ಪಾಟ್ನಾ (ಬಿಹಾರ):ಯೂಟ್ಯೂಬರ್, ಬಿಹಾರದ ಮನೀಶ್ ಕಶ್ಯಪ್ ಮೇಲೆ ರಾಷ್ಟ್ರೀಯ ಭದ್ರತಾ ಕಾಯ್ದೆ (ಎನ್ಎಸ್ಎ) ಹೇರಲಾಗಿದೆ. ಇದರ ಪರಿಣಾಮ ಅವರಿಗೆ ಮತ್ತಷ್ಟು ಸಂಕಷ್ಟಗಳು ಎದುರಾಗಲಿವೆ. ಹಾಗಾದರೆ, ಎನ್ಎಸ್ಎ ಅಂದ್ರೇನು? ಇದನ್ನು ಅನ್ವಯಿಸುವುದರ ಪರಿಣಾಮವೇನು? ಎಂಬುದರ ಕುರಿತು ವಿವರವಾದ ಮಾಹಿತಿ ಇಲ್ಲಿದೆ.
ರಾಷ್ಟ್ರೀಯ ಭದ್ರತಾ ಕಾಯ್ದೆ:ರಾಷ್ಟ್ರೀಯ ಭದ್ರತಾ ಕಾಯಿದೆಯು (ಎನ್ಎಸ್ಎ) 1980ರ ಸೆಪ್ಟೆಂಬರ್ 23ರಂದು ಜಾರಿಗೆ ಬಂದಿದೆ. ಇಂದಿರಾ ಗಾಂಧಿ ನೇತೃತ್ವದ ಸರ್ಕಾರದ ಅವಧಿಯಲ್ಲಿ ಈ ಕಾಯ್ದೆ ಅಸ್ತಿತ್ವಕ್ಕೆ ಬಂದಿದೆ. ಇದರನ್ವಯ, ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ ಯಾವುದೇ ಆರೋಪಗಳಿಲ್ಲದೇ ಸಂಶಯಾಸ್ಪದ ವ್ಯಕ್ತಿಯನ್ನು 12 ತಿಂಗಳ ಕಾಲ ಜೈಲಿನಲ್ಲಿಡುವ ಹಕ್ಕು ಇದೆ. ಆ ವ್ಯಕ್ತಿಯು ಕಾನೂನು ಮತ್ತು ಸುವ್ಯವಸ್ಥೆಯನ್ನು ಸುಗಮವಾಗಿ ನಡೆಸಲು ಅಥವಾ ಅಡ್ಡಿಪಡಿಸಬಹುದು ಎಂದು ಸರ್ಕಾರ ಭಾವಿಸಿದರೆ, ಎನ್ಎಸ್ಎ ವಿಧಿಸಬಹುದು.
ಏನಾಗುತ್ತದೆ?:ಈಗ ರಾಷ್ಟ್ರೀಯ ಭದ್ರತಾ ಕಾಯ್ದೆಯನ್ನು ಹೇರುವುದರಿಂದ ಏನಾಗುತ್ತದೆ ಎಂಬ ಪ್ರಶ್ನೆ ಕಾಡುತ್ತದೆ. ಭಾರತೀಯ ಕಾನೂನಿನ ಪ್ರಕಾರ, ಪೊಲೀಸ್ ಕಸ್ಟಡಿಯಲ್ಲಿರುವಾಗ 24 ಗಂಟೆಗಳ ಒಳಗೆ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಯಾವುದೇ ವ್ಯಕ್ತಿಯನ್ನು ಹಾಜರುಪಡಿಸುವುದು ಅವಶ್ಯಕ. ಆದರೆ ಈ ಕಾನೂನಿನ ಅಡಿಯಲ್ಲಿ, ಯಾವುದೇ ಆರೋಪವಿಲ್ಲದೇ 1 ವರ್ಷ ಅವರನ್ನು ಬಂಧನದಲ್ಲಿ ಇಡಬಹುದು.
ಅಷ್ಟೇ ಅಲ್ಲ, ವಿಶೇಷ ಸಂದರ್ಭಗಳಲ್ಲಿ, ವ್ಯಕ್ತಿಗೆ 10ರಿಂದ 12 ದಿನಗಳವರೆಗೆ ಆತನ ವಿರುದ್ಧದ ಆರೋಪಗಳೇನು ಎಂದು ಹೇಳುವುದಿಲ್ಲ. ಎನ್ಎಸ್ಎ ಅಡಿಯಲ್ಲಿ ಬಂಧನಕ್ಕೊಳಗಾದ ವ್ಯಕ್ತಿಯು ಜಾಮೀನು ಅರ್ಜಿ ಸಲ್ಲಿಸಲು ಸಹ ಸಾಧ್ಯವಿಲ್ಲ. ಒಬ್ಬ ವ್ಯಕ್ತಿ ಪೊಲೀಸ್ ಕಸ್ಟಡಿಯಲ್ಲಿದ್ದರೂ ಆತನ ಮೇಲೆ ಎನ್ಎಸ್ಎ ವಿಧಿಸಲು ಡಿಎಂ ಆದೇಶಿಸಬಹುದು. ಒಬ್ಬ ವ್ಯಕ್ತಿಯು ಜಾಮೀನಿನ ಮೇಲೆ ಹೊರಗಿದ್ದರೆ, ಅವನ ವಿರುದ್ಧ ಎನ್ಎಸ್ಎ ಕೂಡ ವಿಧಿಸಬಹುದು. ಪ್ರಕರಣದಲ್ಲಿ ಯಾವುದೇ ವ್ಯಕ್ತಿಯನ್ನು ಖುಲಾಸೆಗೊಳಿಸಿದ್ದರೂ ಸಹ, ಆತನ ಮೇಲೆ ರಾಷ್ಟ್ರೀಯ ಭದ್ರತಾ ಕಾಯ್ದೆಯನ್ನು ವಿಧಿಸಬಹುದು.