ಚೆನ್ನೈ :ಹಲವರು ಸಾಕುಪ್ರಾಣಿಗಳನ್ನು ತಮ್ಮ ಕುಟುಂಬದ ಸದಸ್ಯರಂತೆಯೇ ಕಾಣುತ್ತಾರೆ. ಅದರಲ್ಲೂ ನಿಯತ್ತು ಎಂದರೆ ನಮಗೆ ಮೊದಲು ನೆನಪಾಗುವುದು ನಾಯಿ. ಮುಷ್ಠಿ ಅನ್ನ ಹಾಕಿದರೆ ಸಾಕು ಮನೆ ಮುಂದೆ ಮಂಡಿಯೂರಿ ಕುಳಿತು ರಾತ್ರಿ-ಹಗಲು ಕಾವಲು ಕಾಯುತ್ತವೆ. ಅವುಗಳ ನಿಸ್ವಾರ್ಥಕ್ಕೆ ಕರಗದ ಮನಸ್ಸಿಲ್ಲ. ಅಂತಹುದೇ ಒಂದು ಪ್ರೀತಿಗೆ ತಮಿಳುನಾಡು ಮೂಲದ ವ್ಯಕ್ತಿಯೊಬ್ಬರು ನೀಡಿರುವ ಗೌರವ ನಿಮ್ಮ ಮನ ಕಲಕದೇ ಇರಲಾರದು.
ತಮಿಳುನಾಡಿನ ಶಿವಗಂಗೆಯ 82 ವರ್ಷದ ನಿವೃತ್ತ ಸರ್ಕಾರಿ ನೌಕರ ಮುತ್ತು ಎಂಬುವರು, ತನ್ನ ಅತ್ಯಂತ ಪ್ರೀತಿಯ ಮತ್ತು ನಿಷ್ಠಾವಂತ ಒಡನಾಡಿಗೆ ಸೂಕ್ತವಾದ ಗೌರವ ನೀಡಿದ್ದಾರೆ. ಮೃತಪಟ್ಟ ಲ್ಯಾಬ್ರಡಾರ್ ಜಾತಿಯ ಟಾಮ್ ಶ್ವಾನದ ನೆನಪಿಗಾಗಿ ತನ್ನ ಕೃಷಿ ಭೂಮಿಯಲ್ಲಿ ದೇವಾಲಯವನ್ನು ನಿರ್ಮಿಸಿದ್ದಾರೆ. ನಾಯಿ ಸಾಯುವವರೆಗೂ ಅವರು ಟಾಮ್ನೊಂದಿಗೆ ಸುಮಾರು 11 ವರ್ಷಗಳ ಕಾಲ ವಾಸಿಸುತ್ತಿದ್ದರು.
ಒಂದು ವರ್ಷದ ಹಿಂದೆ ಟಾಮ್ಗೆ ಆರೋಗ್ಯ ಸಮಸ್ಯೆ ಕಾಣಿಸಿಕೊಂಡಿದೆ. ಸಾಕಷ್ಟು ಚಿಕಿತ್ಸೆ ನೀಡಿದರೂ, ಫಲಕಾರಿಯಾಗಲಿಲ್ಲ. ಜ.2021ರಲ್ಲಿ ಟಾಮ್ ಮೃತಪಟ್ಟಿದೆ. ಇದರಿಂದ ಮುತ್ತು ದುಃಖತಪ್ತರಾಗಿದ್ದರು. ಇದೀಗ ಟಾಮ್ ನೆನಪಿಗಾಗಿ 80,000 ರೂ.ಗಳನ್ನು ಖರ್ಚು ಮಾಡಿ ಶ್ವಾನದ ಅಮೃತಶಿಲೆಯ ಪ್ರತಿಮೆ ಪಡೆದಿದ್ದಾರೆ. ನಂತರ ಶಿವಗಂಗಾ ಜಿಲ್ಲೆಯ ಮನಮದುರೈ ಬಳಿಯ ಬ್ರಾಹ್ಮಣಕುರಿಚಿಯ ತಮ್ಮ ಕೃಷಿ ಭೂಮಿಯಲ್ಲಿ ದೇವಾಲಯವನ್ನು ನಿರ್ಮಿಸಿದ್ದಾರೆ.
ಪ್ರತಿಮೆಗೆ ಪ್ರತಿದಿನ ಪೂಜೆ ಸಲ್ಲಿಸಲಾಗುತ್ತದೆ. ವಿಶೇಷ ಸಂದರ್ಭಗಳಲ್ಲಿ, ಟಾಮ್ನ ನೆಚ್ಚಿನ ಆಹಾರವನ್ನು ನೀಡಲಾಗುತ್ತದೆ. ಟಾಮ್ನ ಮರಣದ ಒಂದು ವರ್ಷದ ನಂತರ ಜನವರಿಯಲ್ಲಿ ಪ್ರತಿಮೆಯನ್ನು ಸ್ಥಾಪಿಸಲಾಗಿದೆ. ಜನರು ಬಂದು ತಮ್ಮ ಪ್ರಾರ್ಥನೆ ಸಲ್ಲಿಸಲು ದೇವಾಲಯವನ್ನು ತೆರೆಯಲಾಗಿದೆ.
ಇದನ್ನೂ ಓದಿ:ಮಾಲೀಕನ ಜೊತೆ ಹೊರಗಡೆ ಸುತ್ತಾಡಲು ಶ್ವಾನದ ಚಡಪಡಿಕೆ: ವಿಡಿಯೋ ನೋಡಿ