ಬಳ್ಳಾರಿ: ಮೈತ್ರಿ ಸರ್ಕಾರಕ್ಕೆ ಏನೂ ಆಗೋದಿಲ್ಲ. ಅದಕ್ಕೆ ನಾವಂತೂ ಏನೂ ಮಾಡಲ್ಲ. ಇದು ಹೈಕಮಾಂಡ್ ಕಟ್ಟಪ್ಪಣೆಯಾಗಿದೆ. ಹೀಗಾಗಿ ಸರ್ಕಾರ ಪತನಗೊಳಿಸುವ ಕಾರ್ಯಕ್ಕೆ ನಾವು ಮುಂದಾಗೋದಿಲ್ಲ ಎಂದು ಮುಳಕಾಲ್ಮೂರು ಶಾಸಕ ಬಿ. ಶ್ರೀರಾಮುಲು ತಿಳಿಸಿದ್ದಾರೆ.
ನಗರದ ಡಿಸಿ ಕಚೇರಿಯ ಆವರಣದಲ್ಲಿ ನೂತನ ಸಂಸದರ ಕಚೇರಿಗೆ ಭೇಟಿ ನೀಡಿದ ಬಳಿಕ ಮಾಧ್ಯಮದವರ ಜತೆಗೆ ಮಾತನಾಡಿದಅವರು, ರಾಜ್ಯದಲ್ಲಿ ಸ್ಪಷ್ಟ ಜನಾದೇಶ ಇರೋದು ಬಿಜೆಪಿಗೆ. ವಿಧಾನಸಭಾ ಉಪಚುನಾವಣೆಯಲ್ಲಿ 105 ಬಿಜೆಪಿ ಶಾಸಕರು ಗೆದ್ದಿದ್ದಾರೆ. ಸರಳ ಬಹುಮತ ಸಾಬೀತು ಪಡಿಸಲು ಒಂದಿಷ್ಟು ಶಾಸಕರ ಸಂಖ್ಯೆ ಕಡಿಮೆಯಿದೆ. ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷದ ಮೈತ್ರಿಯಿಂದ ಈ ಸರ್ಕಾರ ರಚನೆಯಾಗಿದೆ. ಕಾಂಗ್ರೆಸ್ ಪಕ್ಷದಲ್ಲಿ ಕೆಲ ಅತೃಪ್ತ ಶಾಸಕರಿರಬಹುದು. ಅವರು ಯಾರ ಸಂಪರ್ಕದಲ್ಲಿದ್ದಾರೆಂದು ನನಗಂತೂ ಗೊತ್ತಿಲ್ಲ. ಆದರೆ, ನಮ್ಮ ಶಾಸಕರು ಕಾಂಗ್ರೆಸ್ ಸಂಪರ್ಕದಲ್ಲಿದ್ದಾರೆಂದು ಹೇಳುತ್ತಿದ್ದಾರೆ. ಧಮ್ಮಿದ್ದರೆ ಶಾಸಕರ ಹೆಸರು ಹೇಳಲಿ ನೋಡೋಣ ಎಂದು ಸವಾಲೆಸೆದರು.
ದೋಸ್ತಿ ಸರ್ಕಾರ ಪತನವಾಗಲ್ಲ.. ಜಿಂದಾಲ್ ಕಂಪನಿಗೆ ಭೂಮಿ ಪರಭಾರೆ:
ಜಿಂದಾಲ್ ಉಕ್ಕು ಕಾರ್ಖಾನೆಗೆ ರೈತರು ಸಾವಿರಾರು ಎಕರೆ ಭೂಮಿ ಪರಭಾರೆ ಮಾಡುವ ಬಗ್ಗೆ ಸಚಿವ ಸಂಪುಟದ ಅನುಮೋದನೆ ಪಡೆದಿರುವು ತಪ್ಪು. ಈ ರೀತಿಯಾಗಿ ಆತುರದ ನಿರ್ಧಾರ ತೆಗೆದು ಕೊಳ್ಳಬಾರದಿತ್ತು. ಪರ ಮತ್ತು ವಿರೋಧಿ ಹೋರಾಟಗಳು ಮುಂದುವರೆದಿವೆ. ಆ ಕುರಿತು ಕಾನೂನು ತಜ್ಞರಿಂದ ಮಾಹಿತಿ ಪಡೆಯಲಾಗುತ್ತಿದೆ. ಈ ಸಂಬಂಧ ಪಕ್ಷ ಮುಂದಿನ ಹೋರಾಟದ ಕುರಿತು ಕೂಲಂಕಷವಾಗಿ ಪರಿಶೀಲಿಸಿ ಮುಂದಿನ ಹೆಜ್ಜೆ ಇಡಲಿದೆ. ಹೀಗಾಗಿ, ನಾನು ಏನೂ ಪ್ರತಿಕ್ರಿಯಿಸಲಾರೆ ಎಂದರು.
ಸಿಎಂ ಗ್ರಾಮ ವಾಸ್ತವ್ಯಕ್ಕೆ ರಾಮುಲು ಪ್ರಶಂಸೆ :
ಸಿಎಂ ಹೆಚ್ ಡಿ ಕುಮಾರಸ್ವಾಮಿ ಅವರು ಗ್ರಾಮ ವಾಸ್ತವ್ಯ ಮಾಡುತ್ತಿರೋದು ಉತ್ತಮಕಾರ್ಯ. ಅದರಿಂದ ಆಯಾ ಗ್ರಾಮಗಳಲ್ಲಿನ ನೈಜ ಸಮಸ್ಯೆ ಹೊರಬೀಳುತ್ತದೆ. ಆದರೆ, ಅವರ ಆರೋಗ್ಯ ಚೆನ್ನಾಗಿರದ ಕಾರಣ, ಗ್ರಾಮ ವಾಸ್ತವ್ಯ ಮಾಡುವ ಮುನ್ನ ವೈದ್ಯರ ಸಲಹೆ ಪಡೆದುಕೊಂಡು ಮುಂದುವರಿಯಬೇಕು ಎಂದು ಸಲಹೆ ನೀಡಿದರು.
ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಚನ್ನಬಸವನಗೌಡ ಪಾಟೀಲ, ಮಹಾನಗರ ಪಾಲಿಕೆ ಸದಸ್ಯರಾದ ಎಸ್.ಮಲ್ಲನಗೌಡ, ಗೋವಿಂದರಾಜಲು, ಮುಖಂಡರಾದ ಮುರಹರಗೌಡ, ಕೆ ಎ ರಾಮಲಿಂಗಪ್ಪ, ಗುತ್ತಿಗನೂರು ವಿರುಪಾಕ್ಷಗೌಡ, ಜಡೇಗೌಡ, ಸುಗುಣಾ ಉಪಸ್ಥಿತರಿದ್ದರು.