ಕೋಲ್ಕತ್ತಾ : ಪಶ್ಚಿಮ ಬಂಗಾಳದ ಮಾಜಿ ಸಿಎಂ ಬುದ್ಧದೇವ್ ಭಟ್ಟಾಚಾರ್ಯ ಅವರ ಪುತ್ರಿ ಶಸ್ತ್ರಚಿಕಿತ್ಸೆ ಮೂಲಕ ಲಿಂಗ ಪರಿವರ್ತನೆ ಮಾಡಿಕೊಳ್ಳಲು ನಿರ್ಧರಿಸಿದ್ದಾರೆ. ಈ ಮೂಲಕ ಸುಚೇತನ್ ಆಗಿ ಪರಿವರ್ತನೆ ಹೊಂದುವುದಾಗಿ ಮಾಜಿ ಸಿಎಂ ಭಟ್ಟಾಚಾರ್ಯ ಪುತ್ರಿ ಸುಚೇತನಾ ಭಟ್ಟಚಾರ್ಯ ಘೋಷಣೆ ಮಾಡಿದ್ದಾರೆ.
ಇತ್ತೀಚೆಗೆ LGBTQ ಸಮುದಾಯದ ಜೀವನೋಪಾಯದ ಕುರಿತ ವಿಚಾರ ಸಂಕಿರಣದಲ್ಲಿ ಭಾಗವಹಿಸಿದ್ದ ಅವರು, ನಾನು ಪುರುಷ ಎಂದು ಗುರುತಿಸಿಕೊಂಡಿದ್ದೇನೆ, ದೈಹಿಕವಾಗಿಯೂ ಪುರುಷನಾಗಲು ಇಚ್ಛಿಸುತ್ತೇನೆ ಎಂದು ತಿಳಿಸಿದ್ದಾರೆ. ಸುಚೇತನಾ ಅವರು ಲಿಂಗ ಪರಿವರ್ತನೆಗೆ ಬೇಕಾದ ಎಲ್ಲ ರೀತಿಯ ಕಾನೂನು ಸಲಹೆಗಳನ್ನು ಪಡೆದುಕೊಂಡಿದ್ದಾರೆ. ಇದಕ್ಕೆ ಬೇಕಾದ ಪ್ರಮಾಣ ಪತ್ರಗಳಿಗಾಗಿ ಮನೋವೈದ್ಯರನ್ನು ಸಂಪರ್ಕಿಸಿರುವುದಾಗಿಯೂ ತಿಳಿದುಬಂದಿದೆ.
ಈ ಬಗ್ಗೆ LGBTQ ಕಾರ್ಯಕರ್ತೆ ಸುಪ್ರವಾ ರಾಯ್ ಅವರು ಮೊದಲು ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಅವರು ತಮ್ಮ ಪೋಸ್ಟ್ನಲ್ಲಿ ಸುಚೇತನಾ ತನ್ನನ್ನು ತಾನು "ಟ್ರಾನ್ಸ್ಮ್ಯಾನ್" ಎಂದು ಘೋಷಿಸಿಕೊಂಡಿದ್ದಾರೆ. ಇನ್ನು ಲಿಂಗ ಪರಿವರ್ತನೆ ಶಸ್ತ್ರಚಿಕಿತ್ಸೆಯ ನಂತರ ಅವಳು 'ಸುಚೇತನ್' ಎಂದು ಕರೆಯಲ್ಪಡುತ್ತಾಳೆ ಎಂದು ತಿಳಿಸಿದ್ದರು.
ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಸುಚೇತನಾ, “ನನ್ನ ಪೋಷಕ ಗುರುತು (identity) ಅಥವಾ ಕುಟುಂಬದ ಗುರುತು ನನಗೆ ದೊಡ್ಡ ವಿಷಯವಲ್ಲ. ನಾನು ನನ್ನ LGBTQ ಚಳುವಳಿಯ ಭಾಗವಾಗಿ ಲಿಂಗ ಪರಿವರ್ತನೆ ಮಾಡಿಕೊಳ್ಳುತ್ತಿದ್ದೇನೆ. ಟ್ರಾನ್ಸ್-ಮ್ಯಾನ್ ಆಗಿ ನಾನು ಪ್ರತಿದಿನ ಎದುರಿಸುತ್ತಿರುವ ಸಾಮಾಜಿಕ ಕಿರುಕುಳವನ್ನು ತಡೆಯಲು ಬಯಸುತ್ತೇನೆ" ಎಂದು ಹೇಳಿದ್ದಾರೆ.