ಮಹಾರಾಷ್ಟ್ರ: ರಾಜ್ಯದಲ್ಲಿ ಅಧಿಕಾರ ಹಸ್ತಾಂತರವಾದಾಗಿನಿಂದಲೂ ಏಕನಾಥ್ ಶಿಂಧೆ ಸರ್ಕಾರದ ಕೆಲವು ಸಚಿವರು ಮಹಿಳೆಯರ ವಿರುದ್ಧ ಆಧಾರ ರಹಿತ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಇದರ ವಿರುದ್ಧ ಮಹಾವಿಕಾಸ ಅಘಾಡಿ ಮಹಿಳಾ ನಾಯಕಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ರಾಜ್ಯಪಾಲ ಭಗತ್ ಸಿಂಗ್ ಕೋಶ್ಯಾರಿ ಅವರನ್ನು ಭೇಟಿಯಾಗಿ ಆಧಾರ ರಹಿತ ಹೇಳಿಕೆ ಕೊಡುತ್ತಿರುವ ಸಚಿವರನ್ನು ಈ ಕೂಡಲೇ ಸಚಿವ ಸಂಪುಟದಿಂದ ವಜಾಗೊಳಿಸುವಂತೆ ಒತ್ತಾಯ ಮಾಡಿದ್ದಾರೆ.
ಇದೇ ವೇಳೆ ಮಹಿಳೆಯರ ವಿವಿಧ ಬೇಡಿಕೆಗಳನ್ನು ರಾಜ್ಯಪಾಲರ ಮುಂದೆ ಇಡಲಾಯಿತು. ಸಮಾಜವಾದಿ ಪಕ್ಷದ ಸಂಸದೆ ಜಯಾ ಬಚ್ಚನ್, ಎನ್ಸಿಪಿ ನಾಯಕಿ ಫೌಜಿಯಾ ಖಾನ್, ಎನ್ಸಿಪಿ ನಾಯಕಿ ವಿದ್ಯಾ ಚವಾಣ್, ರಾಜ್ಯ ಪ್ರವಾಸೋದ್ಯಮ ಸಚಿವೆ ಅದಿತಿ ತಟ್ಕರೆ, ಅದಿತಿ ನಲವ್ಡೆ, ಠಾಕ್ರೆ ಗುಂಪಿನ ಸಂಸದೆ ಪ್ರಿಯಾಂಕಾ ಚತುರ್ವೇದಿ, ರಿತುಜಾ ಲಟ್ಕೆ, ಶಾಸಕಿ ಮನಿಷಾ ಕಯಂಡೆ ಸೇರಿದಂತೆ ಮಹಿಳಾ ಮುಖಂಡರ ನಿಯೋಗ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ರಾಜ್ಯದಲ್ಲಿ ದಿನದಿಂದ ದಿನಕ್ಕೆ ಸಚಿವರಿಂದ ಮಹಿಳೆಯರನ್ನು ಅವಮಾನಿಸಲಾಗುತ್ತಿದೆ. ನಮ್ಮ ಬಗ್ಗೆ ವಿನಾಕಾರಣ ಹೇಳಿ ನೀಡಲಾಗುತ್ತಿದೆ. ಇದನ್ನು ನಾವು ಸಹಿಸುವುದಿಲ್ಲ. ನಮ್ಮ ತಾಳ್ಮೆಯ ಕಟ್ಟೆ ಒಡೆದಿದೆ. ಉತ್ತರ ಪ್ರದೇಶದಲ್ಲಿಯೂ ಸಹ ದಿನನಿತ್ಯ ಮಹಿಳೆಯರ ಮೇಲೆ ದೌರ್ಜನ್ಯ ನಡೆಯುತ್ತಿದೆ. ಈ ದೌರ್ಜನ್ಯ ನಿಲ್ಲಬೇಕು. ಮಹಿಳೆಯರು ಸಬಲರಾಗುತ್ತಿದ್ದಾರೆ. ಪುರುಷರ ದಬ್ಬಾಳಿಕೆಯನ್ನು ನಾವು ಸಹಿಸುವುದಿಲ್ಲ ಎಂದು ಸಂಸದೆ ಜಯಾ ಬಚ್ಚನ್ ಈ ವೇಳೆ ಆಕ್ರೋಶ ಹೊರ ಹಾಕಿದ್ದಾರೆ.
ಶೀಘ್ರದಲ್ಲಿಯೇ ರಾಷ್ಟ್ರಪತಿಗಳನ್ನು ಭೇಟಿ ಮಾಡಿ ಈ ಬಗ್ಗೆ ನಮ್ಮ ಅಭಿಪ್ರಾಯ ಮಂಡಿಸಲಿದ್ದೇವೆ ಎಂದೂ ಹೇಳಿದ ಅವರು, ಮಹಿಳೆಯರ ಬಗ್ಗೆ ಇಂತಹ ಹೇಳಿಕೆ ನೀಡುವವರನ್ನು ಕೂಡಲೇ ರಾಜಕೀಯದಿಂದ ದೂರವಿಡಬೇಕು. ಇಂತಹವರು ರಾಜಕೀಯದ ವರ್ಚಸ್ಸು ಹಾಳು ಮಾಡುತ್ತಿದ್ದಾರೆ ಎಂದು ಜಯಾ ಬಚ್ಚನ್ ಹೇಳಿದ್ದಾರೆ.