ಕರ್ನಾಟಕ

karnataka

ಬಿಎಸ್​ವೈ ಸಂಪುಟದಲ್ಲಿ ಬೆಳಗಾವಿಗೆ ಜಾಕ್ ಪಾಟ್: ಗಡಿ ಜಿಲ್ಲೆಯ ಐವರಿಗೆ ಮಂತ್ರಿಗಿರಿ

By

Published : Jan 14, 2021, 7:26 PM IST

ಒಂದು ಡಿಸಿಎಂ ಸ್ಥಾನ ಒಳಗೊಂಡಂತೆ ಜಿಲ್ಲೆಗೆ ಐದು ಸಚಿವ ಸ್ಥಾನ ಲಭಿಸಿದೆ. ಈ ಮೂಲಕ ಅಧಿಕಾರದ ಸುಗ್ಗಿ ಒದಗಿ ಬಂದಿದೆ. ಅಲ್ಲದೇ ನಿಗಮ, ಮಂಡಳಿ ಮತ್ತು ಮಹತ್ವದ ಸ್ಥಾನಮಾನಗಳಲ್ಲಿಯೂ ಬೆಳಗಾವಿಗೆ ಸಿಂಹಪಾಲು ಸಿಕ್ಕಿದೆ. ಹೀಗಾಗಿ ಬೆಳಗಾವಿ ಬಿಜೆಪಿಯ ಮತ್ತೊಂದು ಶಕ್ತಿ ಕೇಂದ್ರವಾಗಿಯೂ ಹೊರಹೊಮ್ಮುತ್ತಿದೆ.

five-belagavi-district-mlas-got-minister-position
ಗಡಿ ಜಿಲ್ಲೆ ಬೆಳಗಾವಿ

ಬೆಳಗಾವಿ:ಬೆಂಗಳೂರು ನಂತ್ರ ಅತಿಹೆಚ್ಚು ವಿಧಾನಸಭೆ ಕ್ಷೇತ್ರಗಳನ್ನು ಹೊಂದಿರುವ, ಭೌಗೋಳಿಕವಾಗಿ ರಾಜ್ಯದ ಎರಡನೇ ಅತಿದೊಡ್ಡ ಜಿಲ್ಲೆ ಎಂಬ ಕೀರ್ತಿಗೆ ಕುಂದಾನಗರಿ ಪಾತ್ರವಾಗಿದೆ. ಹೀಗಾಗಿ, ಹಿಂದೆಂದೂ ಸಿಗದಷ್ಟು ರಾಜಕೀಯ ಪ್ರಾತಿನಿಧ್ಯ ಇದೀಗ ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದ ಸರ್ಕಾರದಲ್ಲಿ ಸಿಕ್ಕಿದೆ.

ಒಂದಲ್ಲ, ಎರಡಲ್ಲ ಐವರಿಗೆ ಮಂತ್ರಿಗಿರಿ

ಮೈತ್ರಿ ಸರ್ಕಾರ ಪತನದ ಬಳಿಕ ಅಸ್ತಿತ್ವಕ್ಕೆ ಬಂದ ಬಿಜೆಪಿ ಸರ್ಕಾರದ ಆರಂಭದಲ್ಲಿ ಲಕ್ಷ್ಮಣ ಸವದಿಗೆ ಡಿಸಿಎಂ ಹಾಗೂ ಸಾರಿಗೆ ಇಲಾಖೆ ಖಾತೆ, ನಿಪ್ಪಾಣಿ ಶಾಸಕಿ ಶಶಿಕಲಾ ಜೊಲ್ಲೆಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಖಾತೆ ಹೊಣೆ ನೀಡಲಾಗಿತ್ತು.

ಬಳಿಕ ರಾಜ್ಯದಲ್ಲಿ 15 ಸ್ಥಾನಗಳಿಗೆ ನಡೆದ ಉಪಚುನಾವಣೆಯಲ್ಲಿ ಗೆಲುವು ದಾಖಲಿಸಿದ ಗೋಕಾಕ ಶಾಸಕ ರಮೇಶ್ ಜಾರಕಿಹೊಳಿ‌ ಜಲಸಂಪನ್ಮೂಲ ಹಾಗೂ ಬೆಳಗಾವಿ ಉಸ್ತುವಾರಿ ಮತ್ತು ಕಾಗವಾಡ ಶಾಸಕ ಶ್ರೀಮಂತ ಪಾಟೀಲಗೆ ಜವಳಿ ಖಾತೆ ನೀಡಲಾಗಿತ್ತು.

ಇದನ್ನೂ ಓದಿ: ಅಗತ್ಯ ಬಿದ್ದರೆ 17 ಮಂದಿ ಶಾಸಕರು ಮತ್ತೊಮ್ಮೆ ಸಭೆ ಸೇರಲಿದ್ದೇವೆ: ಸಚಿವ ಆರ್‌‌. ಶಂಕರ್

ಹೀಗಿದ್ದರೂ, ನಿನ್ನೆ ನಡೆದ ಸಂಪುಟ ವಿಸ್ತರಣೆಯಲ್ಲಿ ಹುಕ್ಕೇರಿ ಶಾಸಕ ಉಮೇಶ್ ಕತ್ತಿಗೆ ಮಂತ್ರಿ ಸ್ಥಾನ ನೀಡಲಾಗಿದೆ. (ಇನ್ನೂ ಖಾತೆ ಹಂಚಿಕೆ ಆಗಿಲ್ಲ) ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದಾಗಿನಿಂದ ಉಮೇಶ್ ‌ಕತ್ತಿ ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿ ‌ಆಗಿದ್ದರು. ಎರಡು ಸಲ ನಡೆದ ಸಂಪುಟ ವಿಸ್ತರಣೆ ವೇಳೆ ನಿರಾಶೆಗೆ ಒಳಗಾಗಿದ್ದ ಕತ್ತಿ ಮತ್ತೊಮ್ಮೆ ಮಂತ್ರಿಗಿರಿ ಪಡೆದಿದ್ದಾರೆ. ಇದರಿಂದ ಜಿಲ್ಲೆಯಲ್ಲಿ ಸಚಿವ ಸ್ಥಾನ ಪಡೆದವರ ಸಂಖ್ಯೆ ಐದಕ್ಕೇರಿದೆ.

