ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿ, ಪಂಜಾಬ್, ಹರಿಯಾಣ ಮತ್ತು ಚಂಢೀಗಢದಲ್ಲಿ ದಟ್ಟ ಮಂಜು ಕವಿದ ವಾತಾವರಣ ಇದ್ದು, ಈ ಸಂಬಂಧ ಭಾರತೀಯ ಹವಾಮಾನ ಇಲಾಖೆ ರೆಡ್ ಆಲರ್ಟ್ ಘೋಷಣೆ ಮಾಡಿದೆ. ದೆಹಲಿಯಲ್ಲಿ ಮಂಜು ದಟ್ಟವಾಗಿದ್ದು, ಗೋಚರತೆ ಪ್ರಮಾಣ ತೀವ್ರ ಕಡಿಮೆ ಮಟ್ಟದಲ್ಲಿದೆ.
ಇದರಿಂದ ದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಹಲವು ವಿಮಾನಗಳ ಹಾರಾಟ ವಿಳಂಬವಾಗಿದೆ. ಅಲ್ಲದೇ 60 ದೇಶಿಯ, ಅಂತಾರಾಷ್ಟ್ರೀಯ ವಿಮಾನಗಳು ತಡವಾಗಿದ್ದು, ಕೆಲವು ರದ್ದಾಗಿದೆ. ಅಲ್ಲದೇ, ದೆಹಲಿಯಿಂದ ಸಂಚರಿಸಬೇಕಿದ್ದ ದೆಹಲಿಗೆ ಬರಬೇಕಿದ್ದ 11 ರೈಲುಗಳು ಕೂಡ ತಡವಾಗಿವಾಗಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.
ದೆಹಲಿಯಲ್ಲಿ ಶುಕ್ರವಾರ ಬೆಳಗ್ಗೆ ಕನಿಷ್ಠ ತಾಪಮಾನ 10.7 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಇದೇ ರೀತಿ ಮುಂದಿನ ನಾಲ್ಕು ಐದು ದಿನಗಳ ಕಾಲ ಕನಿಷ್ಠ ತಾಪಮಾನ ಮುಂದುವರೆಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಗುರುವಾರ ಐಎಂಡಿ ಬಿಡುಗಡೆ ಮಾಡಿದ ಇನ್ಸಾಟ್ (ಇಂಡಿಯನ್ ನ್ಯಾಷನಲ್ ಸ್ಯಾಟಲೈಟ್ ಸಿಸ್ಟಂ) ಚಿತ್ರದಲ್ಲಿ ಉತ್ತರ ಭಾರತದ ಪ್ರದೇಶಗಳು ದಟ್ಟ ಮಂಜಿನಿಂದ ಕೂಡಿರುವುದನ್ನು ಕಾಣಬಹುದಾಗಿದೆ. ಈ ಫೋಟೋವನ್ನು ಗುರುವಾರ ಭಾರತೀಯ ಕಾಲಮಾನ ಮಧ್ಯಾಹ್ನ 2.30ಕ್ಕೆ ಸೆರೆ ಹಿಡಿಯಲಾಗಿದೆ. ಚಿತ್ರದಲ್ಲಿ ಪಂಜಾಬ್, ಹರಿಯಾಣದಲ್ಲಿ ಮಂಜು ಮುಸುಕಿದ ವಾತಾವರಣ ಇತ್ತು. ರಾಜಸ್ಥಾನದ ಉತ್ತರದ ತುದಿ, ಉತ್ತರ ಪ್ರದೇಶ ಮತ್ತು ಮಧ್ಯಪ್ರದೇಶದ ಈಶಾನ್ಯದಲ್ಲೂ ಇದೇ ತರಹದ ವಾತಾವರಣವಿತ್ತು. ಮಂಜು ಕವಿದ ವಾತಾವರಣ ಬೆಳಗ್ಗೆ ಮತ್ತು ರಾತ್ರಿ ವೇಳೆ ಮುಂದುವರೆಯಲಿದೆ. ಮಧ್ಯಾಹ್ನದ ಸಮಯದಲ್ಲಿ ಶುಭ್ರ ಮೋಡ ಇರಲಿದೆ.
ಮುಂದಿನ ನಾಲ್ಕು ದಿನಗಳ ಕಾಲ ಹರಿಯಾಣ, ಪಂಜಾಬ್ನಲ್ಲಿ ದಟ್ಟ ಮಂಜು ಕವಿದ ವಾತಾವರಣ ಇರಲಿದೆ ಎಂದು ಐಎಂಡಿ ಎಚ್ಚರಿಕೆ ನೀಡಿದ್ದು, ಈ ಬಗ್ಗೆ ಎಕ್ಸ್ನಲ್ಲಿ ಪೋಸ್ಟ್ ಮಾಡಿದೆ. ಕಡಿಮೆ ಗೋಚರತೆ ಕಾರಣ ಉತ್ತರ ಪ್ರದೇಶದಲ್ಲಿ ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್ಗಳ ಕಾರ್ಯಾಚರಣೆಗೆ ಮಾರ್ಗಸೂಚಿ ಪ್ರಕಟಿಸಲಾಗಿದೆ.
ಮಂಜಿನ ವಾತಾವರಣವು ದೆಹಲಿಯಲ್ಲಿ ಜನರ ಆರೋಗ್ಯದ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಐಎಂಡಿ ಎಚ್ಚರಿಸಿದೆ. ಈ ನಡುವೆ ದೆಹಲಿಯ ಹವಾಮಾನ ಕೂಡ ಮತ್ತಷ್ಟು ಕುಸಿದಿದೆ. ಮಂಜು ಮುಸುಕಿದ ವಾತಾವರಣದಲ್ಲಿ ಸೂಕ್ಷ್ಮ ಕಣಗಳಿರುತ್ತದೆ. ಜೊತೆಗೆ ಇತರೆ ಮಾಲಿನ್ಯವೂ ಇರುತ್ತದೆ. ಇದು ಶ್ವಾಸಕೋಶ ಸೇರಿದಂತೆ ದೇಹದ ಮೇಲೆ ದುಷ್ಪರಿಣಾಮ ಬೀರಬಹುದಾಗಿದೆ. ಈ ಹಿನ್ನೆಲೆಯಲ್ಲಿ ಮುಂಜಾಗ್ರತೆ ವಹಿಸುವಂತೆ ಸೂಚನೆ ನೀಡಲಾಗಿದೆ.
ಇದನ್ನೂ ಓದಿ: ಅಯೋಧ್ಯೆ ಹೊಸ ವಿಮಾನ ನಿಲ್ದಾಣಕ್ಕೆ ಮಹರ್ಷಿ ವಾಲ್ಮೀಕಿ ಹೆಸರಿಡಲು ನಿರ್ಧಾರ