ನವದೆಹಲಿ:ಮುಂದಿನ ವರ್ಷ ನಡೆಯಲಿರುವ ವಿಧಾನಸಭೆ ಚುನಾವಣೆಗೆ ಬಿಜೆಪಿ ಭರ್ಜರಿ ಸಿದ್ಧತೆ ನಡೆಸಿರುವ ಮಧ್ಯೆಯೇ, ಇದೀಗ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಸುಮಾರು 17,500 ಕೋಟಿ ರೂಪಾಯಿ ಮೌಲ್ಯದ 23 ವಿವಿಧ ಯೋಜನೆಗಳಿಗೆ ಶಂಕು ಸ್ಥಾಪನೆ ನೆರವೇರಿಸಲಿದ್ದಾರೆ. ಇದು ಬಿಜೆಪಿಯಲ್ಲಿ ಮತ್ತಷ್ಟು ಉತ್ಸಾಹ ಮೂಡಲು ಕಾರಣವಾಗಿದೆ.
ಪ್ರಧಾನಿ ನರೇಂದ್ರ ಮೋದಿ ಅವರು 23 ಯೋಜನೆಗಳಲ್ಲಿ17 ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಈ 17 ಯೋಜನೆಗಳು 14,100 ಕೋಟಿ ರೂಪಾಯಿ ಮೌಲ್ಯವುಳ್ಳದ್ದಾಗಿವೆ. ಅಲ್ಲದೇ ಇದೇ ವೇಳೆ ಪೂರ್ಣಗೊಂಡ 6 ವಿವಿಧ ಕಾಮಗಾರಿಗಳಿಗೂ ಉದ್ಘಾಟನೆ ಭಾಗ್ಯ ನೀಡಿದ್ದಾರೆ.
ಯಾವೆಲ್ಲಾ ಯೋಜನೆಗಳಿಗೆ ಪ್ರಧಾನಿ ಶಂಕು, ಉದ್ಘಾಟನೆ
ನೀರಾವರಿ, ರಸ್ತೆ, ವಸತಿ, ಆರೋಗ್ಯ ಮೂಲಸೌಕರ್ಯ, ಉದ್ಯಮ, ಸ್ವಚ್ಛತೆ, ಕುಡಿಯುವ ನೀರು ಪೂರೈಕೆ ಸಂಬಂಧಿ ಯೋಜನೆಗಳಿಗೆ ಪ್ರಧಾನಿ ಚಾಲನೆ ನೀಡಿದ್ದಾರೆ. ಹಾಗೆಯೇ, ವಿಸ್ತರಣೆಗೊಂಡ ರಸ್ತೆಗಳು, ಪಿಥೋರ್ಗಢ್ನಲ್ಲಿ ಜಲವಿದ್ಯುತ್ ಯೋಜನೆ, ನೈನಿತಾಲ್ನಲ್ಲಿ ಒಳಚರಂಡಿ ಸುಧಾರಣೆ ಜಾಲ ಸೇರಿ ಒಟ್ಟು 6 ಯೋಜನೆಗಳನ್ನು ಪ್ರಧಾನಿ ಮೋದಿ ಉದ್ಘಾಟಿಸಿದರು. ಇವು ಒಟ್ಟು 3,400 ಕೋಟಿ ರೂ. ವೆಚ್ಚದ ಯೋಜನೆಗಳಾಗಿವೆ.
1976ರಲ್ಲಿ ರೂಪಿಗೊಂಡಿದ್ದ ಲಖ್ವಾರ್ ವಿವಿಧೋದ್ದೇಶ ಯೋಜನೆಗಳಿಗೆ ಪ್ರಧಾನಿ ಮೋದಿ ಇಂದು ಶಂಕುಸ್ಥಾಪನೆ ನೆರವೇರಿಸಿದ್ದಾರೆ. 5,750 ಕೋಟಿ ರೂಪಾಯಿ ವೆಚ್ಚದ ಯೋಜನೆ ಇದಾಗಿದೆ. ಈ ಯೋಜನೆ 1976 ರಿಂದಲೂ ನನೆಗುದಿಗೆ ಬಿದ್ದಿತ್ತು. ಹೀಗೆ ಬಹುಕಾಲದಿಂದ ಬಾಕಿ ಉಳಿದಿರುವ ಯೋಜನೆಗೆ ಮೋದಿ ಚಾಲನೆ ನೀಡಿದ್ದಾರೆ.
