ಚೆನ್ನೈ(ತಮಿಳುನಾಡು): ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ದಿವಂಗತ ಜೆ. ಜಯಲಲಿತಾ ಅವರ ಪೋಯಸ್ ಗಾರ್ಡನ್ ನಿವಾಸವನ್ನು ಹಿಂದಿನ ಎಐಎಡಿಎಂಕೆ ಸರ್ಕಾರ ಸ್ವಾಧೀನಪಡಿಸಿಕೊಳ್ಳುವ ಆದೇಶವನ್ನು ಮದ್ರಾಸ್ ಹೈಕೋರ್ಟ್ ವಜಾಗೊಳಿಸಿದೆ.
ಈ ಹಿಂದೆ ತಮಿಳುನಾಡಿನಲ್ಲಿ ಆಡಳಿತ ನಡೆಸಿದ್ದ ಎಐಎಡಿಎಂಕೆ ಸರ್ಕಾರ ಈ ಮನೆಯನ್ನು ಸ್ಮಾರಕವನ್ನಾಗಿ ಪರಿವರ್ತನೆ ಮಾಡಿತ್ತು. ಇದನ್ನು ಪ್ರಶ್ನೆ ಮಾಡಿದ್ದ ವಾರಸುದಾರರಾದ ದೀಪಾ ಮತ್ತು ದೀಪಕ್ ಸವಾಲು ಹಾಕಿ ಅರ್ಜಿ ಸಲ್ಲಿಕೆ ಮಾಡಿದ್ದರು. ಇದರ ವಿಚಾರಣೆ ನಡೆಸಿರುವ ಮದ್ರಾಸ್ ಹೈಕೋರ್ಟ್ ಇದೀಗ ಜಯಲಲಿತಾ ಅವರ ಏಕೈಕ ಸಹೋದರ ಜಯಕುಮಾರ್ ಅವರ ಮಕ್ಕಳಾದ ದೀಪಾ ಮತ್ತು ದೀಪಕ್ ಅವರಿಗೆ ನಿವಾಸ ಹಸ್ತಾಂತರ ಮಾಡುವಂತೆ ನಿರ್ದೇಶನ ನೀಡಿದೆ.