ಕರ್ನಾಟಕ

karnataka

ETV Bharat / bharat

ಮಣಿಪುರ ಹಿಂಸಾಚಾರ ಬಿಂಬಿಸುವ ವಿಡಿಯೋ, ಫೋಟೋ ಪ್ರಸಾರಕ್ಕೆ ನಿಷೇಧ

ಮಣಿಪುರ ಹಿಂಸಾಚಾರದ ವಿಡಿಯೋ ಮತ್ತು ಫೋಟೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿವೆ. ಹಿಂಸಾತ್ಮಕ ದೃಶ್ಯಗಳ ಪ್ರಸಾರವನ್ನು ನಿಷೇಧಿಸಿ ಮಣಿಪುರ ಸರ್ಕಾರ ಆದೇಶಿಸಿದೆ.

By PTI

Published : Oct 12, 2023, 7:31 PM IST

Manipur govt prohibits circulation of videos, images depicting violence
ಮಣಿಪುರ ಹಿಂಸಾಚಾರ ಬಿಂಬಿಸುವ ವಿಡಿಯೋಗಳು, ಫೋಟೋಗಳ ಪ್ರಸಾರಕ್ಕೆ ನಿಷೇಧ ಹೇರಿದ ಸರ್ಕಾರ

ಇಂಫಾಲ್​ (ಮಣಿಪುರ): ಹಿಂಸಾಚಾರಪೀಡಿತ ಮಣಿಪುರದಲ್ಲಿ ಪರಿಸ್ಥಿತಿಯನ್ನು ಸಹಜ ಸ್ಥಿತಿಗೆ ತರಲು ರಾಜ್ಯ ಸರ್ಕಾರ ಪಯತ್ನಿಸುತ್ತಿದೆ. ಈ ನಿಟ್ಟಿನಲ್ಲಿ ಹಿಂಸಾಚಾರ ಮತ್ತು ಆಸ್ತಿ ಹಾನಿ ಬಿಂಬಿಸುವ ವಿಡಿಯೋ ಅಥವಾ ಚಿತ್ರಗಳ ಪ್ರಸಾರಕ್ಕೆ ನಿಷೇಧ ಹೇರಿದೆ. ಇಂತಹ ವಿಡಿಯೋ ಹಾಗೂ ಫೋಟೋಗಳನ್ನು ಪ್ರಸಾರ ಮಾಡಿದರೆ, ಅಂಥವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದೆ.

ಕಳೆದ ಆರು ತಿಂಗಳಿಂದ ಈಶಾನ್ಯ ರಾಜ್ಯ ಮಣಿಪುರ ಹಿಂಸಾಚಾರದಿಂದ ನಲುಗುತ್ತಿದೆ. ಇದರ ನಡುವೆ ವ್ಯಾಪಕ ಹಿಂಸಾಚಾರದ ವಿಡಿಯೋ ಮತ್ತು ಫೋಟೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ಸಾಕಷ್ಟು ವೈರಲ್ ಆಗುತ್ತಿವೆ. ಇತ್ತೀಚೆಗೆ ಇಬ್ಬರು ಯುವಕರನ್ನು ಗುಂಪೊಂದು ಗುಂಡಿಕ್ಕಿ ಹತ್ಯೆಗೈದ ನಂತರ ಅವರನ್ನು ಗುಂಡಿಯಲ್ಲಿ ಹೂಳುತ್ತಿರುವ ಅಮಾನವೀಯ ದೃಶ್ಯ ಬಹಿರಂಗವಾಗಿತ್ತು. ಹೀಗಾಗಿ ರಾಜ್ಯ ಗೃಹ ಇಲಾಖೆಯು ಹಿಂಸಾತ್ಮಕವಾದ ವಿಡಿಯೋ ಹಾಗೂ ಫೋಟೋ ಪ್ರಸಾರ ನಿರ್ಬಂಧಿಸಿದೆ.

ಇದನ್ನೂ ಓದಿ:ಮಣಿಪುರ ಹಿಂಸಾಚಾರ: ನಾಪತ್ತೆಯಾಗಿದ್ದ ಇಬ್ಬರು ವಿದ್ಯಾರ್ಥಿಗಳು ಕೊಲೆಯಾದ ಸ್ಥಿತಿಯಲ್ಲಿ ಪತ್ತೆ

