ಪಾಟ್ನಾ: ಅರುಣಾಚಲ ಪ್ರದೇಶದ ಏಳು ಜೆಡಿಯು ಶಾಸಕರು ಬಿಜೆಪಿಗೆ ಸೇರಿದ ಬಳಿಕ ಬಿಹಾರದಲ್ಲಿ ಬಿಜೆಪಿ - ಜೆಡಿಯು ಸಂಬಂಧ ಹಳಸಿರುವ ಲಕ್ಷಣಗಳು ಕಂಡು ಬರುತ್ತಿದ್ದು, ಇದನ್ನು ಪುಷ್ಠೀಕರಿಸುವಂತೆ ಜೆಡಿಯು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೆ.ಸಿ ತ್ಯಾಗಿ ಬಿಜೆಪಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಬಿಹಾರ ವಿಧಾನಸಭಾ ಚುನಾವಣೆಯ ಪೂರ್ವದಲ್ಲಿ ಮೈತ್ರಿ ಮಾಡಿಕೊಂಡಿದ್ದ ಜೆಡಿಯು ಮತ್ತು ಬಿಜೆಪಿ ಪಕ್ಷಗಳು ಗೆದ್ದು ಸರ್ಕಾರ ರಚಿಸಿತ್ತು. ಚುನಾವಣೆಯಲ್ಲಿ ರಾಜ್ಯದ ಬಲಿಷ್ಠ ಪಕ್ಷ ಜೆಡಿಯು ಕಳೆದ ಬಾರಿಗಿಂತ ಕಡಿಮೆ ಸ್ಥಾನಗಳನ್ನು ಗೆದ್ದಿತ್ತು. ಇದಕ್ಕೆ ಒಂದು ರೀತಿಯಲ್ಲಿ ಬಿಜೆಪಿಯೇ ಕಾರಣ ಎಂದು ಹೇಳಲಾಗ್ತಿತ್ತು. ಚುನಾವಣೆ ಬಳಿಕ ಕಡಿಮೆ ಸ್ಥಾನ ಪಡೆದರೂ ಜೆಡಿಯು ಮುಖ್ಯಸ್ಥ ನಿತೀಶ್ ಕುಮಾರ್ ಅವರಿಗೆ ಬಿಜೆಪಿ ಸಿಎಂ ಸ್ಥಾನ ನೀಡಿತ್ತು. ಆದರೆ, ಈಗ ಬಿಜೆಪಿ ಜೆಡಿಯು ಮೇಲೆ ಸವಾರಿ ಮಾಡುತ್ತಿದ್ದು, ದೊಡ್ಡಣ್ಣನಂತೆ ವರ್ತಿಸುತ್ತಿದೆ ಎಂಬುವುದು ಜೆಡಿಯು ನಾಯಕರ ಅಸಮಾಧಾನಕ್ಕೆ ಕಾರಣವಾಗಿದೆ.