ಕರ್ನಾಟಕ

karnataka

ETV Bharat / bharat

ಗಡಿ ಮೀರಿದ ಪ್ರೀತಿಗೆ ದೇಶ-ಭಾಷೆಯ ಹಂಗಿಲ್ಲ: ಕಿವಿ ಕೇಳದ, ಮಾತು ಬಾರದ ಒಡಿಶಾ ಯುವಕನ ಮದುವೆಯಾದ ಜರ್ಮನಿ ಯುವತಿ!

ನಿಷ್ಕಲ್ಮಶ ಪ್ರೀತಿ ಎಲ್ಲಿ, ಯಾವಾಗ, ಯಾರಲ್ಲಿ ಮತ್ತು ಹೇಗೆ ಹುಟ್ಟುತ್ತದೆ ಎನ್ನುವುದಕ್ಕೆ ಉತ್ತರವಿಲ್ಲ. ಇದಕ್ಕೊಂದು ಹೊಸ ನಿದರ್ಶನ ಇಲ್ಲಿದೆ.

By ETV Bharat Karnataka Team

Published : Sep 26, 2023, 12:12 PM IST

German professor marries odisha man for his simplicity
German professor marries odisha man for his simplicity

ಪ್ರೀತಿ ಎಂಬುದು ಗಡಿ, ಭಾಷೆ ಮೀರಿದ್ದೆಂಬುದು ಹಲವು ಸಂದರ್ಭದಲ್ಲಿ ಸಾಬೀತಾಗಿದೆ. ಇದೀಗ ಒಡಿಶಾದಲ್ಲಿ ಅಂಥದ್ದೇ ಒಂದು ವಿಭಿನ್ನ ಪ್ರೇಮ ಸಂಬಂಧದ ಘಟನೆ ರಾಜ್ಯದ ಜನ ಬೆರಗಾಗುವಂತೆ ಮಾಡಿದೆ. ಕಿವಿ ಕೇಳದ, ಮಾತು ಬಾರದ ಒಡಿಶಾ ಯುವಕನ ಪ್ರೇಮಕ್ಕೆ ಜರ್ಮನಿ ಯುವತಿ ಮನಸೋತು ಸಪ್ತಪದಿ ತುಳಿದಿದ್ದಾರೆ!. ಈ ಪ್ರೇಮ ಕಥೆಯ ಮತ್ತೊಂದು ವಿಶೇಷವೇನು ಗೊತ್ತೇ? ಇದು ಆನ್​ಲೈನ್​ ಅಥವಾ ಯಾವುದೇ ಸಾಮಾಜಿಕ ಜಾಲತಾಣದಲ್ಲಿ ಹುಟ್ಟಿದ ಪ್ರೀತಿಯಲ್ಲ.

ಜರ್ಮನಿಯಲ್ಲಿ ಹುಟ್ಟಿ ಬೆಳೆದ ಉಲ್ರಿಕ್​ ಎಂಬ ಯುವತಿ​, ಸಂಕೇತ ಭಾಷೆ (Sign language) ಪ್ರೊಫೆಸರ್​ ಆಗಿ ಇಂಗ್ಲೆಡ್​ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದೀಗ ಇವರು ಒಡಿಶಾದ ಸೊಸೆಯಾಗಿದ್ದಾರೆ.

ಪ್ರೇಮ ಹುಟ್ಟಿದ ಪರಿ:ಇಂಗ್ಲೆಂಡ್​ನ ಯುನಿವರ್ಸಿಟಿಯೊಂದರಲ್ಲಿ ಸಂಕೇತ ಭಾಷೆಯ ಪ್ರೊಫೆಸರ್​ ಆಗಿ ಉಲ್ರಿಕ್​ ಕೆಲಸ ಮಾಡುತ್ತಿದ್ದರು. ಇದೇ ವಿವಿಯಲ್ಲಿ ಒಡಿಶಾದ ಸುಬರ್ನಪುರ್​ ಜಿಲ್ಲೆಯ ಸಿಂಧೂರ್​ಪುರ್​​ ಗ್ರಾಮದ ಕಿವಿ ಕೇಳದ ಮತ್ತು ಮಾತು ಬಾರದ ಶಿವಾಜಿ ಪಾಂಡಾ ಎಂಬವರೂ ಪ್ರೊಫೆಸರ್​ ಆಗಿ ಕೆಲಸ ಮಾಡುತ್ತಿದ್ದರು. ಒಟ್ಟಿಗೆ, ಒಂದೇ ಸ್ಥಳದಲ್ಲಿ ಕೆಲಸ ನಿರ್ವಹಿಸುತ್ತಿದ್ದ ಶಿವಾಜಿ ಮತ್ತು ಉಲ್ರಿಕ್​​ ಪರಸ್ಪರ ಆತ್ಮೀಯರಾದರು. ಈ ವೇಳೆ ಆಕೆ ಶಿವಾಜಿಯ ಸರಳತೆಯನ್ನು ಮೆಚ್ಚಿದ್ದಾರೆ. ತಾನು ಮೆಚ್ಚಿದ ಮಹಿಳೆಯನ್ನು ಬಾಳಸಂಗಾತಿಯನ್ನಾಗಿ ವರಿಸಿ ಭಾರತದಲ್ಲೇ ವಾಸ್ತವ್ಯ ಹೂಡಲು ಶಿವಾಜಿ ತಮ್ಮ ಕೆಲಸಕ್ಕೆ ರಾಜೀನಾಮೆ ನೀಡಿದ್ದಾರೆ.

