ಕರ್ನಾಟಕ

karnataka

ನಾಪತ್ತೆಯಾಗಿದ್ದ ಬಾಲಕ ಶವವಾಗಿ ಪತ್ತೆ: ಆ್ಯಸಿಡ್​ ಎರಚಿ, ನಾಲಿಗೆ ಕತ್ತರಿಸಿ, ಕಣ್ಣು - ಹಲ್ಲು ಕಿತ್ತಿದ್ದ ದುರುಳರು!

By

Published : Jul 14, 2023, 8:42 PM IST

Updated : Jul 14, 2023, 8:56 PM IST

ಜಾರ್ಖಂಡ್‌ನ ಗರ್ವಾ ಜಿಲ್ಲೆಯಲ್ಲಿ ಎರಡು ದಿನಗಳ ಹಿಂದೆ ನಾಪತ್ತೆಯಾಗಿದ್ದ ಬಾಲಕ ಶವವಾಗಿ ಪತ್ತೆಯಾಗಿದ್ದು, ದುಷ್ಕರ್ಮಿಗಳಿಂದ ಭೀಕರವಾಗಿ ಕೊಲೆಯಾಗಿದ್ದಾನೆ.

Jharkhand horror: Seven-year-old boy murdered in Garhwa; tongue chopped off, eyes gouged out, teeth pulled out
ನಾಪತ್ತೆಯಾಗಿದ್ದ ಬಾಲಕ ಶವವಾಗಿ ಪತ್ತೆ: ಆ್ಯಸಿಡ್​ ಎರಚಿ, ನಾಲಿಗೆ ಕತ್ತರಿಸಿ, ಕಣ್ಣುಗಳು, ಹಲ್ಲುಗಳ ಕಿತ್ತಿದ ದುರಳರು!

ಗರ್ವಾ (ಜಾರ್ಖಂಡ್‌):ಏಳು ವರ್ಷದ ಬಾಲಕನೋರ್ವನನ್ನು ಭೀಭತ್ಸವಾಗಿ ಕೊಲೆ ಮಾಡಿರುವ ಘಟನೆ ಜಾರ್ಖಂಡ್‌ನ ಗರ್ವಾ ಜಿಲ್ಲೆಯಲ್ಲಿ ನಡೆದಿದೆ. ಬಾಲಕನ ಮೇಲೆ ಆ್ಯಸಿಡ್​ ಎರಚಿ, ನಾಲಿಗೆ ಕತ್ತರಿಸಿ, ಎರಡು ಕಣ್ಣುಗಳ ಕಿತ್ತೆಸೆದು ಹಾಗೂ ಎಲ್ಲ ಹಲ್ಲುಗಳನ್ನು ಕಿತ್ತು ಭೀಕರವಾಗಿ ಹತ್ಯೆಗೈಯಲಾಗಿದೆ. ಅಲ್ಲದೇ, ಬಾಲಕನ ಮೃತದೇಹವನ್ನು ಆತನ ಚಿಕ್ಕಪ್ಪನ ಮನೆಯ ಬಳಿ ಗುಂಡಿಗೆ ಎಸೆದು ದುರುಳರು ಹೋಗಿದ್ದಾರೆ. ಈ ಘಟನೆಯಿಂದ ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ.

ಇಲ್ಲಿನ ದಂಡೈ ಪೊಲೀಸ್ ಠಾಣೆ ವ್ಯಾಪ್ತಿಯ ಬೌಲಿಯಾ ಗ್ರಾಮದಲ್ಲಿ ಈ ದುಷ್ಕೃತ್ಯ ವರದಿಯಾಗಿದೆ. ಬೌಲಿಯಾ ಗ್ರಾಮದ ಅವಧೇಶ್ ಸಾಹ್ ಎಂಬುವವರ ಮಗ ಎರಡು ದಿನಗಳಿಂದ ನಾಪತ್ತೆಯಾಗಿದ್ದ. ಹತ್ತಿರದ ಅಂಗಡಿಯಲ್ಲಿ ಸಿಹಿತಿಂಡಿ ಖರೀದಿಸಲು ಹೋಗಿದ್ದ ಬಾಲಕ ಮತ್ತೆ ಮನೆಗೆ ಹಿಂತಿರುಗಿರಲಿಲ್ಲ. ಇದರಿಂದ ಗಾಬರಿಗೊಂಡು ಮನೆಯವರು ಹಲವು ಕಡೆ ಹುಡುಕಾಡಿದರೂ ಪತ್ತೆಯಾಗಿರಲಿಲ್ಲ. ಇದಾದ ಬಳಿಕ ಬಾಲಕ ನಾಪತ್ತೆಯಾದ ಬಗ್ಗೆ ಪೊಲೀಸರಿಗೆ ಕುಟುಂಬಸ್ಥರು ಮಾಹಿತಿ ದೂರು ನೀಡಿದ್ದರು.

