ಚಂಡೀಗಢ: ಸಂಸತ್ತಿನ ಚಳಿಗಾಲದ ಅಧಿವೇಶನವನ್ನು ರದ್ದು ಪಡಿಸಿದ ಕೇಂದ್ರದ ನಡೆಯನ್ನು ಮಾಜಿ ಸಚಿವೆ ಹರ್ಸಿಮ್ರತ್ ಕೌರ್ ಬಾದಲ್ ಖಂಡಿಸಿದ್ದಾರೆ.
ಅಲ್ಲದೇ ಕೃಷಿ ಸಮುದಾಯದ ಆಶಯದಂತೆ ಹೊಸದಾಗಿ ಜಾರಿಗೊಳಿಸಿರುವ ಮೂರೂ ಕೃಷಿ ಕಾನೂನುಗಳನ್ನು ಹಿಂಪಡೆಯಲು ಕೇಂದ್ರ ಶೀಘ್ರದಲ್ಲೇ ವಿಶೇಷ ಏಕದಿನ ಅಧಿವೇಶನವನ್ನು ನಡೆಸಬೇಕೆಂದು ಅವರು ಒತ್ತಾಯಿಸಿದ್ದಾರೆ.
ಇದು ತಪ್ಪು ಎಂದು ಕೇಂದ್ರಕ್ಕೆ ತಿಳಿದಿದೆ. ಹಾಗೆಯೇ ನೂತನ ಕೃಷಿ ಕಾಯ್ದೆ ವಿರೋಧಿಸಿ ತಮ್ಮ ವಿರುದ್ಧ ಹೋರಾಡುತ್ತಿರುವ ರೈತರನ್ನು ಎದುರಿಸಲು ಸಾಧ್ಯವಿಲ್ಲ ಅನ್ನೋದು ಅವರಿಗೆ ಗೊತ್ತಿದೆ. ಹೀಗಾಗಿ ಕೋವಿಡ್ ನೆಪ ಹೇಳಿ ಕೇಂದ್ರ ಸರ್ಕಾರ ಸಂಸತ್ತಿನ ಚಳಿಗಾಲದ ಅಧಿವೇಶನವನ್ನು ರದ್ದುಗೊಳಿಸಿದೆ ಎಂದು ಆರೋಪಿಸಿದ್ದಾರೆ.
ಈ ಕ್ರಮವನ್ನು ಪ್ರಜಾಪ್ರಭುತ್ವದ ಕೊಲೆ ಎಂದು ಹೇಳಿದ ಬಾದಲ್, ಸಂಸದರಿಗೆ ರೈತರ ಪರ ಧ್ವನಿ ಎತ್ತುವ ಅವಕಾಶವನ್ನು ನಿರಾಕರಿಸಲಾಗಿದೆ ಎಂದು ದೂರಿದ್ದಾರೆ. ಚಳಿಯಲ್ಲಿ ಪ್ರತಿಭಟನಾನಿರತ ರೈತರು ಹೇಳಲಾಗದಷ್ಟು ಸಂಕಷ್ಟಗಳನ್ನು ಅನುಭವಿಸುತ್ತಿದ್ದಾರೆ. ಈ ಪರಿಸ್ಥಿತಿಯನ್ನು ಸರ್ಕಾರದ ಮುಂದಿಡಲು ಸಂಸದರು ಬಯಸಿದ್ದರು. ರೈತರು ತಿರಸ್ಕರಿಸಿದ ಮೂರು ಕೃಷಿ ಕಾನೂನುಗಳನ್ನು ರದ್ದುಗೊಳಿಸುವಂತೆ ಅವರು ಸರ್ಕಾರದ ಮೇಲೆ ಒತ್ತಡ ಹೇರಲು ಬಯಸಿದ್ದರು. ಆದರೆ ಕೇಂದ್ರ ಅಧಿವೇಶನವನ್ನೇ ರದ್ದುಗೊಳಿಸಿದೆ ಎಂದು ಅವರು ಆಕ್ರೋಶ ಹೊರಹಾಕಿದ್ದಾರೆ.
