ಅಹಮದಾಬಾದ್:ದೆಹಲಿಯಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಅಗಾಧ ಬದಲಾವಣೆ, ಕ್ರಾಂತಿಗೆ ಕಾರಣರಾದ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರಿಗೆ ಭಾರತ ರತ್ನ ಕೊಡಬೇಕಿತ್ತು. ಆದರೆ, ಬಿಜೆಪಿ ಇವರ ವಿರುದ್ಧ ಪಿತೂರಿ ಮಾಡಿ ವಿನಾಕಾರಣ ದ್ವೇಷ ಸಾಧಿಸುತ್ತಿದೆ ಎಂದು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ತಮ್ಮ ಬಂಟನ ಬೆಂಬಲಕ್ಕೆ ನಿಂತಿದ್ದಾರೆ.
ಸಿಸೋಡಿಯಾ ವಿರುದ್ಧ ಸಿಬಿಐ ವಿಚಾರಣೆ ನಡೆಸುತ್ತಿರುವ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ ಮಾಧ್ಯಮಗಳಿಗೆ ಹೇಳಿಕೆ ನೀಡಿರುವ ದೆಹಲಿ ಸಿಎಂ, ದೆಹಲಿ ಶಾಲಾ ಕಾಲೇಜುಗಳಲ್ಲಾದ ಸುಧಾರಣೆ ಬಗ್ಗೆ ವಿದೇಶಿ ಸುದ್ದಿ ಮಾಧ್ಯಮ ವರದಿ ಮಾಡಿ ಶ್ಲಾಘಿಸಿದೆ. ಇದನ್ನು ನಮ್ಮವರೇ ಗುರುತಿಸಿಲ್ಲ. ಸಿಸೋಡಿಯಾ ಶಿಕ್ಷಣದ ಸುಧಾರಣೆಗಾಗಿ ಭಾರತ ರತ್ನ ಪಡೆಯಲು ಅರ್ಹರಿದ್ದಾರೆ ಎಂದು ಹೊಗಳಿದ್ದಾರೆ.
ಗುಜರಾತ್ ಚುನಾವಣೆ ಸಮೀಪಿಸುತ್ತಿರುವ ಕಾರಣ ಕೇಂದ್ರ ಸರ್ಕಾರ ನಮ್ಮನ್ನು ಕಟ್ಟಿಹಾಕಲು ಈ ರೀತಿ ಸಂಚು ರೂಪಿಸುತ್ತಿದೆ. ಉತ್ತಮ ಕೆಲಸ ಮಾಡುತ್ತಿರುವ ಮನೀಶ್ ಸಿಸೋಡಿಯಾ ಅವರನ್ನು ಶ್ಲಾಘಿಸುವ ಬದಲು ಗುರಿಯಾಗಿಸಿ ದಾಳಿ ಮಾಡಲಾಗುತ್ತಿದೆ. ಶೀಘ್ರವೇ ಅವರನ್ನು ಬಂಧಿಸಬಹುದು. ಮುಂದೆ ನನ್ನನ್ನು ಬಂಧಿಸುವ ಸಾಧ್ಯತೆ ಇದೆ ಎಂದು ಕೇಜ್ರಿವಾಲ್ ಹೇಳಿದರು. ಕಳೆದ 27 ವರ್ಷಗಳ ಬಿಜೆಪಿಯ ದುರಾಡಳಿತದಿಂದ ಅಲ್ಲಿನ ಜನರು ಬೇಸತ್ತಿದ್ದಾರೆ. ಆಮ್ ಆದ್ಮಿ ಪಕ್ಷದ ಸರ್ಕಾರ ಅಧಿಕಾರಕ್ಕೆ ಬಂದರೆ ಅಲ್ಲಿನ ಜನತೆಗೆ ಗುಣಮಟ್ಟದ ಶಿಕ್ಷಣ ಮತ್ತು ಆರೋಗ್ಯದ ಭರವಸೆ ನೀಡಿದರು.
ಕೇಜ್ರಿವಾಲ್ ಭಾರತ ರತ್ನ ಹೇಳಿಕೆಗೆ ಬಿಜೆಪಿ ಲೇವಡಿ:ಮನೀಶ್ ಸಿಸೋಡಿಯಾಗೆ ಭಾರತ ರತ್ನ ನೀಡಬೇಕು ಎಂಬ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರ ಹೇಳಿಕೆಯನ್ನು ಬಿಜೆಪಿ ಲೇವಡಿ ಮಾಡಿದೆ. ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್, ಮನೀಶ್ "ಸಿಸೋಡಿಯಾಗೆ ಭಾರತ ರತ್ನ, ಸಚಿವ ಸತ್ಯೇಂದ್ರ ಜೈನ್ಗೆ ಪದ್ಮವಿಭೂಷಣ, ಸ್ವತಃ ಅರವಿಂದ್ ಕೇಜ್ರಿವಾಲ್ ಅವರಿಗೆ ಮುಂದಿನ ನೊಬೆಲ್ ಪಾರಿತೋಷಕ ನೀಡಬೇಕು" ಎಂದು ವ್ಯಂಗ್ಯವಾಗಿ ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ:ರಾಹುಲ್ ಗಾಂಧಿ ಪಕ್ಷದ ಅಧ್ಯಕ್ಷರಾಗಬೇಕು, ಇಲ್ಲದಿದ್ದರೆ ದೇಶಾದ್ಯಂತ ಕಾರ್ಯಕರ್ತರಿಗೆ ನಿರಾಶೆ: ಸಿಎಂ ಗೆಹ್ಲೋಟ್