ಇದನ್ನೂ ಓದಿ:Gang rape: ಯುವತಿ ಮೇಲೆ ಗ್ಯಾಂಗ್ ರೇಪ್, ಕೊಲೆಗೈದು ಆ್ಯಸಿಡ್​ ಸುರಿದು ಬಾವಿಗೆ ಎಸೆದ ದುಷ್ಕರ್ಮಿಗಳು

ಗುರುವಾರ ಗ್ರಾಮದ ಕೆಲ ಮಕ್ಕಳು ಶಾಲೆಗೆ ಹೋಗುತ್ತಿದ್ದರು. ಈ ವೇಳೆ, ಅವಧೇಶ್ ಅವರ ಸಹೋದರ ಸುರೇಶ ಮನೆಯ ಹಿಂದೆ ಶೌಚಕ್ಕಾಗಿ ತೋಡಿದ ಗುಂಡಿಯ ನೀರಿನಲ್ಲಿ ಮೃತದೇಹ ಬಿದ್ದಿರುವುದು ಕಂಡು ಆ ಮಕ್ಕಳು ಮನೆಯವರಿಗೆ ಮಾಹಿತಿ ನೀಡಿದ್ದಾರೆ. ನಂತರ ಶವ ಹೊರತೆಗೆದಾಗ ಬಾಲಕನ ನಾಲಿಗೆಯನ್ನು ಕತ್ತರಿಸಿರುವುದು, ಎರಡು ಕಣ್ಣುಗಳು ಹಾಗೂ ಎಲ್ಲ ಹಲ್ಲುಗಳನ್ನು ಕಿತ್ತೆಸೆದಿರುವುದು ಪತ್ತೆಯಾಗಿದೆ. ಇಷ್ಟೊಂದು ಭೀಕರವಾಗಿ ಕೊಲೆ ಮಾಡಿದ ವಿಷಯವು ಇಡೀ ಪ್ರದೇಶದ ಜನರಲ್ಲಿ ಸಂಚಲನ ಮೂಡಿಸಿದೆ.

ಈ ಘಟನೆ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಶುಕ್ರವಾರ ಮರಣೋತ್ತರ ಪರೀಕ್ಷೆಯ ನಂತರ ಬಾಲಕನ ಮೃತದೇಹವನ್ನು ಕುಟುಂಬ ಸದಸ್ಯರಿಗೆ ಹಸ್ತಾಂತರಿಸಲಾಗಿದೆ. ಯಾವುದೋ ಕೌಟುಂಬಿಕ ದ್ವೇಷದಿಂದ ಈ ಕೊಲೆ ನಡೆದಿದೆಯೋ ಅಥವಾ ಮಾಟಮಂತ್ರದ ವಿಚಾರವಾಗಿ ಬಾಲಕನ ಹತ್ಯೆ ಮಾಡಲಾಗಿದೆಯೋ ಎಂಬ ಅನುಮಾನ ವ್ಯಕ್ತವಾಗಿದೆ. ಸದ್ಯ ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಲಾಗಿದೆ. ತನಿಖೆಯ ಭಾಗವಾಗಿ ಕುಟುಂಬ ಸದಸ್ಯರನ್ನು ವಿಚಾರಣೆಗೆ ಒಳಪಡಿಸಲಾಗಿದೆ ಎಂದು ದಂಡೈ ಪೊಲೀಸ್ ಠಾಣೆಯ ಪ್ರಭಾರಿ ತಿಳಿಸಿದ್ದಾರೆ.

ಕಳೆದ ಫೆಬ್ರವರಿಯಲ್ಲಿ ತೆಲಂಗಾಣದ ಹೈದರಾಬಾದ್​ನಲ್ಲೂ ಇದೇ ರೀತಿಯಾದ ಕೊಲೆ ನಡೆದಿತ್ತು. ತಾನು ಪ್ರೀತಿಸುತ್ತಿದ್ದ ಯುವತಿಗೆ ಆತ್ಮೀಯನಾಗಿದ್ದಾನೆ ಎಂಬ ಕೋಪದಿಂದ ಯುವಕನೊಬ್ಬ ತನ್ನ ಸ್ನೇಹಿತನನ್ನೇ ಕೊಲೆಗೈದಿದ್ದ. ಚಾಕುವಿನಿಂದ ರುಂಡ ಮತ್ತು ಮುಂಡವನ್ನು ಬೇರ್ಪಡಿಸಿ, ಹೃದಯ ಭಾಗವನ್ನು ಸೀಳಿ, ಮರ್ಮಾಂಗ ಕತ್ತರಿಸಿ ಭೀಕರವಾಗಿ ಆರೋಪಿ ಹತ್ಯೆ ಮಾಡಿದ್ದ. ಈ ಘಟನೆ ಸಹ ಸಾಕಷ್ಟು ಸಂಚಲನ ಮೂಡಿಸಿತ್ತು.

ಇದನ್ನೂ ಓದಿ:ತಾನು ಪ್ರೀತಿಸುತ್ತಿದ್ದ ಯುವತಿಗೆ ಕ್ಲೋಸ್​ ಆದ ಸ್ನೇಹಿತ: ಗೆಟ್‌ ಟುಗೆದರ್​ಗೆಂದು ಕರೆದು ಭೀಭತ್ಸವಾಗಿ ಕೊಂದ ಗೆಳೆಯ

Last Updated : Jul 14, 2023, 8:56 PM IST

ABOUT THE AUTHOR

...view details