ಯವತ್ಮಾಲ್ (ಮಹಾರಾಷ್ಟ್ರ):ವಸಂತರಾವ್ ನಾಯಕ್ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ನಡೆದ ಗರ್ಭಪಾತದ ವರದಿ ಬಹಿರಂಗಪಡಿಸುವಿಕೆಯೊಂದಿಗೆ ಪೂಜಾ ಚವ್ಹಾಣ್ ಆತ್ಮಹತ್ಯೆ ಪ್ರಕರಣ ಮತ್ತಷ್ಟು ಸಂಚಲನ ಮೂಡಿಸಿದೆ.
ಫೆಬ್ರವರಿ 6 ರಂದು ಬೆಳಗಿನ ಜಾವ 2 ಗಂಟೆಗೆ ಪೂಜಾ ಅರುಣ್ ರಾಥೋಡ್ ಎಂಬ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಆದ್ರೆ ಒಂದೇ ಹೆಸರು ಇರುವುದರಿಂದ ಗೊಂದಲಗಳಿಗೆ ಕಾರಣವಾಗಿದ್ದು, ಪೂಜಾ ಚವ್ಹಾಣ್ ಆತ್ಮಹತ್ಯೆಗೂ ಮುನ್ನ ಗರ್ಭಪಾತ ಮಾಡಿಸಿದ್ದರು ಎಂಬ ಗಾಳಿ ಸುದ್ದಿ ಹರಿದಾಡಿತ್ತು.
ಪೂಜಾ ಗಭಪಾತದ ಬಗ್ಗೆ ವೈದ್ಯರ ಹೇಳಿದ್ದು ಹೀಗೆ ಮುಂಜಾನೆ 2 ಗಂಟೆಗೆ ಪ್ರವೇಶ ಪಡೆದ ಹುಡುಗಿ ಪೂಜಾ ಅರುಣ್ ರಾಥೋಡ್ ಅದು ಪೂಜಾ ಚವ್ಹಾಣ್ ಅಲ್ಲ ಎಂದು ಮಾತೃತ್ವ ವಿಭಾಗದ ಮುಖ್ಯಸ್ಥ ಡಾ.ಶ್ರೀಕಾಂತ್ ವರ್ಹಡೆ ಸ್ಪಷ್ಟಪಡಿಸಿದ್ದಾರೆ.
ದಾಖಲಾತಿ ಸಮಯದಲ್ಲಿ ಅವರು ಆಸ್ಪತ್ರೆಯಲ್ಲಿ ಇರಲಿಲ್ಲ. ಬೇರೊಬ್ಬರು ಅವಳಿಗೆ ಚಿಕಿತ್ಸೆ ನೀಡಿದ್ದಾರೆ. ಯಾವುದೇ ತೊಡಕುಗಳಿಲ್ಲದೇ ಅಪೂರ್ಣ ಸ್ವಯಂಪ್ರೇರಿತ ಗರ್ಭಪಾತಕ್ಕೆ ಒಳಗಾಗಿದ್ದರು ಎಂದು ಡಾ.ಶ್ರೀಕಾಂತ್ ಹೇಳಿದ್ದಾರೆ.
22 ವರ್ಷದ ಟಿಕ್ ಟಾಕ್ ಸ್ಟಾರ್ ಪೂಜಾ ಚವ್ಹಾಣ್ ಫೆಬ್ರವರಿ 7 ರಂದು ಪುಣೆಯ ವನವಾಡಿ ಪ್ರದೇಶದಲ್ಲಿ ನಿಗೂಢ ಪರಿಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದ್ದಳು. ಆಕೆಯದು ಆತ್ಮಹತ್ಯೆಯೋ ಅಥವಾ ಕೊಲೆಯೋ ಎಂಬುದರ ಬಗ್ಗೆ ಪೊಲೀಸ್ ಇಲಾಖೆ ತನಿಖೆ ನಡೆಸುತ್ತಿದೆ.
ಆಕೆ ಆತ್ಮಹತ್ಯೆ ಮಾಡಿಕೊಂಡ ಐದು ದಿನದ ಹಿಂದೆ ಮಾತನಾಡಿದ್ದಾರೆ ಎನ್ನಲಾದ ಆಡಿಯೋ ಕ್ಲಿಪ್ ಹರಿದಾಡುತ್ತಿದ್ದು, ಈ ಆಡಿಯೋದಲ್ಲಿ ಸರ್ಕಾರಕ್ಕೆ ಸಂಬಂಧಿಸಿದವರ ಹೆಸರು ಕೇಳಿಬಂದಿದೆ ಎಂದು ಈ ಹಿಂದೆ ಬಿಜೆಪಿ ಆರೋಪಿಸಿ ಸಿಬಿಐ ತನಿಖೆಗೆ ಆಗ್ರಹಿಸಿದೆ.
ಈ ವಿಷಯದಲ್ಲಿ ಅರಣ್ಯ ಸಚಿವ ಸಂಜಯ್ ರಾಥೋಡ್ ಅವರ ಹೆಸರು ಕೇಳಿಬಂದಿದ್ದರಿಂದ ಆಕೆಯ ಅನುಮಾನಾಸ್ಪದ ಸಾವು ರಾಜ್ಯದಲ್ಲಿ ಭಾರಿ ರಾಜಕೀಯ ಚರ್ಚೆಗೆ ಕಾರಣವಾಗಿದೆ.