ಕರ್ನಾಟಕ

karnataka

ETV Bharat / city

ಬಿಡಿಎನಲ್ಲಿ ಏಜೆಂಟರ ಹಾವಳಿಗೆ ಕಡಿವಾಣ ಹಾಕಿ; ಸಿಎಂ ಸೂಚನೆ

ಬೆಂಗಳೂರು ಪೆರಿಫೆರಲ್ ರಿಂಗ್ ರಸ್ತೆ ನಿರ್ಮಾಣಕ್ಕೆ 21 ಸಾವಿರ ಕೋಟಿ ರೂಪಾಯಿ ಅಗತ್ಯವಿದ್ದು, ಇಸ್ರೇಲ್​ನ ಖಾಸಗಿ ಕಂಪನಿ ಹಾಗೂ ಇತರರು ಹಣ ಹೂಡಲು ಮುಂದೆ ಬಂದಿದ್ದಾರೆ ಎಂದು ಸಿಎಂ ಯಡಿಯೂರಪ್ಪನವರು ಪ್ರಗತಿ ಪರಿಶೀಲನಾ ಸಭೆ ನಡೆಸಿದ ಬಳಿಕ ಮಾಹಿತಿ ನೀಡಿದರು.

By

Published : Jan 18, 2021, 7:43 PM IST

ಸಿಎಂ ಪ್ರಗತಿ ಪರಿಶೀಲನಾ ಸಭೆ
ಸಿಎಂ ಪ್ರಗತಿ ಪರಿಶೀಲನಾ ಸಭೆ

ಬೆಂಗಳೂರು: ಬಿಡಿಎ ಅಭಿವೃದ್ಧಿ ಕಾಮಗಾರಿಗಳು, ಬಡಾವಣೆಗಳ ಅಭಿವೃದ್ಧಿ ಹಾಗೂ ಆಡಳಿತಕ್ಕೆ ಸಂಬಂಧಿಸಿದಂತೆ ಸಿಎಂ ಯಡಿಯೂರಪ್ಪನವರು ಇಂದು ಪ್ರಗತಿ ಪರಿಶೀಲನಾ ಸಭೆ ನಡೆಸಿದರು.

ಸಿಎಂ ಪ್ರಗತಿ ಪರಿಶೀಲನಾ ಸಭೆ

ಸಭೆ ಬಳಿಕ ಮಾತನಾಡಿದ ಸಿಎಂ, ಎರಡು ತಿಂಗಳಿಗೊಮ್ಮೆ ಇದೇ ರೀತಿಯ ಸಭೆ ಮಾಡಲಾಗುವುದು. ಸಭೆಯ ತೀರ್ಮಾನಗಳನ್ನು ಕಾರ್ಯರೂಪಕ್ಕೆ ತಂದ ಬಗ್ಗೆ ಪರಿಶೀಲನೆ ನಡೆಸಲಾಗುವುದು. ಜೊತೆಗೆ ಬಿಡಿಎಗೆ ಅಗತ್ಯವಿರುವ ಎಲ್ಲಾ ನೆರವನ್ನು ಸರ್ಕಾರ 24 ಗಂಟೆಯೊಳಗೆ ಒದಗಿಸಲಿದೆ ಎಂದರು.

ರೈತರಿಗೆ ಶೀಘ್ರ ಜಮೀನು ಮಂಜೂರು: ಬಿಡಿಎ ಬಡಾವಣೆಗಳ ನಿರ್ಮಾಣಕ್ಕೆ ಜಾಗ ನೀಡಿದ ರೈತರಿಗೆ ಶೇ 40 ರಷ್ಟು ಅಭಿವೃದ್ಧಿ ಹೊಂದಿದ ಜಮೀನು ನೀಡಲು ಸೂಚನೆ ನೀಡಲಾಗಿದೆ. ಆದರೆ ಸಾಕಷ್ಟು ರೈತರು ಜಮೀನು ಸಿಗದೆ ಪ್ರತಿನಿತ್ಯ ಕಚೇರಿಗೆ ಓಡಾಟ ಮಾಡುವಂತಾಗಿದ್ದು, ಹೀಗಾಗಿ ತಡ ಮಾಡದೇ ರೈತರಿಗೆ ಭೂ ಪರಿಹಾರ ಕೊಡಬೇಕು ಎಂದರು.

