ಚೆನ್ನೈ(ತಮಿಳುನಾಡು):ಪ್ರೀತಿಯ ಸ್ಮಾರಕ ತಾಜ್ಮಹಲ್. ಇದನ್ನು ಅದೆಷ್ಟೋ ಪ್ರೇಮಿಗಳು ಆದರ್ಶವಾಗಿ ಪರಿಗಣಿಸುತ್ತಾರೆ. ಅಮೃತಶಿಲೆಯಲ್ಲಿ ಮೈದಾಳಿರುವ ಈ ಭವ್ಯ ಕಟ್ಟಡವನ್ನು ವೀಕ್ಷಿಸಲು ಸಾವಿರಾರು ಪ್ರವಾಸಿಗರು ವರ್ಷವುದ್ದಕ್ಕೂ ಇಲ್ಲಿಗೆ ಎಡತಾಕುತ್ತಾರೆ. ಅದರ ಪ್ರತಿರೂಪದಂತಿರುವ ಮಿನಿ ತಾಜ್ಮಹಲ್ ದಕ್ಷಿಣ ಭಾರತದಲ್ಲೂ ಇದೆ ಎಂಬುದು ಯಾರಿಗೂ ಗೊತ್ತಿರದ ಸುಪ್ತ ವಿಷಯ. ಉತ್ತರ ಭಾರತದಲ್ಲಿರುವ ಆ ಸ್ಮಾರಕ ಪ್ರೇಯಸಿಯ ಪ್ರೀತಿಗೆ ದ್ಯೋತಕವಾಗಿದ್ದರೆ, ಇಲ್ಲಿರುವ ಈ ಸ್ಮಾರಕ ಹೆತ್ತಮ್ಮನ ಪ್ರೀತಿಯ ಸಂಕೇತವಾಗಿದೆ.
ನಿಜ! ಅಂದು(1631 ರಲ್ಲಿ) ಆಗ್ರಾದ ಯಮುನಾ ನದಿಯ ಮೇಲೆ ಮೊಘಲ್ ಸಾಮ್ರಾಟ ಷಹಜಹಾನ್ ತನ್ನ ನೆಚ್ಚಿನ ಪತ್ನಿ ಮುಮ್ತಾಜ್ಗಾಗಿ ಪ್ರಪಂಚದ ಅದ್ಭುತಗಳಲ್ಲಿ ಒಂದಾದ ತಾಜ್ ಮಹಲ್ ಅನ್ನು ಕಟ್ಟಿಸಿದ್ದರು. ಅದೇ ತೆರನಾಗಿ ತಮಿಳುನಾಡಿನ ತಿರುವಾರೂರಿನಲ್ಲಿ ಉದ್ಯಮಿಯೊಬ್ಬರು ಅವರ ತಾಯಿಯ ನೆನಪಿಗಾಗಿ ಅಮೃತಶಿಲೆಗಳಲ್ಲಿ ಭವ್ಯ ಕಟ್ಟಡ ನಿರ್ಮಿಸಿದ್ದಾರೆ. ಇದು ದಕ್ಷಿಣ ಭಾರತದ ತಾಜ್ಮಹಲ್ ಎಂದರೆ ತಪ್ಪಾಗಲಿಕ್ಕಿಲ್ಲ.
ಏನಿದರ ಹಿನ್ನೆಲೆ?:ಉದ್ಯಮಿ ಅಮರುದ್ದೀನ್ ಎಂಬುವರು ಇದರ ನಿರ್ಮಾತೃ. ತಾಯಿ ಜೈಲಾನಿ ಬೀವಿ ಅವರ ಮೇಲಿನ ಅಗಾಧ ಪ್ರೇಮ ಈ ಶಿಲಾಮೃತ ಕಟ್ಟಡ ಮೈದಾಳುವಂತೆ ಮಾಡಿದ್ದಾರೆ. ತಾಜ್ಮಹಲ್ ಮಾದರಿಯನ್ನು ತಮ್ಮ ಹುಟ್ಟೂರಾದ ತಿರುವಾರೂರಿ ಜಿಲ್ಲೆಯ ಅಮ್ಮಯ್ಯಪ್ಪನ್ ಗ್ರಾಮದಲ್ಲಿ 5 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿದ್ದಾರೆ. ಇಷ್ಟು ದಿನ ಯಾರಿಗೂ ಗೊತ್ತಿರದ ಪ್ರೀತಿಯ ದ್ಯೋತಕದ ಕಟ್ಟಡ, ಇದೀಗ ರಾಜ್ಯದ ಜನರ ಮನೆ ಮಾತಾಗಿದೆ.
ಉದ್ಯಮಿ ಅಮರುದ್ದೀನ್ ಅವರ ತಂದೆ ಅಮೃತೀನ್ ಶೇಕ್ ದಾವೂದ್ ಸಾಹಿಬ್ ಅವರು ಚೆನ್ನೈನಲ್ಲಿ ಹಾರ್ಡ್ವೇರ್ ಉದ್ಯಮಿಯಾಗಿದ್ದರು. ಐದು ಮಕ್ಕಳ ಪೈಕಿ ಅಮರುದ್ದೀನ್ ಏಕೈಕ ಸುಪುತ್ರ. ಚರ್ಮದ ವ್ಯಾಪಾರಿಯಾಗಿದ್ದ ಅಮೃತೀನ್ ಶೇಕ್ ಅವರು ತಮ್ಮ ಮಕ್ಕಳು ಚಿಕ್ಕವರಿದ್ದಾಗಲೇ ಕಣ್ಮುಚ್ಚಿದ್ದರು. ಇದು ಕುಟುಂಬವನ್ನು ದಿಕ್ಕೆಡಿಸಿತ್ತು.
ಐದು ಚಿಕ್ಕ ಮಕ್ಕಳನ್ನು ತಾಯಿ ಜೈಲಾನಿ ಬೀವಿ ಅವರು ಬೆಳೆಸಲು ಇನ್ನಿಲ್ಲದ ಕಷ್ಟಪಟ್ಟರು. ಪತಿಯ ವ್ಯಾಪಾರವನ್ನು ಮುಂದುವರಿಸಿಕೊಂಡು ಹೋದ ಅವರು, ಪುತ್ರ, ನಾಲ್ವರು ಪುತ್ರಿಯರೊಂದಿಗೆ ಬದುಕು ಕಟ್ಟಿಕೊಂಡರು. ಎಲ್ಲ ಪುತ್ರಿಯರಿಗೆ ಮದುವೆ ಮಾಡಿಸಿಕೊಟ್ಟರು. ಪುತ್ರ ಅಮರುದ್ದೀನ್ ತಾಯಿಯ ಜೊತೆಗೆ ನಿಂತು ವ್ಯಾಪಾರ ನಿಭಾಯಿಸುತ್ತಿದ್ದ.