ಬೆಂಗಳೂರು:ಮನೆ ಮಾಲೀಕನ ಮಗನ ಹೆಸರಿನಲ್ಲಿ ಡೆತ್ ನೋಟ್ ಬರೆದು ಫ್ಯಾನ್ಗೆ ನೇಣು ಬಿಗಿದುಕೊಂಡು 12 ವರ್ಷದ ಬಾಲಕ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬಸವೇಶ್ವರ ನಗರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಈತನ ತಂದೆ ಸಿದ್ದರಾಜು ಲಾರಿ ಚಾಲಕರಾದರೆ, ತಾಯಿ ಲಿಂಗಮ್ಮ ಮನೆ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ಮೂಲತಃ ಮಂಡ್ಯದರಾಗಿದ್ದು, ಕಳೆದೊಂದು ವರ್ಷದ ಹಿಂದೆ ಬಸವೇಶ್ವರ ನಗರದ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು. ಆರನೇ ತರಗತಿ ವ್ಯಾಸಂಗ ಮಾಡುತ್ತಿದ್ದ ಬಾಲಕ ಕೊರೊನಾ ಬಿಕ್ಕಟ್ಟು ಹಿನ್ನೆಲೆಯಲ್ಲಿ ಶಾಲೆಗೆ ಹೋಗಿರಲಿಲ್ಲ. ಎಲ್ಲಾ ಮಕ್ಕಳಂತೆ ಈತನು ಮನೆ ಮುಂದೆ ಆಟವಾಡುತ್ತಿದ್ದ.
ಬುಧವಾರ ತಂದೆ-ತಾಯಿ ಇಲ್ಲದಿರುವುದನ್ನು ಗಮನಿಸಿ ಸ್ನೇಹಿತರಿಗೆ ಸಾಯುತ್ತೇನೆ ಎಂದು ಹೇಳಿ ಮನೆಗೆ ಬಂದಿದ್ದಾನೆ. ದರ್ಶನ್ ಮಾತು ಸ್ನೇಹಿತರಿಗೆ ಅರ್ಥವಾಗಿರಲಿಲ್ಲ. ಬಳಿಕ ಮನೆಯೊಳಗೆ ಬಂದು ಫ್ಯಾನ್ ಹಗ್ಗ ಕಟ್ಟಿಕೊಂಡು ಸಾವನ್ನಪ್ಪಿದ್ದಾನೆ. ಕೆಲಸ ಮುಗಿಸಿ ಮನೆಗೆ ಬಂದ ಪೋಷಕರು, ಮಗ ಆತ್ಮಹತ್ಯೆ ಮಾಡಿಕೊಂಡಿರುವುದನ್ನು ನೋಡಿ ಆಘಾತಕ್ಕೊಳಗಾಗಿದ್ದಾರೆ.