ಕರ್ನಾಟಕ

karnataka

ETV Bharat / bharat

ಕೌಶಲಾಭಿವೃದ್ಧಿ ಹಗರಣ ಪ್ರಕರಣ: ಚಂದ್ರಬಾಬು ನಾಯ್ಡು ಅರ್ಜಿ ಕುರಿತು ಭಿನ್ನ ತೀರ್ಪು: ವಿಸ್ತೃತ ಪೀಠಕ್ಕೆ ವರ್ಗ

ಕೌಶಲಾಭಿವೃದ್ಧಿ ಪ್ರಕರಣದಲ್ಲಿ ಚಂದ್ರಬಾಬು ನಾಯ್ಡು ಸಲ್ಲಿಸಿದ್ದ ಅರ್ಜಿ ವಿಚಾರಣೆ ಇಂದು ನಡೆಯಿತು.

By ETV Bharat Karnataka Team

Published : Jan 16, 2024, 6:12 PM IST

ಕೌಶಲಾಭಿವೃದ್ಧಿ ಹಗರಣ ಅರ್ಜಿ ವಿಚಾರಣೆ
ಕೌಶಲಾಭಿವೃದ್ಧಿ ಹಗರಣ ಅರ್ಜಿ ವಿಚಾರಣೆ

ನವದೆಹಲಿ:ಕೌಶಲಾಭಿವೃದ್ಧಿ ಹಗರಣಕ್ಕೆ ಸಂಬಂಧಿಸಿದಂತೆ ಆಂಧ್ರಪ್ರದೇಶದ ಮಾಜಿ ಸಿಎಂ ಚಂದ್ರಬಾಬು ನಾಯ್ಡು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್​ನ ದ್ವಿಸದಸ್ಯ ಪೀಠ ಭಿನ್ನ ತೀರ್ಪು ನೀಡಿದೆ. ಕಾರಣ ಪ್ರಕರಣವನ್ನು ವಿಸ್ತೃತ ಪೀಠಕ್ಕೆ ವರ್ಗಾವಣೆ ಮಾಡಲಾಗಿದೆ.

ಸ್ಕಿಲ್​ ಡೆವೆಲಪ್​ಮೆಂಟ್​ ಹಗರಣದಲ್ಲಿ ತಮ್ಮ ವಿರುದ್ಧ ದಾಖಲಾಗಿರುವ ಪ್ರಕರಣವನ್ನು ರದ್ದುಗೊಳಿಸುವಂತೆ ಕೋರಿ ಚಂದ್ರಬಾಬು ನಾಯ್ಡು ಸುಪ್ರೀಂ ಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದರು. ಇಂದು ನ್ಯಾಯಮೂರ್ತಿಗಳಾದ ಅನಿರುದ್ಧ ಬೋಸ್​ ಮತ್ತು ಬೇಲಾ ತ್ರಿವೇದಿ ನೇತೃತ್ವದ ದ್ವಿಸದಸ್ಯ ಪೀಠ ಅರ್ಜಿ ವಿಚಾರಣೆ ನಡೆಸಿತು. ಈ ವೇಳೆ, ನ್ಯಾಯಮೂರ್ತಿಗಳು ಭಿನ್ನ ತೀರ್ಪು ಪ್ರಕಟಿಸಿದ್ದಾರೆ.

ನ್ಯಾಯಮೂರ್ತಿ ಅನಿರುದ್ಧ ಬೋಸ್ ಅವರು ತಮ್ಮ ತೀರ್ಪನಲ್ಲಿ, ಚಂದ್ರಬಾಬು ವಿರುದ್ಧ ದಾಖಲಾಗಿರುವ ಪ್ರಕರಣಗಳು ಕಾನೂನು ಬಾಹಿರವಾಗಿದ್ದು, ಸೂಕ್ತ ಅನುಮತಿ ಪಡೆಯದೇ ಪ್ರಕರಣಗಳನ್ನು ದಾಖಲಿಸಲಾಗಿದೆ. ಪ್ರಕರಣಗಳನ್ನು ದಾಖಲಿಸುವ ಮುನ್ನ ಸಿಐಡಿ ಸೂಕ್ತ ಅನುಮತಿ ಪಡೆಯಬೇಕಿತ್ತು. ಹೀಗಿರುವಾಗ ಭ್ರಷ್ಟಾಚಾರ ತಡೆ ಕಾಯ್ದೆಯ ಸೆಕ್ಷನ್ 13(1)ಸಿ, ಡಿ ಮತ್ತು 13(2)ರ ಅಡಿಯಲ್ಲಿ ಚಂದ್ರಬಾಬು ವಿರುದ್ಧ ತನಿಖೆ ನಡೆಸುವುದು ಸೂಕ್ತವಲ್ಲ. ಸೆಕ್ಷನ್ 17ಎ ಅಡಿ ಪೂರ್ವಾನುಮತಿ ಅಗತ್ಯ, ಇಲ್ಲದಿದ್ದರೆ ಅದು ಕಾನೂನುಬಾಹಿರ ಎಂದು ನ್ಯಾಯಮೂರ್ತಿ ಅನಿರುದ್ಧ ಬೋಸ್ ತಮ್ಮ ತೀರ್ಪಿನಲ್ಲಿ ವಿವರಿಸಿದ್ದಾರೆ.

