ಕರ್ನಾಟಕ

karnataka

Uniform Civil Code: ಏಕರೂಪ ನಾಗರಿಕ ಸಂಹಿತೆ: ಬುಡಕಟ್ಟು ಜನಾಂಗ ಹೊರಗಿಡಲು ಸಲಹೆ

By

Published : Jul 4, 2023, 10:25 AM IST

ಏಕರೂಪ ನಾಗರಿಕ ಸಂಹಿತೆಯಿಂದ ಈಶಾನ್ಯ ಭಾಗ ಸೇರಿದಂತೆ ದೇಶದ ಇತರೆ ಬುಡಕಟ್ಟು ಜನಾಂಗದವರನ್ನು ಹೊರಗಿಡುವ ಕುರಿತು ಸುಶೀಲ್​ ಮೋದಿ ಪ್ರಸ್ತಾಪಿಸಿದ್ದಾರೆ.

ಸುಶೀಲ್​ ಮೋದಿ
ಸುಶೀಲ್​ ಮೋದಿ

ನವದೆಹಲಿ: ಬಿಜೆಪಿ ಸಂಸದ ಹಾಗೂ ಕಾನೂನು ಸಂಸದೀಯ ಸಮಿತಿಯ ಅಧ್ಯಕ್ಷರಾದ ಸುಶೀಲ್ ಮೋದಿ ಅವರ ನೇತೃತ್ವದಲ್ಲಿ ಸೋಮವಾರ ಸಂಸದೀಯ ಸಮಿತಿ ಸಭೆ ನಡೆಯಿತು. ಈ ಸಭೆಯಲ್ಲಿ ಸುಶೀಲ್ ಮೋದಿ ಮಾತನಾಡಿ, ದೇಶದ ಈಶಾನ್ಯ ಭಾಗ ಮತ್ತು ಇತರೆ ಪ್ರದೇಶಗಳ ಬುಡಕಟ್ಟು ಜನಾಂಗದವರನ್ನು ಏಕರೂಪ ನಾಗರಿಕ ಸಂಹಿತೆ (ಯುಸಿಸಿ)ಯ ವ್ಯಾಪ್ತಿಯಿಂದ ಹೊರಗಿಡಬೇಕೆಂದು ಸಲಹೆ ನೀಡಿದರು. ಆದರೆ, ಇದಕ್ಕೆ ವಿಪಕ್ಷಗಳ ಕೆಲವು ನಾಯಕರಿಂದ ವಿರೋಧ ವ್ಯಕ್ತವಾಗಿದ್ದು, ಕಾನೂನು ಆಯೋಗದ ಕ್ರಮವನ್ನು ಪ್ರಶ್ನಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಕಾಂಗ್ರೆಸ್ ಮತ್ತು ಡಿಎಂಕೆ ಸೇರಿದಂತೆ ಹೆಚ್ಚಿನ ವಿರೋಧ ಪಕ್ಷದ ಸದಸ್ಯರು ಪ್ರತಿಕ್ರಿಯಿಸಿ, ಮುಂದಿನ ವರ್ಷದ ಲೋಕಸಭೆ ಚುನಾವಣೆಯನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಬಿಜೆಪಿ ಈ ಕ್ರಮಕ್ಕೆ ಮುಂದಾಗಿದೆ ಎಂದು ಟೀಕಿಸಿವೆ. ಶಿವಸೇನೆ ಪಕ್ಷದ ಮುಖಂಡ ಸಂಜಯ್ ರಾವುತ್, ಅನೇಕ ದೇಶಗಳು ಸಾಮಾನ್ಯ ನಾಗರಿಕ ಕಾನೂನು ಹೊಂದಿದ್ದು, ಅವುಗಳನ್ನು ಪರಿಶೀಲಿಸಲು ಸಲಹೆ ನೀಡಿದರು. ವಿವಿಧ ಸಮುದಾಯಗಳು ಮತ್ತು ಪ್ರದೇಶಗಳ ಸಂರಕ್ಷಣೆ ಬಗ್ಗೆ ಅವರು ಪ್ರಶ್ನೆ ಮಾಡಿದರು. ಕಾಂಗ್ರೆಸ್ ಸಂಸದ ವಿವೇಕ್ ಟಂಖಾ ಮತ್ತು ಡಿಎಂಕೆ ಸಂಸದ ಪಿ. ವಿಲ್ಸನ್ ಪ್ರತ್ಯೇಕ ಲಿಖಿತ ಹೇಳಿಕೆಗಳನ್ನು ಸಲ್ಲಿಸಿದರು.

