ಅಥಣಿ/ಬೆಳಗಾವಿ :ಅಥಣಿತಾಲೂಕಿನ ಕೊಕಟನೂರ ಪಶು ಮಹಾ ವೈದ್ಯಕೀಯ ಕಾಲೇಜಿನ ಕಾಮಗಾರಿಯನ್ನು ಡಿಸಿಎಂ ಲಕ್ಷ್ಮಣ್ ಸವದಿ ಪರಿಶೀಲನೆ ನಡೆಸಿದ್ರು. ಇದೇ ವೇಳೆ ನೂತನ ಕಾಲೇಜಿನ ಉದ್ಘಾಟನೆಗೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಬರಬಹುದು ಎಂದರು.
ಕಾಲೇಜು ಕಾಮಗಾರಿ ಪ್ರಗತಿ ಕುರಿತು ಈಟಿವಿ ಭಾರತದ ಜೊತೆ ಮಾತನಾಡಿದ ಡಿಸಿಎಂ ಸವದಿ, ಕಳೆದ ವಾರದ ಹಿಂದೆ ಸಚಿವ ಸಂಪುಟದಲ್ಲಿ ಪಶು ವೈದ್ಯಕೀಯ ಕಾಲೇಜಿಗೆ ಬಾಕಿ ಉಳಿದಿರುವ ಕಾಮಗಾರಿಗೆ 36 ಕೋಟಿ ರೂಪಾಯಿ ಬಿಡುಗಡೆ ಮಾಡಲಾಗಿತ್ತು. ಇನ್ನು, 15 ದಿನಗಳಲ್ಲಿ ಮತ್ತೊಮ್ಮೆ ಸಚಿವ ಸಂಪುಟ ಸಭೆಯಲ್ಲಿ ಉಳಿದ 25 ಕೋಟಿ ರೂಪಾಯಿ ಬಿಡುಗಡೆ ಮಾಡಿ, ಕೆಲಸವನ್ನು ಪೂರ್ಣ ಮಾಡಲಾಗುವುದು ಎಂದು ಹೇಳಿದ್ರು.
ಪಶು ವೈದ್ಯಕೀಯ ಕಾಲೇಜು ಉದ್ಘಾಟನೆಗೆ ಪಿಎಂ ಮೋದಿ ಬರಬಹುದು : ಡಿಸಿಎಂ ಸವದಿ ಕಳೆದ ಹತ್ತು ವರ್ಷಗಳಿಂದ ಕಾರ್ಯ ಪ್ರಗತಿಯಲ್ಲಿದೆ. ಕಳೆದ ಬಾರಿ ಕಾಂಗ್ರೆಸ್ ಸರ್ಕಾರ ಹಣ ಬಿಡುಗಡೆ ಮಾಡದೇ ಇರುವುದರಿಂದ ಕಾಮಗಾರಿ ವಿಳಂಬವಾಗಿದೆ. ಮತ್ತೆ ನಮ್ಮ ಸರ್ಕಾರ ಬಂದಿರೋದ್ರಿಂದ ಕಾಮಗಾರಿ ಈಗ ತ್ವರಿತವಾಗಿ ನಡೆಯುತ್ತಿದೆ. ಮುಂದಿನ ವರ್ಷ ಉದ್ಘಾಟನೆ ಮಾಡಲಾಗುವುದು ಎಂದರು.
ಅಥಣಿ ಉಪಚುನಾವಣೆ ಸಂದರ್ಭದಲ್ಲಿ ಮುಖ್ಯಮಂತ್ರಿ ಅವರು ಅಥಣಿಗೆ ಕೃಷಿ ಮಹಾ ವಿದ್ಯಾಲಯ ಕಾಲೇಜು ಮಂಜೂರು ಮಾಡಲಾಗುವುದೆಂದು ಭರವಸೆ ನೀಡಿದರು. ಸದ್ಯ ಕೊರೊನಾ ಹಿನ್ನೆಲೆ ಕಾಮಗಾರಿ ನಿಧಾನಗತಿಯಲ್ಲಿದೆ. ಕೆಲವೇ ದಿನಗಳಲ್ಲಿ ಸಿಎಂ ಯಡಿಯೂರಪ್ಪ ಅಥಣಿಗೆ ಬಂದು ಭೂಮಿ ಪೂಜೆ ನೆರವೇರಿಸುವರು ಎಂದು ತಿಳಿಸಿದರು.
ಇದನ್ನೂ ಓದಿ:ಪಕ್ಷದಲ್ಲಿದ್ದುಕೊಂಡು ಮೋಸ ಮಾಡಿದವರನ್ನ ಮನೆಗೆ ಕಳಿಸದೇ ಬಿಡಲ್ಲ: ರಮೇಶ್ ಜಾರಕಿಹೊಳಿ