ಈ ಲಖ್ವಾರ್ ವಿವಿಧೋದ್ದೇಶ ಯೋಜನೆ ಸುಮಾರು 34 ಸಾವಿರ ಹೆಕ್ಟೇರ್ ಹೆಚ್ಚುವರಿ ಭೂಮಿಗೆ ನೀರಾವರಿ ಒದಗಿಸಲಿದೆ. ಸುಮಾರು 300 ಮೆಗಾವ್ಯಾಟ್ ಜಲವಿದ್ಯುತ್ ಉತ್ಪಾದನೆ ಮಾಡಲಿದೆ. ಹಾಗೆಯೇ, ಉತ್ತರಾಖಂಡ್, ಉತ್ತರಪ್ರದೇಶ, ಹರಿಯಾಣ, ದೆಹಲಿ, ಹಿಮಾಚಲ ಪ್ರದೇಶ ಮತ್ತು ರಾಜಸ್ಥಾನಗಳಿಗೆ ಕುಡಿಯುವ ನೀರು ಪೂರೈಸಲಿದೆ.
ಗ್ರಾಮ ಸಡಕ್ ಯೋಜನೆಯಡಿ ರಸ್ತೆ
ಇನ್ನು ಉತ್ತರಾಖಂಡ್ ರಾಜ್ಯಾದ್ಯಂತ ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯಡಿ ರಸ್ತೆ ಸುಧಾರಣೆ, ವಿಸ್ತರಣೆ ಸಂಬಂಧಪಟ್ಟ ಯೋಜನೆಗಳಿಗೆ ಪ್ರಧಾನಿ ಶಂಕುಸ್ಥಾಪನೆ ನೆರವೇರಿಸಿದ್ದಾರೆ. 625 ಕೋಟಿ ರೂಪಾಯಿ ವೆಚ್ಚದ 133 ಗ್ರಾಮಗಳ 1157 ಕಿಮೀ ಉದ್ದದ ರಸ್ತೆ ನಿರ್ಮಾಣಕ್ಕೆ ಮೋದಿ ಅಡಿಗಲ್ಲು ಹಾಕಿದರು. ಇದರೊಂದಿಗೆ 450 ಕೋಟಿ ರೂ. ವೆಚ್ಚದ 151 ಸೇತುವೆಗಳ ನಿರ್ಮಾಣಕ್ಕೂ ಪ್ರಧಾನಿ ಮೋದಿ ಶಂಕುಸ್ಥಾಪನೆ ನೆರವೇರಿಸಿದ್ದಾರೆ.
- ಉಧಾಂನಗರದಲ್ಲಿ ಏಮ್ಸ್ ರಿಶಿಕೇಶ ಸೆಟಲೈಟ್ ಕೇಂದ್ರ
- ಪಿಥೋರ್ಗಡ್ನಲ್ಲಿ ಜಗಜೀವನ್ ರಾಮ್ ಸರ್ಕಾರಿ ವೈದ್ಯಕೀಯ ಕಾಲೇಜು ನಿರ್ಮಾಣ
- ಆರ್ಥಿಕವಾಗಿ ಹಿಂದುಳಿದ ವರ್ಗದವರಿಗಾಗಿ 2400 ಮನೆಗಳ ನಿರ್ಮಾಣ
- 13 ಜಿಲ್ಲೆಗಳಲ್ಲಿ 73 ನೀರು ಪೂರೈಕೆ ಯೋಜನೆಗಳಿಗೆ ಚಾಲನೆ
- ಕಾಶಿಪುರ್ನಲ್ಲಿ 41 ಎಕರೆಯಲ್ಲಿ ಅರೋಮಾ ಪಾರ್ಕ್
- ಸಿತಾರ್ಗಂಜ್ನಲ್ಲಿ 40 ಎಕರೆ ವಿಸ್ತೀರ್ಣದ ಪ್ಲಾಸ್ಟಿಕ್ ಇಂಡಸ್ಟ್ರಿಯಲ್ ಪಾರ್ಕ್
ಇದನ್ನೂ ಓದಿ:ಒಮಿಕ್ರಾನ್ ವಿರುದ್ಧ ಕೋವಿಡ್ ಲಸಿಕೆ ಪರಿಣಾಮಕಾರಿ: WHO ವಿಜ್ಞಾನಿ ಡಾ. ಸೌಮ್ಯ ಸ್ವಾಮಿನಾಥನ್