ಹೈದರಾಬಾದ್:ಜನವರಿ 19ರಂದು ಪ್ರಧಾನಿ ನರೇಂದ್ರ ಮೋದಿ ಅವರು ತೆಲಂಗಾಣಕ್ಕೆ ಭೇಟಿ ನೀಡಲಿದ್ದು, 7,000 ಕೋಟಿ ರೂಪಾಯಿ ಮೌಲ್ಯದ ಹಲವು ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಈ ಸಂದರ್ಭದಲ್ಲಿ ಹೈದರಾಬಾದ್ ಮತ್ತು ವಿಶಾಖಪಟ್ಟಣಂನ ನಡುವೆ ಸಾಗಲಿರುವ ವಂದೇ ಭಾರತ್ ರೈಲಿಗೂ ಅವರು ಚಾಲನೆ ನೀಡುವರು.
ಕಾರ್ಯಕ್ರಮಗಳ ವಿವರ: ಜನವರಿ 19 ರಂದು ಸಿಕಂದರಾಬಾದ್ ರೈಲು ನಿಲ್ದಾಣದಲ್ಲಿ ವಂದೇ ಭಾರತ್ ರೈಲಿಗೆ ಬೆಳಿಗ್ಗೆ 10 ಗಂಟೆಗೆ ಪ್ರಧಾನಿ ಹಸಿರು ನಿಶಾನೆ ನೀಡಲಿದ್ದಾರೆ. ಸಿಕಂದರಾಬಾದ್ ಮತ್ತು ವಿಶಾಖಪಟ್ಟಣಂ ನಡುವೆ ಸರಿಸುಮಾರು 8 ಗಂಟೆಗಳ ಕಾಲ ಸಂಚಲಿಸಲಿರುವ ರೈಲು ಸಂಚರಿಸಲಿದೆ. ಈ ಮೂಲಕ ದೇಶದ 8ನೇ ವಂದೇ ಭಾರತ್ ರೈಲಿಗೆ ಚಾಲನೆ ದೊರೆಯಲಿದೆ. ವಾರಂಗಲ್, ಖಮ್ಮಂ, ವಿಜಯವಾಡ ಮತ್ತು ರಾಜಮಂಡ್ರಿ ನಿಲ್ದಾಣಗಳಲ್ಲಿ ರೈಲಿಗೆ ಮಧ್ಯಂತರ ನಿಲುಗಡೆ ನೀಡಲಾಗಿದೆ.
ಇದಾದ ಬಳಿಕ ಪ್ರಧಾನಿ 699 ಕೋಟಿ ರೂಪಾಯಿ ವೆಚ್ಚದ ಸಿಕಂದರಾಬಾದ್ ರೈಲು ನಿಲ್ದಾಣದ ಅಭಿವೃದ್ಧಿ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಲಿದ್ದಾರೆ ಎಂದು ಕೇಂದ್ರ ಸಂಸ್ಕೃತಿ, ಪ್ರವಾಸೋದ್ಯಮ ಸಚಿವ ಜಿ.ಕಿಶನ್ ರೆಡ್ಡಿ ಅವರ ಕಚೇರಿಯ ಪ್ರಕಟಣೆ ತಿಳಿಸಿದೆ. ಇದರೊಂದಿಗೆ 1,850 ಕೋಟಿ ರೂ ವೆಚ್ಚದಲ್ಲಿ ನಿರ್ಮಾಣವಾಗಲಿರುವ ಸುಮಾರು 150 ಕಿ.ಮೀ ರಾಷ್ಟ್ರೀಯ ಹೆದ್ದಾರಿ ರಸ್ತೆಗೆ ಮೋದಿ ಭೂಮಿಪೂಜೆ ನೆರವೇರಿಸುವರು. ಈ ಯೋಜನೆ, ಮಹಬೂಬ್ನಗರ-ಚಿಂಚೋಳಿ ವಿಭಾಗದಲ್ಲಿ 103 ಕಿಲೋಮೀಟರ್ ರಾಷ್ಟ್ರೀಯ ಹೆದ್ದಾರಿ 167N ಮತ್ತು NH-161B ಯ ನಿಜಾಂಪೇಟ್-ನಾರಾಯಣಖೇಡ್-ಬೀದರ್ ವಿಭಾಗದಲ್ಲಿ 46 ಕಿಲೋಮೀಟರ್ ರಾಷ್ಟ್ರೀಯ ಹೆದ್ದಾರಿ ರಸ್ತೆಗಳನ್ನು ಒಳಗೊಂಡಿದೆ ಎಂದು ಪ್ರಕಟಣೆ ತಿಳಿಸಿದೆ.
ಇದೇ ಕಾರ್ಯಕ್ರಮದಲ್ಲಿ ಒಟ್ಟಿಗೆ 521 ಕೋಟಿ ರೂಪಾಯಿ ವೆಚ್ಚದಲ್ಲಿ ಕಾಜಿಪೇಟೆಯಲ್ಲಿ ನಿರ್ಮಿಸಲಿರುವ ರೈಲ್ವೇ ಆವರ್ತಕ ಕೂಲಂಕಷ ಪರೀಕ್ಷೆ (POH) ಕಾರ್ಯಾಗಾರದ ನಿರ್ಮಾಣಕ್ಕೆ ಪ್ರಧಾನಿ ಅಡಿಪಾಯ ಹಾಕಲಿದ್ದಾರೆ. ಇದರ ನಿರ್ಮಾಣದ ನಂತರ ರೈಲಿನ ಕೋಚ್ಗಳ ಸವೆತವಾಗಿದ್ದರೆ, ರಚನಾತ್ಮಕ ಹಾನಿ ಮತ್ತು ಕೋಚ್ಗಳ ಫಿಟ್ನೆಸ್ ಖಚಿತಪಡಿಸಿಕೊಳ್ಳಲು ವಿಮರ್ಶಾತ್ಮಕವಾಗಿ ಆವರ್ತಕ ಕೂಲಂಕಷ ಪರೀಕ್ಷೆ ನಡೆಸಲಾಗುತ್ತದೆ. ಈ POH ಅನ್ನು ನಿರ್ಮಿಸಲು ಟೆಂಡರ್ ಅನ್ನು ನಿಯೋಜಿಸಲಾಗಿದ್ದು, ಈ ಯೋಜನೆಯು ಒಟ್ಟು 3,000 ಜನರಿಗೆ ನೇರ ಉದ್ಯೋಗವನ್ನು ಸೃಷ್ಟಿಸುವ ನಿರೀಕ್ಷೆಯಿದೆ.