ಕಾನೂನು ಸಮಿತಿಯು ಏಕರೂಪ ನಾಗರಿಕ ಸಂಹಿತೆಯ ಕುರಿತು ಸಮಾಲೋಚನೆ ಪ್ರಕ್ರಿಯೆ ಪ್ರಾರಂಭಿಸಿದ ನಂತರ ಸಂಸದೀಯ ಸ್ಥಾಯಿ ಸಮಿತಿಯ ಸಭೆಯಲ್ಲಿ, ಕಾನೂನು ವ್ಯವಹಾರಗಳು ಮತ್ತು ಕಾನೂನು ಸಚಿವಾಲಯದ ಶಾಸಕಾಂಗ ಇಲಾಖೆಗಳ ಪ್ರತಿನಿಧಿಗಳ ಅಭಿಪ್ರಾಯಗಳನ್ನು ಕೇಳಲಾಗಿದೆ. ಕಳೆದ ತಿಂಗಳು ಕಾನೂನು ಆಯೋಗವು "ವೈಯಕ್ತಿಕ ಕಾನೂನುಗಳ ವಿಮರ್ಶೆ" ಎಂಬ ವಿಷಯದಡಿಯಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿ ಬಗ್ಗೆ ಜನಾಭಿಪ್ರಾಯ ಸಂಗ್ರಹಿಸಲು ಸೂಚನೆ ನೀಡಿತ್ತು. ಜೂನ್ 14ರಿಂದ ಇದಕ್ಕೆ ಅವಕಾಶ ನೀಡಲಾಗಿತ್ತು. ಅಭಿಪ್ರಾಯ ತಿಳಿಸಲು 30 ದಿನಗಳ ಕಾಲಾವಕಾಶ ನೀಡಲಾಗಿದೆ. ಇದಕ್ಕೆ ಜನರಿಂದ ಉತ್ತಮ ಪ್ರತಿಕ್ರಿಯೆ ಕೂಡ ವ್ಯಕ್ತವಾಗಿದೆ. ಈವರೆಗೆ 19 ಲಕ್ಷ ಸಲಹೆಗಳನ್ನು ಸ್ವೀಕರಿಸಲಾಗಿದೆ ಎಂದು ಸಮಿತಿ ಸದಸ್ಯರು ಹೇಳಿದ್ದಾರೆ. ಜುಲೈ 13 ರವರೆಗೂ ಈ ಪ್ರಕ್ರಿಯೆ ಮುಂದುವರೆಯಲಿದೆ.

ಇನ್ನೊಂದೆಡೆ, ಜುಲೈ 20ರಿಂದ ಪ್ರಾರಂಭವಾಗುವ ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ಯುಸಿಸಿ ಮಸೂದೆ ಜಾರಿ ಸಾಧ್ಯತೆ ಕಡಿಮೆ ಎಂದು ಮೂಲಗಳು ಹೇಳುತ್ತಿವೆ. ಯುಸಿಸಿ ಅನುಷ್ಠಾನವು ಬಿಜೆಪಿ ಚುನಾವಣಾ ಪ್ರಣಾಳಿಕೆಯ ಭಾಗವೂ ಆಗಿದ್ದು, ಕಳೆದ ತಿಂಗಳು ಮಧ್ಯಪ್ರದೇಶದ ಭೋಪಾಲ್‌ನಲ್ಲಿ ಬಿಜೆಪಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ್ದ ಪ್ರಧಾನಿ ನರೇಂದ್ರ ಮೋದಿ, ಏಕರೂಪ ನಾಗರಿಕ ಸಂಹಿತೆಯ ಕುರಿತು ಪ್ರಸ್ತಾಪಿಸಿದ್ದರು. ಇದಕ್ಕೆ ವಿರೋಧ ಪಕ್ಷಗಳು ಪ್ರಧಾನಿ ವಿರುದ್ಧ ವಾಗ್ದಾಳಿ ನಡೆಸಿದ್ದು, ನಿರುದ್ಯೋಗ ಮತ್ತು ಮಣಿಪುರ ಹಿಂಸಾಚಾರದಂತಹ ನೈಜ ಸಮಸ್ಯೆಗಳಿಂದ ಜನರ ಗಮನ ಬೇರೆಡೆ ಸೆಳೆಯುವ ಯೋಜನೆ ರೂಪಿಸಲಾಗುತ್ತಿದೆ ಎಂದು ಟೀಕಿಸಿದ್ದರು.

ಇದನ್ನೂ ಓದಿ:ಎನ್‌ಸಿಪಿಯ ನೂತನ ರಾಜ್ಯಾಧ್ಯಕ್ಷರಾಗಿ ಸುನೀಲ್ ತಟ್ಕರೆ, ಮುಖ್ಯ ಸಚೇತಕರಾಗಿ ಅನಿಲ್ ಪಾಟೀಲ್ ನೇಮಕ.. ಅಜಿತ್​ ಪವಾರ್​ ಘೋಷಣೆ

ABOUT THE AUTHOR

...view details