ಬಿಡಿಎಯಲ್ಲಿ 24 ಮಂದಿ ಹೆಚ್ಚುವರಿ ಎಂಜಿನಿಯರ್ಸ್, 196 ಮಂದಿ ವಕೀಲರಿದ್ದಾರೆ. ಅನಗತ್ಯವಾಗಿರುವವರನ್ನು ಪ್ಯಾನಲ್​ನಿಂದ ಕೈ ಬಿಡಲು ನಿರ್ಧಾರ ಮಾಡಲಾಗಿದೆ ಎಂದು ವಿಶ್ವನಾಥ್ ತಿಳಿಸಿದರು.

ಫೆರಿಫೆರಲ್ ರಿಂಗ್ ರಸ್ತೆ ನಿರ್ಮಾಣ: ಬೆಂಗಳೂರು ಪೆರಿಫೆರಲ್ ರಿಂಗ್ ರಸ್ತೆ ನಿರ್ಮಾಣಕ್ಕೆ 21 ಸಾವಿರ ಕೋಟಿ ರೂಪಾಯಿ ಅಗತ್ಯವಿದ್ದು, ಇಸ್ರೇಲ್​ನ ಖಾಸಗಿ ಕಂಪನಿ ಹಾಗೂ ಇತರರು ಹಣ ಹೂಡಲು ಮುಂದೆ ಬಂದಿದ್ದಾರೆ. ಈ ಕುರಿತು ಒಂದೆರಡು ತಿಂಗಳಲ್ಲಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಪಿಪಿಪಿ ಮಾದರಿಯಲ್ಲಿ ರಸ್ತೆ ನಿರ್ಮಾಣಕ್ಕೆ ಸರ್ಕಾರ ಮುಂದಾಗಿದೆ ಎಂದು ಸಿಎಂ ತಿಳಿಸಿದರು.

ಬಿಡಿಎ ಕಾಮಗಾರಿಗಳು ಸಾಕಷ್ಟು ಅರ್ಧಕ್ಕೆ ಸ್ಥಗಿತಗೊಂಡಿದ್ದು, ಶೀಘ್ರವಾಗಿ ಮುಗಿಸಲು ಕ್ರಮ ಕೈಗೊಳ್ಳಲಾಗಿದೆ. ಜೊತೆಗೆ ಈಗಾಗಲೇ ಬಿಡಿಎಯಿಂದ ನಿರ್ಮಾಣ ಮಾಡಿರುವ ಸಾವಿರಾರು ಫ್ಲಾಟ್​ಗಳನ್ನು ಮಾರಾಟ ಮಾಡಬೇಕಿದೆ. ಬಿಡಿಎನಲ್ಲಿ ಏಜೆಂಟ್ ಹಾವಳಿ ಇದ್ದು, ಇದನ್ನು ತಡೆಯಲು ಬಿಗಿಯಾದ ಕ್ರಮ ಕೈಗೊಳ್ಳಲು ಆಯುಕ್ತರಿಗೆ ತಿಳಿಸಲಾಗಿದೆ ಎಂದರು. ಜೊತೆಗೆ ಬಿಬಿಎಂಪಿಯಲ್ಲಿರುವ ಬಿಎಂಟಿಎಫ್ ಪೊಲೀಸ್ ತಂಡದಂತೆ ಬಿಡಿಎಗೂ ಹೆಚ್ಚುವರಿ ಸಿಬ್ಬಂದಿ ನೇಮಿಸಿ, ಪೊಲೀಸ್ ಟೀಂ ರಚನೆಗೆ ಸಿಎಂ ಸಮ್ಮತಿ ಸೂಚಿಸಿದರು.