''ರಾಜ್ಯದಲ್ಲಿ ಕಾನೂನು, ಸುವ್ಯವಸ್ಥೆಯನ್ನು ಹದಗೆಡಿಸುವ ನಿಟ್ಟಿನಲ್ಲಿ ಯಾರಿಗಾದರೂ ಹಾನಿ ಅಥವಾ ಗಾಯ ಉಂಟುಮಾಡುವ ಅಥವಾ ವಿವಿಧ ಸಾಮಾಜಿಕ ಮಾಧ್ಯಮ ವೇದಿಕೆಗಳ ಮೂಲಕ ಖಾಸಗಿ ಮತ್ತು ಸಾರ್ವಜನಿಕ ಆಸ್ತಿಗಳಿಗೆ ಹಾನಿಯನ್ನುಂಟುಮಾಡುವ, ಹಿಂಸಾತ್ಮಕ ಚಟುವಟಿಕೆಗಳನ್ನು ಬಿಂಬಿಸುವ ವಿಡಿಯೋ ಮತ್ತು ಫೋಟೋಗಳ ಹರಡುವಿಕೆಯನ್ನು ರಾಜ್ಯ ಸರ್ಕಾರ ಅತ್ಯಂತ ಗಂಭೀರ ಮತ್ತು ಅತ್ಯಂತ ಸೂಕ್ಷ್ಮವಾಗಿ ಪರಿಗಣಿಸುತ್ತದೆ'' ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಮುಂದುವರೆದು, ''ಈ ವಿಷಯವನ್ನು ರಾಜ್ಯ ಸರ್ಕಾರವು ಕೂಲಂಕಷವಾಗಿ ಪರಿಶೀಲಿಸಿದೆ. ಆದ್ದರಿಂದ ರಾಜ್ಯವನ್ನು ಸಹಜ ಸ್ಥಿತಿಗೆ ತರುವ ಸಕಾರಾತ್ಮಕ ಹೆಜ್ಜೆಯಾಗಿ ಇಂತಹ ವಿಡಿಯೋ ಮತ್ತು ಚಿತ್ರಗಳನ್ನು ಹರಡುವ ಕ್ರಮವನ್ನು ತಡೆಯಲು ನಿರ್ಧರಿಸಿದೆ. ಅಂತಹ ವಿಡಿಯೋಗಳು ಅಥವಾ ಚಿತ್ರಗಳನ್ನು ಹೊಂದಿರುವವರು ಹತ್ತಿರದ ಪೊಲೀಸ್ ಅಧೀಕ್ಷಕರನ್ನು ಸಂಪರ್ಕಿಸಬಹುದು. ಸೂಕ್ತ ಕ್ರಮ ತೆಗೆದುಕೊಳ್ಳಲು ಮನವಿ ಸಲ್ಲಿಸಬಹುದು. ಈ ಆದೇಶವನ್ನು ಉಲ್ಲಂಘಿಸುವ ಯಾವುದೇ ವ್ಯಕ್ತಿ ವಿರುದ್ಧ ಕಾನೂನು ಮತ್ತು ತಂತ್ರಜ್ಞಾನದ ದುರ್ಬಳಕೆಯ ನಿಬಂಧನೆಗಳ ಅಡಿಯಲ್ಲಿ ದಾಖಲಿಸಲಾಗುತ್ತದೆ ಮತ್ತು ಕಾನೂನು ಕ್ರಮವನ್ನೂ ಜರುಗಿಸಲಾಗುತ್ತದೆ'' ಎಂದು ಗೃಹ ಇಲಾಖೆ ಎಚ್ಚರಿಸಿದೆ.

ಸೆಪ್ಟೆಂಬರ್‌ನಲ್ಲಿ ಇಂಫಾಲ್ ಕಣಿವೆಯಲ್ಲಿ ಕಾಣೆಯಾದ ಇಬ್ಬರು ಯುವಕರ ಶವಗಳ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದವು. ಇದರ ನಂತರ ಸಾಮೂಹಿಕ ಪ್ರತಿಭಟನೆಗಳು ಭುಗಿಲೆದ್ದಿದ್ದವು. ಈ ವೇಳೆ, ಪ್ರತಿಭಟನಾಕಾರರ ಮೇಲೆ ಭದ್ರತಾ ಪಡೆಗಳು ಮತ್ತು ಪೊಲೀಸರು ಬಲ ಪ್ರಯೋಗ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು. ಇದರಿಂದ 100ಕ್ಕೂ ಹೆಚ್ಚು ವಿದ್ಯಾರ್ಥಿಗಳು ಗಾಯಗೊಂಡಿದ್ದರು. ಈ ಘಟನೆಯ ಸ್ಥಳಕ್ಕೆ ಸಿಬಿಐ ಅಧಿಕಾರಿಗಳ ತಂಡವನ್ನು ಕೇಂದ್ರ ಸರ್ಕಾರ ರವಾನಿಸಿತ್ತು. ಆಗ ನಾಲ್ವರು ಆರೋಪಿಗಳನ್ನು ಕೇಂದ್ರ ತನಿಖಾ ಸಂಸ್ಥೆ ಬಂಧಿಸಿತ್ತು. ಹೆಚ್ಚಿನ ತನಿಖೆ ಮತ್ತು ಕಾನೂನು ಪ್ರಕ್ರಿಯೆಗಳಿಗಾಗಿ ಆ ನಾಲ್ವರನ್ನು ಗುವಾಹಟಿಗೆ ರವಾನಿಸಲಾಗಿದೆ.

ಇದನ್ನೂ ಓದಿ:ಮಣಿಪುರದಲ್ಲಿ ವ್ಯಕ್ತಿಯ ಜೀವಂತವಾಗಿ ದಹಿಸಿದ ವಿಡಿಯೋ ವೈರಲ್: ಘಟನೆ ಖಚಿತ ಪಡಿಸಿದ ರಾಜ್ಯ ಭದ್ರತಾ ಸಲಹೆಗಾರ

ABOUT THE AUTHOR

...view details