ಶಿವಾಜಿ ತಮ್ಮೂರಿನಲ್ಲಿಯೇ ಪರಿಸರ ಗ್ರಾಮ ಕಟ್ಟಿ, ತನ್ನಂತೆಯೇ ಇರುವ ಮಕ್ಕಳಿಗೆ ಆಸರೆಯಾಗುವ ಉದ್ದೇಶದಿಂದ ಸಂಕೇತ ಭಾಷಾ ಶಾಲೆ ತೆರೆದರು. ಇದಾದ ಕೆಲವು ದಿನಗಳಲ್ಲಿ ಸ್ನೇಹಿತನ ಭೇಟಿಗಾಗಿ ಉಲ್ರಿಕ್​​ ಒಡಿಶಾದ ಗ್ರಾಮಕ್ಕೆ ಆಗಮಿಸಿದ್ದು, ಶಿವಾಜಿ ಜೀವನ ಶೈಲಿಯನ್ನು ಮೆಚ್ಚಿ ಮದುವೆಯಾಗಲು ನಿರ್ಧರಿಸಿದರು. ಶಿವಾಜಿ ಕೂಡ ಇದಕ್ಕೆ ಸಮ್ಮತಿಸಿದ್ದಾರೆ.

ಒಡಿಶಾ ಸಂಪ್ರದಾಯದಂತೆ ಮದುವೆ: ಲಂಡನ್​ನಲ್ಲಿ ಕುಟುಂಬ ಮತ್ತು ಸ್ನೇಹಿತರ ಸಮ್ಮುಖದಲ್ಲಿ ಇಬ್ಬರೂ ಕೋರ್ಟ್​ ಮ್ಯಾರೇಜ್​ ಆಗಿದ್ದಾರೆ. ಇದಾದ ಬಳಿಕ ಒಡಿಶಾದಲ್ಲಿ ಒಡಿಯಾ ಸಂಪ್ರದಾಯದಂತೆ ಮತ್ತೆ ಮದುವೆಯಾದರು. ಪ್ರಸಿದ್ಧ ಸಂಬಲ್ಪುರಿ ಸೀರೆ ಧರಿಸಿ, ಬಳೆ, ಮೆಹಂದಿ ತೊಟ್ಟು ಭಾರತೀಯಳಂತೆ ಕಂಗೊಳಿಸಿದ್ದಾರೆ.

ಮದುವೆ ಕುರಿತು ಮಾತನಾಡಿರುವ ಉಲ್ರಿಕಾ, "ನಾನೀಗ ಒಡಿಶಾ ಸೊಸೆ. ನಾನು ಇಲ್ಲಿಯೇ ವಾಸವಾಗಿರುತ್ತೇನೆ. ಒಡಿಶಾ ಮತ್ತು ಇಲ್ಲಿಯ ಹಳ್ಳಿ ಜೀವನ ನನ್ನನ್ನು ಆಕರ್ಷಿಸಿತು. ಇಲ್ಲಿನ ಸುಂದರ ಪ್ರಕೃತಿ, ಮಹಾನದಿಗೆ ನಾನು ಮನಸೋತಿದ್ದೇನೆ. ಹಸುಗಳನ್ನು ನೋಡಿದರೆ, ನನ್ನದೇ ಎಂದು ಭಾಸವಾಗುತ್ತದೆ" ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

ಶಿವಾಜಿ ಮಾತನಾಡಿ, "ಉಲ್ರಿಕ್​ನಂತಹ ಜೀವನ ಸಂಗಾತಿ ಸಿಕ್ಕಿರುವುದು ನನಗೆ ಖುಷಿ ತಂದಿದೆ. ಇದಕ್ಕಿಂತ ಹೆಚ್ಚಿನದು ನನಗೇನೂ ಬೇಡ" ಎಂದು ಭಾವುಕರಾದರು. (ಐಎಎನ್​ಎಸ್​)

ಇದನ್ನೂ ಓದಿ: ಬೆಂಗಳೂರು: ಮಹಿಳಾ ಟೆಕ್ಕಿಯಿಂದ 'ಲವ್ ಜಿಹಾದ್' ದೂರು; ಕಾಶ್ಮೀರಕ್ಕೆ ತೆರಳಿದ ಪೊಲೀಸರು

ABOUT THE AUTHOR

...view details