ಈ ಕಾನೂನುಗಳನ್ನು ರದ್ದುಗೊಳಿಸಲು ಒಂದು ದಿನದ ವಿಶೇಷ ಸಂಸತ್ತಿನ ಅಧಿವೇಶನಕ್ಕೆ ಕರೆಯುವಂತೆ ಸೂಚಿಸಿದ ಬಾದಲ್, ಇದರ ಅವಶ್ಯಕತೆ ಇದೆ ಎಂದು ಹೇಳಿದರು. ಸಾಕಷ್ಟು ಸುರಕ್ಷತಾ ಮುನ್ನೆಚ್ಚರಿಕೆಗಳನ್ನು ತೆಗೆದುಕೊಂಡು ಸರ್ಕಾರ ವಿಶೇಷ ಅಧಿವೇಶನ ಕರೆಯಬೇಕು, ಪುನಃ ನೆಪಗಳನ್ನು ಹೇಳಬಾರದು ಎಂದು ಆಗ್ರಹಿಸಿದ್ರು.
ಪ್ರಧಾನಿಗೆ ಶಾಸಕ ಸುಖ್ಪಾಲ್ ಸಿಂಗ್ ಖೈರಾ ಪತ್ರ: ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದಿರುವ ಪಂಜಾಬಿ ಏಕ್ತಾ ಪಕ್ಷದ ಮುಖಂಡ ಸುಖ್ಪಾಲ್ ಸಿಂಗ್ ಖೈರಾ, ಜನಾಭಿಪ್ರಾಯ ಸಂಗ್ರಹವು ರೈತ ಸಂಘಗಳು ಮತ್ತು ಸರ್ಕಾರದ ನಡುವಿನ ಪ್ರಸ್ತುತ ಸಮಸ್ಯೆಗೆ ಏಕೈಕ'' ತಾರ್ಕಿಕ ಮತ್ತು ಪ್ರಜಾಪ್ರಭುತ್ವದ ಶಾಂತಿಯುತ ಪರಿಹಾರ" ಎಂದು ತೋರುತ್ತದೆ.
ಕೃಷಿ ಕಾನೂನುಗಳ ಬಗ್ಗೆ ಹರಿಯಾಣ, ಪಂಜಾಬ್ನಲ್ಲಿ ಸಾರ್ವಜನಿಕರ ಭಾವನೆಗಳನ್ನು ಕೇಂದ್ರ ಸರ್ಕಾರ ಕಡೆಗಣಿಸಿದೆ ಎಂದು ಶಾಸಕ ಸುಖ್ಪಾಲ್ ಸಿಂಗ್ ಖೈರಾ ಪತ್ರದಲ್ಲಿ ಆರೋಪಿಸಿದ್ದಾರೆ. ಕೇಂದ್ರ ಸರ್ಕಾರವು ಕೃಷಿ ಕಾನೂನುಗಳ ಬಗ್ಗೆ ಪಂಜಾಬ್, ಹರಿಯಾಣದಲ್ಲಿ ಸಾರ್ವಜನಿಕರ ಆಕ್ರೋಶ ಮತ್ತು ಅವರ ಭಾವನೆಗಳನ್ನು ಕಡೆಗಣಿಸುತ್ತಿರುವುದರಿಂದ ಜನಾಭಿಪ್ರಾಯ ಸಂಗ್ರಹಿಸುವಂತೆ ಸೂಚಿಸುತ್ತಿದ್ದೇನೆ ಎಂದು ಅವರು ಉಲ್ಲೇಖಿಸಿದ್ದಾರೆ. ಹಾಗೆಯೇ ಸೆಪ್ಟೆಂಬರ್ನಲ್ಲಿ ರೈತ ಸಂಘಗಳು ಪಂಜಾಬ್ನಲ್ಲಿ ಪ್ರತಿಭಟನೆ ಆರಂಭಿಸಿದಾಗ, ರೈತರ ನ್ಯಾಯಸಮ್ಮತ ಬೇಡಿಕೆಗಳನ್ನು ಕೇಂದ್ರ ಈಡೇರಿಸಬೇಕಾಗಿತ್ತು ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ:ದೆಹಲಿ ಗ್ಯಾಂಗ್ ರೇಪ್ ಪ್ರಕರಣಕ್ಕೆ 8 ವರ್ಷ: ಇಡೀ ದೇಶಕ್ಕೆ ಇಂದು 'ಕರಾಳ ದಿನ' ಎಂದ ನಿರ್ಭಯಾ ತಾಯಿ