ನವದೆಹಲಿ: ಮಣಿಪುರದ ಇಂಫಾಲ್ನಿಂದ ಜನವರಿ 14ರಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದ 'ಭಾರತ್ ಜೋಡೋ ನ್ಯಾಯ ಯಾತ್ರೆ' ಆರಂಭವಾಗಲಿದೆ. ಇದಕ್ಕೂ ಮುನ್ನ ಅವರು ಸಾಮಾಜಿಕ ಸಂಘಟನೆಗಳು ಮತ್ತು ಜನಾಂದೋಲನಗಳ ಪ್ರತಿನಿಧಿಗಳನ್ನು ಭೇಟಿ ಮಾಡಿ ಸಂವಾದ ನಡೆಸಿದರು.
ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ನಡೆದ ಭಾರತ್ ಜೋಡೋ ಯಾತ್ರೆ ಮಾದರಿಯಲ್ಲಿ ರಾಹುಲ್ ಗಾಂಧಿ ಮಣಿಪುರದಿಂದ ಮಹಾರಾಷ್ಟ್ರಕ್ಕೆ ಭಾರತ್ ಜೋಡೋ ನ್ಯಾಯ ಯಾತ್ರೆ ಕೈಗೊಳ್ಳುತ್ತಿದ್ದಾರೆ. ಲೋಕಸಭೆ ಚುನಾವಣೆಗೂ ಮೊದಲು ಈ ಯಾತ್ರೆ ಜರುಗಲಿದೆ. ಇದಕ್ಕೂ ಮುಂಚಿತವಾಗಿ ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಸಾಮಾಜಿಕ ಸಂಘಟನೆಗಳ ಪ್ರತಿನಿಧಿಗಳೊಂದಿಗೆ ಸಮಾಲೋಚನೆ ಮಾಡಿದ್ದಾರೆ.
ಸಂಸದ ರಾಹುಲ್ ಜೊತೆ ಸಂವಾದದಲ್ಲಿ ಪಾಲ್ಗೊಂಡ ಪ್ರತಿನಿಧಿಗಳು ದಲಿತರು, ಆದಿವಾಸಿಗಳು, ಹಿಂದುಳಿದ ವರ್ಗಗಳು, ಮಹಿಳೆಯರು, ನಿರುದ್ಯೋಗಿ ಯುವಕರು ಮತ್ತು ಅಸಂಘಟಿತ ಕಾರ್ಮಿಕರು ಸೇರಿದಂತೆ ದೇಶದಾದ್ಯಂತ ಸಾಮಾಜಿಕ ಗುಂಪುಗಳ 'ನ್ಯಾಯ'ದ ಪ್ರಸ್ತಾಪಿಸಿದರು. ಈ ಸಂಘಟನೆಗಳ ಸದಸ್ಯರ ಎಲ್ಲ ಸಲಹೆಗಳನ್ನು ಸ್ವಾಗತಿಸಿದ ರಾಹುಲ್ , ಯಾತ್ರೆಯ ಮೂಲಕ 'ನ್ಯಾಯ'ಕ್ಕಾಗಿ ಹೋರಾಡುವ ತಮ್ಮ ಸಂಕಲ್ಪವನ್ನು ವ್ಯಕ್ತಪಡಿಸಿದರು. ಅಲ್ಲದೇ, ನ್ಯಾಯಕ್ಕಾಗಿ ಹೋರಾಡುವ ಎಲ್ಲರಿಗೂ ತಮ್ಮ ಯಾತ್ರೆಯನ್ನು ವೇದಿಕೆಯಾಗಿ ಬಳಸಿಕೊಳ್ಳುವಂತೆಯೂ ಸಲಹೆ ನೀಡಿದರು.
ಪ್ರಧಾನಿ ಮೋದಿ, ಬಿಜೆಪಿ ಮತ್ತು ಆರ್ಎಸ್ಎಸ್ನಿಂದ ಆಗುತ್ತಿರುವ ಅನ್ಯಾಯವನ್ನು ಎದುರಿಸಲು ರಾಹುಲ್ ಗಾಂಧಿ ಕರೆ ನೀಡಿದರು. ರಾಜಕೀಯ ಪಕ್ಷಗಳು, ಸಂಘಟನೆಗಳು ಮತ್ತು ಚಳವಳಿಗಳಲ್ಲಿ ತೊಡಗಿರುವ ಮತ್ತು ಓರ್ವ ವ್ಯಕ್ತಿಯಾಗಿ ನ್ಯಾಯಕ್ಕಾಗಿ ಹೋರಾಡುವ ಎಲ್ಲರ ನಡುವಿನ ಸಹಭಾಗಿತ್ವವು ಈಗ ನಿರ್ಣಾಯಕವಾಗಿದೆ ಎಂಬುವುದಾಗಿಯೂ ಅವರು ಅಭಿಪ್ರಾಯಪಟ್ಟರು ಎಂದು ಕಾಂಗ್ರೆಸ್ ತಿಳಿಸಿದೆ. ಈ ಸಂವಾದದಲ್ಲಿ ಕಾಂಗ್ರೆಸ್ ಸಂಘಟನಾ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಮತ್ತು ಹಿರಿಯ ನಾಯಕ ದಿಗ್ವಿಜಯ ಸಿಂಗ್ ಪಾಲ್ಗೊಂಡಿದ್ದರು.
6700 ಕಿ.ಮೀ. ಯಾತ್ರೆ: ಭಾರತ್ ಜೋಡೋ ನ್ಯಾಯ ಯಾತ್ರೆಯನ್ನು ರಾಹುಲ್ ಗಾಂಧಿ ಮಣಿಪುರದಿಂದ ಮಹಾರಾಷ್ಟ್ರದ ಮುಂಬೈಗೆ ಮುನ್ನಡೆಸಲಿದ್ದಾರೆ. ಸುಮಾರು 100 ಲೋಕಸಭಾ ಕ್ಷೇತ್ರಗಳನ್ನು ಒಳಗೊಂಡ 15 ರಾಜ್ಯಗಳ ಮೂಲಕ 6,700 ಕಿ.ಮೀ. ದೂರ ಯಾತ್ರೆ ಸಾಗಲಿದೆ. ಈ ಬಾರಿ ಬಸ್ನಲ್ಲಿ ರಾಹುಲ್ ತಮ್ಮ ಯಾತ್ರೆ ಕೈಗೊಳ್ಳಲಿದ್ದು, ಹಲವಾರು ಕಡೆಗಳಲ್ಲಿ ಜನರೊಂದಿಗೆ ಸಂವಾದ ನಡೆಸಲಿದ್ದಾರೆ. ಇದು ಚುನಾವಣಾ ಯಾತ್ರೆಯಲ್ಲ, ರಾಜಕೀಯ ಯಾತ್ರೆ ಎಂದಿರುವ ಕಾಂಗ್ರೆಸ್, ಈ ಯಾತ್ರೆ ಜನರಿಗೆ ಆಗಿರುವ ಅನ್ಯಾಯವನ್ನು ಎತ್ತಿ ತೋರಿಸಲಿದ್ದು, ಜನರ ಸಮಸ್ಯೆಗಳನ್ನು ಆಲಿಸಲಿದೆ ಎಂದು ತಿಳಿಸಿದೆ.
ಇದನ್ನೂ ಓದಿ:'ಭಾರತ್ ಜೋಡೋ ನ್ಯಾಯ ಯಾತ್ರೆ'ಗೆ ಇನ್ನೂ ಅನುಮತಿ ನೀಡದ ಅಸ್ಸೋಂ ಸರ್ಕಾರ: ಕಾಂಗ್ರೆಸ್ ಗರಂ