಾರದ್ದೇ ತಕರಾರಿಲ್ಲ. ಆದರೆ ಅದ್ಯಾವುದನ್ನೂ ಮಾಡದೆ ಕೇವಲ ತಮಗೆ ಬೇಕಾದವರಿಂದ ಸನ್ಮಾನ ಸಮಾರಂಭಗಳನ್ನು ಏರ್ಪಡಿಸಿಕೊಂಡು ಸನ್ಮಾನ ಮಾಡಿಸಿಕೊಳ್ಳುವುದು ಎಷ್ಟು ಸರಿ ಎಂದಿದ್ದಾರೆ.

ಜನವರಿ 10ರಂದು ಬೃಹತ್ ಪ್ರತಿಭಟನೆ:

ಇನ್ನು ಜನವರಿ 10ರಂದು ಠೇವಣಿದಾರರಿಂದ ನೆಟ್ಟಕಲ್ಲಪ್ಪ ಸರ್ಕಲ್‌ನಲ್ಲಿರುವ ಮೈದಾನದಲ್ಲಿ ಪ್ರತಿಭಟನೆ ನಡೆಸಲು ಅವಕಾಶ ನಿರಾಕರಿಸಲಾಗಿದೆ. ಆದರೆ ಅದೇ ಮೈದಾನದಲ್ಲಿ ಶಾಸಕರು, ಸಂಸದರಿಗೆ ಬೇಕಾದ ಸಂಘಟನೆಗಳ ಕಾರ್ಯಕ್ರಮಗಳು ಮಾತ್ರ ನಿರಂತರವಾಗಿ ನಡೆಯುತ್ತಲೇ ಇವೆ. ಯಾರು ಏನೇ ಮಾಡಿದರೂ ಹೋರಾಟ ಮಾತ್ರ ನಿಲ್ಲುವುದಿಲ್ಲ. ಜನವರಿ 7 ರಂದು ಶಾಸಕರು, ಸಂಸದರ ಸನ್ಮಾನ ಸಮಾರಂಭಕ್ಕೆ ಸಹಕಾರ ಸಚಿವ ಎಸ್‌.ಟಿ.ಸೋಮಶೇಖರ್‌ ಆಗಮಿಸುತ್ತಿದ್ದು ಅಂದು ಠೇವಣಿದಾರರೆಲ್ಲಾ ಸೇರಿ ಸಚಿವರು, ಶಾಸಕರು, ಸಂಸದರಿಗೆ ಮುಖಾಮುಖಿ ಪ್ರಶ್ನೆ ಕೇಳುತ್ತೇವೆ ಎಂದು ಗುಹಾ ತಿಳಿಸಿದ್ದಾರೆ.

ಇದನ್ನೂ ಓದಿ: 3ನೇ ಅಲೆ ವೇಳೆ ಕೋವಿಡ್​ ಸೋಂಕಿತರ ಚಿಕಿತ್ಸೆಗೆ ಶೇ.75 ರಷ್ಟು ಬೆಡ್ ಮೀಸಲಿಡಲು ಆಸ್ಪತ್ರೆಗಳಿಗೆ ಸೂಚನೆ

Last Updated : Jan 7, 2022, 3:57 AM IST

For All Latest Updates

ABOUT THE AUTHOR

...view details