ನವದೆಹಲಿ: ಶ್ರೀಲಂಕಾದ ನೂತನ ಅಧ್ಯಕ್ಷ ಗೋಟಬಯ ರಾಜಪಕ್ಸೆ ಇಂದು ಭಾರತಕ್ಕೆ ಆಗಮಿಸಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ಆತ್ಮೀಯವಾಗಿ ಬರಮಾಡಿಕೊಂಡರು.
ಶ್ರೀ ಲಂಕಾದ ನೂತನ ಅಧ್ಯಕ್ಷರಾಗಿ ಗೋಟಬಯ ಆಯ್ಕೆ ಆಗುತ್ತಿದ್ದಂತೆ ಪ್ರಧಾನಿ ಮೋದಿ ಅವರು, ಭಾರತಕ್ಕೆ ಭೇಟಿ ನೀಡುವಂತೆ ಆಹ್ವಾನಿಸಿದ್ದರು. ಮೋದಿಯ ಆಹ್ವಾನ ಸ್ವೀಕರಿಸಿದ ರಾಜಪಕ್ಸೆ ಇಂದು ದೆಹಲಿಗೆ ಬಂದಿಳಿದರು.
ರಾಜಪಕ್ಸೆ ಅವರು ರಾಜ್ಘಾಟ್ನಲ್ಲಿರುವ ಮಹಾತ್ಮಾ ಗಾಂಧಿ ಸಮಾಧಿಗೆ ತೆರಳಿ ಗೌರವ ವಂದನೆ ಸಲ್ಲಿಸಿದರು. ಇದಕ್ಕೂ ಮೊದಲು ಪ್ರಧಾನಿ ಮೋದಿ ಹಾಗೂ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ರಾಜಪಕ್ಸೆ ಅವರನ್ನು ಸ್ವಾಗತಿಸಿದರು.
ಗೋಟಬಯಾ ಮತ್ತು ಮೋದಿ ಇಂದು ಭೇಟಿ ಆಗಲಿದ್ದು, ಅರ್ಧಕ್ಕೆ ಸ್ಥಗಿತಗೊಂಡಿದ್ದ ಭಾರತೀಯ ಯೋಜನೆಗಳ ಮುಂದುವರಿಕೆ ಮತ್ತು ಭಯೋತ್ಪಾದನಾ ನಿಗ್ರಹ ಕಾರ್ಯತಂತ್ರದ ಬಗ್ಗೆ ಚರ್ಚಿಸಲಿದ್ದಾರೆ. ಹೊಸದಾಗಿ ಚುನಾಯಿತರಾದ ಶ್ರೀಲಂಕಾ ಸರ್ಕಾರದ ಜೊತೆಗೆ ಭಾರತದ ಯೋಜನೆಗಳು ಮುಂದುವರಿಸಿಕೊಂಡು ಹೋಗಲು ಮೋದಿ ಉತ್ಸುಕರಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.
ರಾಜಪಕ್ಸೆ ಅವರಿಗೆ ಗೌರವದ ಸ್ವಾಗತ ಕೋರಿದ ಸೇನಾ ಸಿಬ್ಬಂದಿ ಶ್ರೀಲಂಕಾದಲ್ಲಿ ಭಾರತೀಯ ಯೋಜನೆಗಳ ಮುಂದುವರಿಕೆ ಕುರಿತು ಉಭಯ ನಾಯಕರು ಚರ್ಚಿಸಲಿರುವ ವಿಷಯಗಳಲ್ಲಿ ವಸತಿ ಯೋಜನೆಗಳು, ತೈಲ ಟ್ಯಾಂಕರ್ ಮತ್ತು ರೈಲ್ವೆ ಮಾರ್ಗದಂತಹ ಯೋಜನೆಗಳು ಸೇರಿವೆ.
''ನನ್ನ ಅಧ್ಯಕ್ಷತೆಯ ಅವಧಿಯಲ್ಲಿ ಶ್ರೀಲಂಕಾ-ಭಾರತ ಸಂಬಂಧವನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯಲು ಬಯಸುತ್ತೇನೆ. ಉಭಯ ದೇಶಗಳು ದೀರ್ಘಕಾಲದ ಸ್ನೇಹವನ್ನು ಹೊಂದಿವೆ. ನಮ್ಮ ಜನರ ಆರ್ಥಿಕ ಅಭಿವೃದ್ಧಿ ಮತ್ತು ಸುರಕ್ಷತೆಗಾಗಿ ನಾವು ಒಟ್ಟಾಗಿ ಕೆಲಸ ಮಾಡಬೇಕಾಗಿದೆ'' ಎಂದು ರಾಜಪಕ್ಸೆ ಈ ವೇಳೆ ಹೇಳಿದ್ದಾರೆ.
ಶ್ರೀಲಂಕಾ ಅಧ್ಯಕ್ಷ ರಾಜಪಕ್ಸೆ ಭಾರತ ಮತ್ತು ಶ್ರೀಲಂಕಾ ನಡುವೆ ಸಾಂಸ್ಕೃತಿಕ, ವಾಣಿಜ್ಯಾತ್ಮಕ ಸಂಬಂಧಗಳು ಮೊದಲಿನಿಂದಲೂ ಉತ್ತಮವಾಗಿವೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಚೀನಾದ ತಂತ್ರಗಾರಿಕೆಯಿಂದ ಲಂಕಾ ಭಾರತದ ಸ್ನೇಹದಿಂದ ದೂರ ಸರಿಯುತ್ತಿದೆ. ಶ್ರೀಲಂಕಾದ ಹೊಸ ಪಯಣದಲ್ಲಿ ವಿದೇಶಾಂಗ ನೀತಿಯ ದಿಕ್ಕು ಈ ಭೇಟಿಯ ಮೂಲಕ ಬದಲಾಗುತ್ತ ಎಂಬುದನ್ನು ಕಾದು ನೋಡಬೇಕಿದೆ. ಶ್ರೀಲಂಕಾದಲ್ಲಿ ಚೀನಾ ಈಗಾಗಲೇ 24 ಸಾವಿರ ಕೋಟಿ ರೂ. ಮೊತ್ತದ ಯೋಜನೆಗಳ ಗುತ್ತಿಗೆ ಪಡೆದಿದೆ. ಆದರೆ, ಈ ಯೋಜನೆಗಳಿಗೆ ಶ್ರೀಲಂಕಾದ ಬ್ಯಾಂಕ್ಗಳೇ ಸಾಲ ನೀಡಿವೆ.