ನ್ಯಾಯಮೂರ್ತಿ ಬೇಲಾ ತ್ರಿವೇದಿ ಅವರು ತಮ್ಮ ತೀರ್ಪಿನಲ್ಲಿ, 2018ರ ತಿದ್ದುಪಡಿಗೆ ಮುನ್ನ ಮಾಡಿದ ಅಪರಾಧಗಳಿಗೆ ಈ ಸೆಕ್ಷನ್ ಅನ್ವಯಿಸುವುದಿಲ್ಲ ಎಂದು ಹೇಳಿದ್ದಾರೆ. ಪ್ರಾಮಾಣಿಕ ಸಾರ್ವಜನಿಕ ಸೇವಕರಿಗೆ ಯಾವುದೇ ಸಮಸ್ಯೆಯಾಗಬಾರದು ಎಂಬ ಕಾರಣಕ್ಕೆ 17-ಎ ಕಲಂಗೆ ತಿದ್ದುಪಡಿ ತರಲಾಗಿದೆ. ಇಬ್ಬರು ನ್ಯಾಯಮೂರ್ತಿಗಳ ನಡುವಿನ ಭಿನ್ನಾಭಿಪ್ರಾಯಗಳ ಹಿನ್ನೆಲೆಯಲ್ಲಿ ಸಿಜೆಐಗೆ ವರದಿ ಸಲ್ಲಿಸುವುದಾಗಿ ಹಿರಿಯ ನ್ಯಾಯಾಧೀಶ ನ್ಯಾಯಮೂರ್ತಿ ಅನಿರುದ್ಧ ಬೋಸ್ ಘೋಷಿಸಿದರು.

ಪ್ರಕರಣದ ಹಿನ್ನೆಲೆ:ಸ್ಕಿಲ್​ ಡೆವೆಲಪ್​ಮೆಂಟ್​ ಹಗರಣದಲ್ಲಿ ಭ್ರಷ್ಟಾಚಾರ ತಡೆ ಕಾಯ್ದೆಯ ಸೆಕ್ಷನ್-17ಎ ಪ್ರಕಾರ, ರಾಜ್ಯಪಾಲರ ಅನುಮತಿಯಿಲ್ಲದೇ ತಮ್ಮ ವಿರುದ್ಧ ದಾಖಲಿಸಿರುವ ಪ್ರಕರಣವನ್ನು ಅಸಿಂಧುಗೊಳಿಸುವಂತೆ ಕೋರಿ ಚಂದ್ರಬಾಬು ನಾಯ್ಡು ಸುಪ್ರೀಂ ಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದರು. ಕಳೆದ ವರ್ಷ ಸೆಪ್ಟೆಂಬರ್ 22 ರಂದು ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಮೂರ್ತಿ ಶ್ರೀನಿವಾಸ ರೆಡ್ಡಿ ಅವರು ಅರ್ಜಿ ವಜಾಗೊಳಿಸಿದ್ದರು.

ಮರುದಿನ ಸುಪ್ರೀಂ ಕೋರ್ಟ್‌ನಲ್ಲಿ ವಿಶೇಷ ರಜೆ ಕೋರಿ ಅರ್ಜಿ ಸಲ್ಲಿಸಿದರು. ಸುಪ್ರೀಂಕೋರ್ಟ್‌ನಲ್ಲಿ ಹಲವು ತಿರುವುಗಳನ್ನು ಪಡೆದ ಚಂದ್ರಬಾಬು ಅವರ ಅರ್ಜಿಯನ್ನು ಕಳೆದ ವರ್ಷ ಅಕ್ಟೋಬರ್ 3 ರಂದು ನ್ಯಾಯಮೂರ್ತಿ ಅನಿರುದ್ಧ ಬೋಸ್ ಮತ್ತು ನ್ಯಾಯಮೂರ್ತಿ ಬೇಲಾ ತ್ರಿವೇದಿ ಅವರನ್ನೊಳಗೊಂಡ ದ್ವಿಸದಸ್ಯ ಪೀಠ ಮೊದಲ ಬಾರಿಗೆ ವಿಚಾರಣೆ ನಡೆಸಿತು. ನಂತರ ಹಲವು ಬಾರಿ ಮುಂದೂಡಲಾಗಿತ್ತು. ಅಕ್ಟೋಬರ್ 13 ರಂದು, ಇದೇ ಪೀಠವು ಫೈಬರ್ಗ್ರಿಡ್ ಪ್ರಕರಣದಲ್ಲಿ ಚಂದ್ರಬಾಬು ಅವರ ನಿರೀಕ್ಷಣಾ ಜಾಮೀನು ಅರ್ಜಿಯ ಜೊತೆಗೆ ಕೌಶಲ್ಯ ಪ್ರಕರಣದಲ್ಲಿ ಸಲ್ಲಿಸಲಾದ ರದ್ದು ಅರ್ಜಿಯ ವಿಚಾರಣೆ ನಡೆಸಿತು. ದಸರಾ, ದೀಪಾವಳಿ ಮತ್ತು ಚಳಿಗಾಲದ ರಜೆ ಕಾರಣ ವಿಚಾರಣೆಯನ್ನು ಮುಂದೂಡಲಾಗಿತ್ತು.

ಇದನ್ನೂ ಓದಿ:ಆಂಧ್ರದ ಮಾಜಿ ಸಿಎಂ ಚಂದ್ರಬಾಬು ನಾಯ್ಡುಗೆ ಮೂರು ಪ್ರಕರಣಗಳಲ್ಲಿ ನಿರೀಕ್ಷಣಾ ಜಾಮೀನು

ABOUT THE AUTHOR

...view details