ಚೆನ್ನೈ: ವಾಹನಗಳನ್ನು ಖರೀದಿಸುವ ಜನರ ಮನಸ್ಥಿತಿ ಬದಲಾಗಿದ್ದು, ಸ್ವಂತ ವಾಹನ ಹೊಂದುವ ಬದಲು ಓಲಾ ಅಥವಾ ಉಬರ್ ನಂತಹ ಸೇವೆಗಳನ್ನು ಪಡೆಯಲು ಜನ ಬಯಸಿದ್ದಾರೆ. ಹೀಗಾಗಿ, ಆಟೋಮೊಬೈಲ್ ಉದ್ಯಮವುಕುಸಿತ ಕಾಣುತ್ತಿದೆ ಎಂದು ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ಡಿಎ-2ನೇ ಅವಧಿಯ ಸರ್ಕಾರ 100 ದಿನ ಪೂರೈಸಿದ ಸಾಧನೆಯ ಕುರಿತು ಮಾತನಾಡಿದ ಅವರು, ದೇಶಾದ್ಯಂತ ಕೈಗಾರಿಕಾ ಕ್ಷೇತ್ರಗಳ ಪ್ರತಿನಿಧಿಗಳೊಂದಿಗೆ ಸರ್ಕಾರ ಮಾತುಕತೆಯಲ್ಲಿ ತೊಡಗಿದೆ. ಅವರು ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸಲು ಸರ್ಕಾರ ಸಿದ್ಧವಾಗಿದೆ ಎಂದರು.
ಆಟೋಮೊಬೈಲ್ ಉದ್ಯಮವು ಬಿಎಸ್ 6 ಮತ್ತು ವಾಹನಗಳನ್ನು ಖರೀದಿಸುವ ಜನರ ಮನಸ್ಥಿತಿ ಬದಲಾಗಿದೆ ಕುಸಿತಕ್ಕೆ ಕಾರಣವಾಗಿದೆ. ಸ್ವಂತ ವಾಹನ ಹೊಂದುವ ಬದಲು ಓಲಾ ಅಥವಾ ಉಬರ್ ನಂತಹ ಸೇವೆಗಳನ್ನು ಪಡೆಯಲು ಜನರು ಬಯಸಿದ್ದಾರೆ. ಕೇಂದ್ರ ಸರ್ಕಾರವು ಆಟೋಮೊಬೈಲ್ ಎದುರಿಸುತ್ತಿರುವ ಸಮಸ್ಯೆಗಳನ್ನು ನಿವಾರಿಸಲು ಕೈಗೊಳ್ಳಬೇಕಾದ ಕ್ರಮಗಳನ್ನು ಪಟ್ಟಿ ಮಾಡುತ್ತಿದೆ ಎಂದು ಸೀತಾರಾಮನ್ ಹೇಳಿದ್ದಾರೆ.
ಸರ್ಕಾರವು ಮೂಲಸೌಕರ್ಯಗಳಿಗೆ ಹಣ ಖರ್ಚು ಮಾಡಲು ಆರಂಭಿಸಿದಾಗ ಅನುಭೋಗದ ಪ್ರಮಾಣ ಹೆಚ್ಚಗಲಿದೆ. ಮೂಲಸೌಕರ್ಯ ಕ್ಷೇತ್ರದ ಯೋಜನೆಗಳಿಗೆ 100 ಲಕ್ಷ ಕೋಟಿ ರೂ. ಅನುದಾನ ಘೋಷಿಸಲಾಗಿದೆ. ಟಾಸ್ಕ್ ಫೋರ್ಸ್ (ಕಾರ್ಯಪಡೆಯ ತಂಡ) ತನ್ನ ವರದಿಯನ್ನು ಸಲ್ಲಿಸಿದ ಬಳಿಕ ವರದಿಯಲ್ಲಿನ ಅಂಶಗಳ ಆಧಾರದ ಮೇಲೆ ಕೇಂದ್ರ ಸರ್ಕಾರವು ಅನುದಾನದ ಹಂಚಿಕೆ ಮಾಡಲಿದೆ. ಕಾರ್ಯಪಡೆಯು ಹೂಡಿಕೆ ಯೋಜನೆಗಳ ಗುರುತಿಸುವ ಪ್ರಕ್ರಿಯೆಯು ಪ್ರಗತಿಯ ಹಂತದಲ್ಲಿದ್ದು, ಒಮ್ಮೆ ಅದರ ವರದಿ ಬಂದ ನಂತರ ಅನುದಾನ ಹಂಚಿಕೆ ಮಾಡಲಾಗುತ್ತದೆ ಎಂದು ತಿಳಿಸಿದರು.
ಜೂನ್ನಿಂದ ಕೊನೆಗೊಂಡ ಮೊದಲ ತ್ರೈಮಾಸಿಕದಲ್ಲಿ ಜಿಡಿಪಿ ಬೆಳವಣಿಗೆಯ ಕುಸಿತದ ಬಗ್ಗೆ ಪ್ರತಿಕ್ರಿಯಿಸಿದ ಅವರು, 'ಈ ಹಿಂದೆಯೂ ಇಂತಹ ಕುಸಿತಗಳು ಸಂಭವಿಸಿವೆ. ಜಿಡಿಪಿ ಕೆಲವೊಮ್ಮೆ ಹೆಚ್ಚಾಗುತ್ತದೆ ಮತ್ತು ಕೆಲವೊಮ್ಮೆ ಕಡಿಮೆಯಾಗುತ್ತದೆ. ಜಿಡಿಪಿ ಬೆಳವಣಿಗೆ ಹೆಚ್ಚಿಸಲು ಸರ್ಕಾರ ಎಲ್ಲ ರೀತಿಯ ಕೆಲಸಗಳನ್ನು ಮಾಡುತ್ತಿದೆ' ಎಂದರು.