ಚಂಡೀಗಢ(ಪಂಜಾಬ್):ಡೆಡ್ಲಿ ವೈರಸ್ ಕೊರೊನಾ ಹಾವಳಿ ಹೆಚ್ಚಾಗುತ್ತಿರುವ ಕಾರಣ ಪಂಜಾಬ್ನಲ್ಲೂ ನೈಟ್ ಕರ್ಫ್ಯೂ ವಿಧಿಸಲಾಗಿದ್ದು, ಅಲ್ಲಿನ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಮಹತ್ವದ ಆದೇಶ ಹೊರಹಾಕಿದ್ದಾರೆ.
ಸಂಪೂರ್ಣ ಪಂಜಾಬ್ ತುಂಬ ಈ ಕರ್ಫ್ಯೂ ಏಪ್ರಿಲ್ 30ರವರೆಗೆ ಜಾರಿಯಲ್ಲಿರಲಿದ್ದು, ರಾಜಕೀಯ ಸಭೆ, ಸಾಮಾಜಿಕ,ಸಾಂಸ್ಕೃತಿಕ ಹಾಗೂ ಕ್ರೀಡಾ ಕಾರ್ಯಕ್ರಮ ಸಂಪೂರ್ಣವಾಗಿ ರದ್ಧುಗೊಳಿಸಲಾಗಿದೆ. ಅಂತ್ಯಕ್ರಿಯೆ ಹಾಗೂ ಮದುವೆ ಸಮಾರಂಭಗಳಲ್ಲಿ ಭಾಗಿಯಾಗಲು ಕೇವಲ 50 ಜನರಿಗೆ ಅವಕಾಶ ನೀಡಲಾಗಿದೆ.
ಮಾಸ್ಕ್ ಬಳಕೆ ಕಡ್ಡಾಯವಾಗಿದ್ದು, ಶಾಲೆ - ಕಾಲೇಜು ಸಂಪೂರ್ಣವಾಗಿ ಬಂದ್ ಇರಲಿವೆ. ಶೇ.50ರಷ್ಟು ಆಸನದೊಂದಿಗೆ ಚಿತ್ರಮಂದಿರಗಳಲ್ಲಿ ಸಿನಿಮಾ ಪ್ರದರ್ಶನ ಮಾಡಲು ಅನುಮತಿ ನೀಡಲಾಗಿದೆ. ಆದರೆ, ಮಾಲ್ಗಳಲ್ಲಿ ಶೇ.100ರಷ್ಟು ಅನುಮತಿ ಇದೆ.
ಇದನ್ನೂ ಓದಿ: ಕೋವಿಡ್ನಿಂದ ಸಾವು: 8 ಮಂದಿಯ ಮೃತದೇಹ ಒಂದೇ ಚಿತೆ ಮೇಲೆ ಅಂತ್ಯಕ್ರಿಯೆ!
ಮಾರ್ಗಸೂಚಿ ಪಾಲನೆ ಮಾಡದವರ ಮೇಲೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಸೂಚನೆ ನೀಡಲಾಗಿದೆ ಎಂದು ಮುಖ್ಯಮಂತ್ರಿ ತಿಳಿಸಿದ್ದು, ಪಂಜಾಬ್ನಲ್ಲಿ ಕೋವಿಡ್ ಸೋಂಕಿತ ಪ್ರಕರಣ ಹೆಚ್ಚಾಗುತ್ತಿರುವ ಬಗ್ಗೆ ಅವರು ಕಳವಳ ವ್ಯಕ್ತಪಡಿಸಿದ್ದಾರೆ. ಮಹಾಮಾರಿ ಕೊರೊನಾ ವೈರಸ್ ಹಾವಳಿ ಹೆಚ್ಚಾಗಿರುವ ಕಾರಣ ಈಗಾಗಲೇ ದೆಹಲಿ, ಮಹಾರಾಷ್ಟ್ರ, ಛತ್ತೀಸ್ಗಢ ಹಾಗೂ ಮಧ್ಯಪ್ರದೇಶದ ಕೆಲವೊಂದು ನಗರಗಳಲ್ಲಿ ಕರ್ಫ್ಯೂ ವಿಧಿಸಲಾಗಿದೆ. ನಿನ್ನೆ ಒಂದೇ ದಿನ ಬರೋಬ್ಬರಿ 2,900 ಕೋವಿಡ್ ಪ್ರಕರಣ ದಾಖಲಾಗಿದ್ದು, 62 ಜನರು ಸಾವನ್ನಪ್ಪಿದ್ದಾರೆ. ಸದ್ಯ ರಾಜ್ಯದಲ್ಲಿ 25,913 ಸಕ್ರೀಯ ಪ್ರಕರಣಗಳಿವೆ.