ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಭಾರತ ವಿಭಜನೆಯ ಸಂದರ್ಭದಲ್ಲಿ ಪ್ರಾಣ ಕಳೆದುಕೊಂಡವರಿಗೆ ಶ್ರದ್ಧಾಂಜಲಿ ಸಲ್ಲಿಸಿದರು. ದೇಶ ವಿಭಜನೆಯ ಕರಾಳ ನೆನಪಿನ ದಿನವಾದ ಇಂದು ಆ ಅವಧಿಯಲ್ಲಿ ಜನರು ಅನುಭವಿಸಿದ ನೋವುಗಳನ್ನು ಸ್ಮರಿಸಿದರು. ವಿಭಜನೆ ಸಂದರ್ಭದಲ್ಲಿ ಪ್ರಾಣ ಕಳೆದುಕೊಂಡ ಭಾರತೀಯರನ್ನು ಸ್ಮರಿಸಿಕೊಳ್ಳುವ ಸಂದರ್ಭ ಇದಾಗಿದೆ ಎಂದು ಅವರು ಹೇಳಿದರು.
ದೇಶ ವಿಭಜನೆಯಲ್ಲಿ ಪ್ರಾಣ ತ್ಯಾಗ ಮಾಡಿದ ಭಾರತೀಯರನ್ನು ಪೂಜ್ಯಭಾವದಿಂದ ಸ್ಮರಿಸುವ ಸಂದರ್ಭವೇ ’ವಿಭಜನೆಯ ಸಂಸ್ಮರಣಾ ದಿನ'ವಾಗಿದೆ. ಇದರೊಂದಿಗೆ, ಈ ದಿನ ಸ್ಥಳಾಂತರದ ಭಾರವನ್ನು ಹೊರಲು ಒತ್ತಾಯಿಸಲ್ಪಟ್ಟವರ ನೋವು ಮತ್ತು ಹೋರಾಟವನ್ನು ನಮಗೆ ನೆನಪಿಸುತ್ತದೆ. ಅಂತಹ ಎಲ್ಲರಿಗೂ ನಾನು ನಮಸ್ಕರಿಸುತ್ತೇನೆ" ಎಂದು ಮೋದಿ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ.
'ವಿಭಜನೆಯ ಕರಾಳ ನೆನಪಿನ ದಿನ':1947ರಲ್ಲಿ ಭಾರತವನ್ನು ಭಾರತ ಮತ್ತು ಪಾಕಿಸ್ತಾನ ಎಂಬ ಎರಡು ಪ್ರತ್ಯೇಕ ರಾಷ್ಟ್ರಗಳಾಗಿ ವಿಭಜಿಸಲಾಯಿತು. ಈ ವಿಭಜನೆ ವ್ಯಾಪಕ ಕೋಮು ಹಿಂಸಾಚಾರ ಮತ್ತು ಸ್ಥಳಾಂತರಕ್ಕೆ ಕಾರಣವಾಯಿತು. ಜತೆಗೆ ಇದು ವಿವಿಧ ಸಮುದಾಯಗಳ ಸಾವಿರಾರು ಜನರ ಸಾವಿಗೂ ಕಾರಣವಾಗಿತ್ತು. ಈ ದಿನ ಬಲವಂತವಾಗಿ ವಲಸೆ ಬಂದವರ ಸಂಕಷ್ಟ ಮತ್ತು ಹೋರಾಟದ ಸ್ಮರಣಾರ್ಥವೂ ಆಗಿದೆ. ವಿಭಜನೆಯ ನಂತರ ಬಲವಂತವಾಗಿ ವಲಸೆ ಬಂದವರ ಸಂಕಷ್ಟಗಳು ಮತ್ತು ಹೋರಾಟಗಳನ್ನು ಆಗಸ್ಟ್ 14 ನೆನಪಿಸುತ್ತದೆ. ದೇಶ ವಿಭಜನೆಯ ದಿನವಾದ ಆ.14 ಅನ್ನು, ಇನ್ನು ಮುಂದೆ 'ವಿಭಜನೆಯ ಕರಾಳ ನೆನಪಿನ ದಿನ'ವನ್ನಾಗಿ ಆಚರಿಸಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ 2021ರಲ್ಲಿ ಘೋಷಿಸಿದ್ದರು.
ಅಂದಿನ ಸಂದರ್ಭವನ್ನು ಸ್ಮರಿಸಿದ ಪ್ರಧಾನಿ ಮೋದಿ 'ವಿಭಜನೆಯ ನೋವನ್ನು ಎಂದಿಗೂ ಮರೆಯಲಾಗದು. ತಿಳಿಗೇಡಿಗಳಿಂದ ಭುಗಿಲೆದ್ದ ಹಿಂಸಾಚಾರ, ದ್ವೇಷದಲ್ಲಿ ನಮ್ಮ ಲಕ್ಷಾಂತರ ಸೋದರ, ಸೋದರಿಯರು ಸ್ಥಳಾಂತರಗೊಳ್ಳಬೇಕಾಯಿತು. ಆ ಸಂದರ್ಭದಲ್ಲಿ ಅನೇಕರು ಪ್ರಾಣ ಕಳೆದುಕೊಂಡರು ಎಂದು ಹೇಳಿದ್ದರು.