ಬಳಿಕ ಮಾತನಾಡಿದ ಬಿಡಿಎ ಅಧ್ಯಕ್ಷ ಎಸ್.ಆರ್ ವಿಶ್ವನಾಥ್, ಸಿಎಂ ಎರಡು ಗಂಟೆಗಳ ಕಾಲ ಸುದೀರ್ಘ ಪ್ರಗತಿ ಪರಿಶೀಲನೆ ನಡೆಸಿದರು. ಬಿಡಿಎನಲ್ಲಿ ಒಟ್ಟು 65 ಸಾವಿರ ನಿವೇಶನ ಕೊಟ್ಟಿರುವ ಕೀರ್ತಿ ಇದೆ. ಅರ್ಕಾವತಿ, ಕೆಂಪೇಗೌಡ ಲೇಔಟ್‌ನಲ್ಲಿನ ರೈತರ ನಿವೇಶನ ನೀಡುವಂತೆ ಸೂಚಿಸಿದ್ದಾರೆ. ಒಂದು ತಿಂಗಳೊಳಗೆ ಅರ್ಕಾವತಿ ರೈತರಿಗೆ ನಿವೇಶನ ನೀಡಲಾಗುತ್ತದೆ. ಖಾಸಗಿ ಬಿಲ್ಡರ್ಸ್‌ಗೆ ಸೆಡ್ಡು ಹೊಡೆಯುವಂತೆ ಅಪಾರ್ಟ್ಮೆಂಟ್ ನಿರ್ಮಾಣ ಮಾಡಲಾಗುತ್ತದೆ. ಪಿಪಿಪಿ ಮಾಡೆಲ್‌ನಲ್ಲಿ ಪಿಆರ್​ಆರ್ ರಸ್ತೆ ನಿರ್ಮಾಣ, ರಿಂಗ್‌ರೋಡ್‌ ಪಕ್ಕದಲ್ಲಿ ಎಫ್ಎಆರ್ ಹೆಚ್ಚಳಕ್ಕೆ ನಿರ್ಧಾರ ಮಾಡಲಾಗಿದೆ ಎಂದರು.

ಬಿಡಿಎನಲ್ಲಿ ನಡೆದಿರುವ ಅಕ್ರಮಗಳ ಕುರಿತು ತನಿಖೆ ಸಿಎಂ ಸೂಚಿಸಿದ್ದಾರೆ. ಸಗಟು ವಿತರಣೆ ಮಾಡುವ ನೆಪದಲ್ಲಿ ಅಕ್ರಮ ಮಾಡಲಾಗಿದೆ ಎನ್ನಲಾಗಿದೆ. ಕೆಸಿ ಕೊಂಡಯ್ಯ, ಮನಗೂಳಿ ಸೇರಿದಂತೆ ಹಲವು ಶಾಸಕರಿಗೆ 20 ವರ್ಷಗಳ ಹಿಂದೆ ಸೈಟ್ ನೀಡಲಾಗಿತ್ತು. ಆದ್ರೆ ಕೆಲವು ಕಾರಣಗಳಿಂದ ಅಲ್ಲಿ ತೊಂದರೆಯಾದ ಮೇಲೆ ಇದುವರೆಗೂ ಬೇರೆ ಕಡೆ ಸೈಟ್ ಕೊಟ್ಟಿಲ್ಲ.‌ ಹಾಗಾಗಿ ಎಸ್‌ಐಟಿ ತನಿಖೆ ನಡೆಸಿ, ಬಿಡಿಎಗೆ ವಾಪಸ್ ತೆಗೆದುಕೊಳ್ಳಲು ಸಿಎಂ ಸೂಚಿಸಿದ್ದಾರೆ ಎಂದರು.

ಸುಪ್ರೀಂ ಕೋರ್ಟ್ ಸೇರಿದಂತೆ ವಿವಿಧ ಕೋರ್ಟ್​ಗಳಲ್ಲಿ ಸುಮಾರು 6,300 ಕೇಸ್‌ಗಳಿವೆ. ಪೆರಿಫೆರಲ್ ರಿಂಗ್ ರಸ್ತೆ ನಿರ್ಮಾಣವಾದ್ರೆ ಟೋಲ್ ಸುಂಕ ಬರಲಿದೆ. ಸಾರ್ವಜನಿಕರಿಗೆ ದುಬಾರಿಯಾಗದ ರೀತಿಯಲ್ಲಿ 12 ಕಡೆಗಳಲ್ಲಿ ಟೋಲ್ ಸಂಗ್ರಹ ಮಾಡಲಾಗುವುದು. ತುಮಕೂರು, ಯಲಹಂಕ, ಕೆ.ಆರ್ ಪುರಂ, ಏರ್ ಪೋರ್ಟ್, ವರ್ತೂರು, ಹೊಸೂರು, ಹೊಸಕೋಟೆ ಭಾಗಗಳಲ್ಲಿ ಪಿಆರ್​ಆರ್ ರಸ್ತೆ ನಿರ್ಮಾಣವಾಗಲಿದೆ ಎಂದರು.

ABOUT THE AUTHOR

...view details