ಲಾಹೌಲ್- ಸ್ಪಿಟಿ (ಹಿಮಾಚಲ ಪ್ರದೇಶ): ಲಾಹೌಲ್-ಸ್ಪಿಟಿ ಜಿಲ್ಲೆಯ ಲಾಹೌಲ್ ಉಪವಿಭಾಗದ ಶಿಂಕು ಲಾ ಪಾಸ್ ಬಳಿ ಹಿಮಕುಸಿತ ಸಂಭವಿಸಿದ್ದು, ಇಬ್ಬರು ಸಾವನ್ನಪ್ಪಿದ್ದರೆ, ಮತ್ತೊರ್ವ ವ್ಯಕ್ತಿ ನಾಪತ್ತೆಯಾಗಿರುವ ಘಟನೆ ನಡೆದಿದೆ. ಇಬ್ಬರು ಕಾರ್ಮಿಕರು ಬಾರ್ಡರ್ ರೋಡ್ಸ್ ಆರ್ಗನೈಸೇಶನ್ ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು ಎಂದು ತಿಳಿದು ಬಂದಿದೆ. ಹಿಮಪಾತದಿಂದ ಸ್ನೋ ಕಟ್ಟರ್ ಮತ್ತು ಡೋಜರ್ ಯಂತ್ರಗಳೊಡನೆ ಅವರು ಜೀವಂತ ಸಮಾಧಿ ಆಗಿದ್ದಾರೆ. ಇನ್ನು ನಾಪತ್ತೆಯಾದ ವ್ಯಕ್ತಿ ಪತ್ತೆಗೆ ರಕ್ಷಣಾ ಕಾರ್ಯ ಸಾಗಿದ್ದು, ಸೋಮವಾರ ಶೋಧ ಮುಂದುವರಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹಿಮಪಾತದ ಸುದ್ದಿ ತಿಳಿಯುತ್ತಿದ್ದಂತೆ ಬಿಆರ್ಒ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿದ್ದು, ನಾಪತ್ತೆಯಾದವರ ಪತ್ತೆಗೆ ಮುಂದಾಗಿದ್ದು, ರಕ್ಷಣಾ ಕಾರ್ಯಕ್ಕೆ ಮುಂದಾಗಿದ್ದಾರೆ. ಅಧಿಕಾರಿಗಳ ಪ್ರಕಾರ, ಸಾವನ್ನಪ್ಪಿದವರನ್ನು ರಾಮ್ ಬುದ್ದ (19) ಮತ್ತು ರಾಕೇಶ್ ಎಂದು ಗುರುತಿಸಲಾಗಿದೆ. ನಾಪತ್ತೆಯಾದ ವ್ಯಕ್ತಿಯನ್ನು ಪಸ್ಸಂಗ್ ಛೆರಿಂಗ್ ಲಾಮ್ ಎಂದು ಗುರುತಿಸಲಾಗಿದ್ದು, ಈತ ನೇಪಾಳ ಮೂಲದವರು ಎಂದು ಗುರುತಿಸಲಾಗಿದೆ.
ಮುಂದುವರೆಯಲಿರುವ ಶೋಧ ಕಾರ್ಯ: ಹಲವು ಗಂಟೆಗಳ ಕಾಲ ಸಾಗಿದ ನಾಪತ್ತೆ ಕಾರ್ಯವನ್ನು ತಾಪಾಮಾನದಲ್ಲಿ ಇಳಿಕೆ ಮತ್ತು ಕಡಿಮೆ ಗೋಚರತೆ ಪರಿಣಾಮ ನಿಲ್ಲಿಸಲಾಯಿತು. ಇನ್ನು ಈ ಕುರಿತು ಮಾತನಾಡಿರುವ ರಾಜ್ಯ ತುರ್ತು ಕಾರ್ಯಾಚರಣೆ ಕೇಂದ್ರ, ನಾಪತ್ತೆಯಾದ ವ್ಯಕ್ತಿಯ ಪತ್ತೆ ಕಾರ್ಯಕ್ಕೆ ತಾತ್ಕಾಲಿಕವಾಗಿ ಬ್ರೇಕ್ ನೀಡಲಾಗಿದ್ದು, ಸೋಮವಾರದಿಂದ ಮತ್ತೆ ಈ ಕಾರ್ಯಾಚರಣೆ ನಡೆಸಲಾಗುವುದು ಎಂದರು. ಭಾನುವಾರ ಮಧ್ಯಾಹ್ನ ಸ್ಪಿಟಿ ಮತ್ತು ಲೌಹುಲ್ದಲ್ಲಿ ಹಿಮಪಾತ ಸಂಭವಿಸಿದೆ. ಈ ವೇಳೆ ಇಬ್ಬರು ಸಾವನ್ನಪ್ಪಿದ್ದು, ಒಬ್ಬರು ನಾಪತ್ತೆಯಾಗಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.