ನವದೆಹಲಿ:ಟಿಎಂಸಿ ನಾಯಕಿ, ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ 'ಯುಪಿಎಗೆ ಅಸ್ಥಿತ್ವದಲ್ಲಿ ಇಲ್ಲ' ಎಂಬ ಹೇಳಿಕೆಗೆ ಕಾಂಗ್ರೆಸ್ ನಾಯಕರು ತಿರುಗೇಟು ನೀಡಿದ್ದಾರೆ. ಈ ಬಗ್ಗೆ ದೆಹಲಿಯಲ್ಲಿ ಇಂದು ಪ್ರತಿಕ್ರಿಯಿಸಿರುವ ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್, ಕಾಂಗ್ರೆಸ್ ಇಲ್ಲದೇ ಬಿಜೆಪಿ ವಿರುದ್ಧ ಯಾವುದೇ ರಾಜಕೀಯ ಮೈತ್ರಿ ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ನಮ್ಮೊಂದಿಗೆ ಸೇರಲು ಬಯಸುವವರು ನಮ್ಮೊಂದಿಗೆ ಬರಬೇಕು. ನಮ್ಮೊಂದಿಗೆ ಸೇರಲು ಬಯಸದವರು ಹಾಗೆ ಮುಕ್ತರಾಗಿದ್ದಾರೆ. ನಮ್ಮ ಹೋರಾಟ ಆಡಳಿತ ಪಕ್ಷದ ಬಿಜೆಪಿ ವಿರುದ್ಧ ಮಾತ್ರ ಎಂದಿದ್ದಾರೆ.
ಕಾಂಗ್ರೆಸ್ ಹೊರತುಪಡಿಸಿ ಬಹುತೇಕ ಎಲ್ಲ ಪಕ್ಷಗಳು ಬಿಜೆಪಿಯೊಂದಿಗೆ ಸರ್ಕಾರ ರಚಿಸಿವೆ. ಅಧಿಕಾರದಲ್ಲಿರುವ ಪಕ್ಷದ ವಿರುದ್ಧ ಹೋರಾಡುವುದು ಕಾಂಗ್ರೆಸ್ ಪಕ್ಷ ಮಾತ್ರ. ನಾವು ಇಲ್ಲದೇ ಬಿಜೆಪಿ ವಿರುದ್ಧ ಈ ದೇಶದಲ್ಲಿ ಯಾವುದೇ ರಾಜಕೀಯ ಮೈತ್ರಿ ಸಾಧ್ಯವಿಲ್ಲ ಎಂದು ಸಿಂಗ್ ಅಭಿಪ್ರಾಯಪಟ್ಟಿದ್ದಾರೆ.
ಈ ದೇಶದ ರಾಜಕೀಯ ಹೋರಾಟಗಳಿಗೆ ಸಿದ್ಧಾಂತವೇ ಮುಖ್ಯ ಕಾರಣ. ಭಾರತದಲ್ಲಿ ಎರಡು ರೀತಿಯ ಸಿದ್ಧಾಂತಗಳಿವೆ, ಒಂದು 'ಗಾಂಧಿ ಮತ್ತು ನೆಹರು', ಇನ್ನೊಂದು 'ಸಂಘ'. ಇವರು ರಾಜಕೀಯದಲ್ಲಿ ಧರ್ಮವನ್ನು ಅಸ್ತ್ರವಾಗಿ ಬಳಸುತ್ತಾರೆ ಎಂದು ಪ್ರತಿಪಾದಿಸಿದರು.