ನಿಗಮ, ಮಂಡಳಿಗಳಲ್ಲೂ ಸಿಂಹಪಾಲು

ಐವರಿಗೆ ಮಂತ್ರಿ ಸ್ಥಾನ ಸಿಕ್ಕಿದ್ದರೂ ನಿಗಮ ಮಂಡಳಿ ಹಂಚಿಕೆಯಲ್ಲೂ ಬೆಳಗಾವಿಗೆ ಸಿಂಹಪಾಲು ಸಿಕ್ಕಿದೆ. ಕುಡಚಿ ಶಾಸಕ ಪಿ. ರಾಜೀವ್ ತಾಂಡಾ ಅಭಿವೃದ್ಧಿ, ಅಥಣಿ ಶಾಸಕ ಮಹೇಶ ಕುಮಟಳ್ಳಿಗೆ ಕೊಳಗೇರಿ ಅಭಿವೃದ್ಧಿ ಮಂಡಳಿ, ರಾಯಭಾಗ ಶಾಸಕ ದುರ್ಯೋಧನ ಐಹೊಳೆ ಆದಿ ಜಾಂಬವ ನಿಗಮ ನೀಡಲಾಗಿದೆ.

ಮುಖ್ಯಮಂತ್ರಿ ಆಪ್ತರಾದ ಮಾಜಿ ಶಾಸಕ ಡಾ.ವಿಶ್ವನಾಥ ಪಾಟೀಲ ಅವರಿಗೆ ಕಾಡಾ, ಗೂಳಪ್ಪ ಹೊಸಮನಿಗೆ ಬುಡಾ ಅಧ್ಯಕ್ಷ ಸ್ಥಾನ ನೀಡಲಾಗಿದೆ.

ಕುಂದಾನಗರಿಗೆ ಮಹತ್ವದ ಸ್ಥಾನಮಾನ

ಮಂತ್ರಿಗಿರಿ ಹಾಗೂ ನಿಗಮ ಮಂಡಳಿ ಜೊತೆಗೆ ಬೆಳಗಾವಿಯ ರಾಜಕೀಯ ನಾಯಕರಿಗೆ ಉನ್ನತ ಸ್ಥಾನಮಾನಗಳು ಲಭಿಸಿವೆ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರ ಅತ್ಯಾಪ್ತ ಶಂಕರಗೌಡ ಪಾಟೀಲಗೆ ದೆಹಲಿ ವಿಶೇಷ ಪ್ರತಿನಿಧಿ, ಸವದತ್ತಿ ಶಾಸಕ ಆನಂದ ಮಾಮನಿಗೆ ಉಪಸಭಾಪತಿ, ಅರಬಾಂವಿ ಶಾಸಕ ಬಾಲಚಂದ್ರ ಜಾರಕಿಹೊಳಿ‌ಗೆ ಕೆಎಂಎಫ್ ಅಧ್ಯಕ್ಷ ಸ್ಥಾನ, ಮಹಾಂತೇಶ ಕವಟಗಿಮಠ ಅವರು ಪರಿಷತ್ ಸರ್ಕಾರದ ಮುಖ್ಯಸಚೇತಕ ಜವಾದ್ಬಾರಿ ಹೊತ್ತುಕೊಂಡಿದ್ದಾರೆ.

ಬಿಜೆಪಿಯಷ್ಟೇ ಅಲ್ಲದೇ ಕಾಂಗ್ರೆಸ್ ಕೂಡ ಬೆಳಗಾವಿಯನ್ನು ಕಡೆಗಣಿಸಿಲ್ಲ. ಯಮಕನಮರಡಿ ಶಾಸಕ ಸತೀಶ್ ಜಾರಕಿಹೊಳಿ‌ ಕೆಪಿಸಿಸಿ ಕಾರ್ಯಾಧ್ಯಕ್ಷ ಸ್ಥಾನ, ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಹಾಗೂ ಖಾನಾಪುರ ಶಾಸಕಿ ಅಂಜಲಿ ನಿಂಬಾಳ್ಕರಗೆ ಕೆಪಿಸಿಸಿ ವಕ್ತಾರೆ ಜವಾಬ್ದಾರರಿ ನೀಡಲಾಗಿದೆ. ಇಷ್ಟೇಲ್ಲ ಸ್ಥಾನಮಾನ ಸಿಕ್ಕರೂ ಅಭಿವೃದ್ಧಿಯಲ್ಲಿ ಮಾತ್ರ ಜಿಲ್ಲೆ ವೇಗ ಪಡೆಯುತ್ತಿಲ್ಲ ಎಂಬುವುದು ಜಿಲ್ಲೆಯ ಜನರ ಬೇಸರಕ್ಕೆ ಕಾರಣವಾಗಿದೆ.

ABOUT THE AUTHOR

...view details