ಅಮೇಠಿ:ಪ್ರಧಾನಿ ಮೋದಿ ವಿರುದ್ಧ ನಾನೇಕೆ ನಿಲ್ಲಲಿಲ್ಲ ಎಂಬ ಬಗ್ಗೆ ಉತ್ತರ ಪ್ರದೇಶ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಕೊನೆಗೂ ಬಾಯ್ಬಿಟ್ಟಿದ್ದಾರೆ. ವಾರಣಾಸಿಯಲ್ಲಿ ಪ್ರಧಾನಿ ವಿರುದ್ಧ ಸೆಣಸುವ ಕುರಿತಂತೆ ಕಾಂಗ್ರೆಸ್ ಪಕ್ಷದ ಎಲ್ಲ ಹಿರಿಯ ನಾಯಕರಿಂದ ಸಲಹೆ ಪಡೆದಿದ್ದೇನೆ. ಇನ್ನು ಪಕ್ಷದ ಸಹೋದ್ಯೋಗಿಗಳೊಂದಿಗೆ ಚರ್ಚಿಸಿ ಈ ನಿರ್ಧಾರ ಕೈಗೊಂಡಿರುವುದಾಗಿ ಅವರು ಸ್ಪಷ್ಟಪಡಿಸಿದ್ದಾರೆ.
ನಾನೇಕೆ ವಾರಣಾಸಿಯಿಂದ ನಿಲ್ಲಬಾರದು ಎನ್ನುವ ಮೂಲಕ ಪ್ರಧಾನಿ ವಿರುದ್ಧ ಸ್ಪರ್ಧಿಸುವ ಸುಳಿವು ನೀಡಿದ್ದ ಪ್ರಿಯಾಂಕಾ ಗಾಂಧಿ, ದೇಶದ ಹಾಗೂ ವಿಶ್ವದ ಗಮನ ಸೆಳೆದಿದ್ದರು. ಆದರೆ, ವಾರಣಾಸಿಯಿಂದ ಅಜೆಯ್ ರಾವ್ಗೆ ಕಾಂಗ್ರೆಸ್ ಟಿಕೆಟ್ ಘೋಷಣೆ ಮಾಡುವ ಮೂಲಕ ಪ್ರಧಾನಿ ವಿರುದ್ಧದ ಸ್ಪರ್ಧೆಯಿಂದ ಪ್ರಿಯಾಂಕಾ ಹಿಂದೆ ಸರಿದಿದ್ದರು.
ಈ ಬಗ್ಗೆ ದೇಶಾದ್ಯಂತ ವ್ಯಾಪಕ ಚರ್ಚೆ ನಡೆದಿತ್ತು. ಪ್ರಿಯಾಂಕಾ ಸ್ಪರ್ಧೆಯಿಂದ ಹಿಂದೆ ಸರಿಯಲು ಕಾರಣ ಏನು ಬಗ್ಗೆ ವಿಶ್ಲೇಷಣೆಗಳ ಸರ ಮಾಲೆಯೇ ಬಂದಿತ್ತು. ಇದೆಲ್ಲದಕ್ಕೂ ಪ್ರಿಯಾಂಕಾ ಗಾಂಧಿ ತೆರೆ ಎಳೆದಿದ್ದಾರೆ.
ನಾನು ಪೂರ್ವ ಉತ್ತರಪ್ರದೇಶದ ಹೊಣೆ ಹೊತ್ತಿದ್ದು, ಅಲ್ಲಿನ 41 ಸೀಟುಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆಗಳ ಹಿನ್ನೆಲೆಯಲ್ಲಿ ವಾರಣಾಸಿ ಸ್ಪರ್ಧೆಯಿಂದ ಹಿಂದೆ ಸರಿಯಬೇಕಾಯಿತು ಎಂದಿದ್ದಾರೆ. ಅಷ್ಟೇ ಅಲ್ಲ ನಾನು ವಾರಣಾಸಿಯಿಂದ ನಿಂತರೆ, ಸಂಪೂರ್ಣ ಆ ಕ್ಷೇತ್ರದತ್ತಲೇ ಗಮನ ಹರಿಸಬೇಕಾಗುವುದರಿಂದ ಉಳಿದ 40 ಕ್ಷೇತ್ರಗಳತ್ತ ಗಮನ ಹರಿಸಲು ಆಗಲ್ಲ. ಒಂದು ಸ್ಥಾನಕ್ಕಿಂತ ತಮಗೆ 41 ಕ್ಷೇತ್ರಗಳು ಮುಖ್ಯ ಎನ್ನುವ ಮೂಲಕ ಪ್ರಧಾನಿ ವಿರುದ್ಧದ ಸ್ಪರ್ಧೆ ಗೌಣ ಎಂಬ ಸಂದೇಶವನ್ನ ರವಾನಿಸಿದ್ದಾರೆ.
ಇನ್ನು ತಮ್ಮದೇ ಪಕ್ಷದ ನಾಯಕರು ಪ್ರಧಾನಿ ವಿರುದ್ಧ ಸ್ಪರ್ಧಿಸುವ ನಿರ್ಧಾರದಿಂದ ಹಿಂದೆ ಸರಿದಿರುವುದು ಪ್ರಿಯಾಂಕಾ ಗಾಂಧಿ ಅವರ ನಿರ್ಧಾರ ಎಂದು ಹೇಳಿದ್ದರು. ಆದರೆ ಪ್ರಿಯಾಂಕಾ ಮಾತ್ರ ಹಿರಿಯ ನಾಯಕರೊಂದಿಗೆ ಚರ್ಚಿಸಿ ಈ ನಿರ್ಧಾರ ಕೈಗೊಂಡಿರುವುದಾಗಿ ಹೇಳಿದ್ದಾರೆ.