ಲಖನೌ(ಉತ್ತರ ಪ್ರದೇಶ): ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಗೂ ಮುನ್ನ ಚಿಕ್ಕಪ್ಪ ಶಿವಪಾಲ್ ಯಾದವ್ ಜೊತೆ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಮೈತ್ರಿ ಮಾಡಿಕೊಂಡಿದ್ದರು. ಆದರೆ, ಇದೀಗ ಆ ಮೈತ್ರಿ ಬಹುತೇಕ ಮುರಿದು ಬಿದ್ದಿದ್ದು, ಅಖಿಲೇಶ್ ಯಾದವ್ ವಿರುದ್ಧ ಟ್ವಿಟರ್ನಲ್ಲಿ ನೇರವಾಗಿ ದಾಳಿ ನಡೆಸಿದ್ದಾರೆ. ಸ್ವಾಭಿಮಾನದ ವಿಚಾರದಲ್ಲಿ ಆತನಿಗೋಸ್ಕರ ಆತ್ಮಗೌರವ ಬಿಟ್ಟು ರಾಜಿ ಮಾಡಿಕೊಂಡರೂ, ಅದಕ್ಕೆ ಪ್ರತಿಯಾಗಿ ನೋವು ಅನುಭವಿಸಿದ್ದೇನೆ ಎಂದು ಅವರು ಟ್ವೀಟ್ ಮಾಡಿದ್ದಾರೆ. ಪಕ್ಷದ ಮರುಸಂಘಟನೆಯ ವಿಶ್ವಾಸವಿದ್ದು, ಇದಕ್ಕಾಗಿ ನಾನು ಎಲ್ಲರ ಸಹಕಾರ ಆಶಿಸುತ್ತ ಈದ್ ಮುಬಾರಕ್ ಹೇಳುತ್ತಿರುವೆ ಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ:ರಾಜಸ್ಥಾನದಲ್ಲಿ ಕಲ್ಲು ತೂರಾಟ... ಇದೊಂದು ಪೂರ್ವಭಾವಿ ಯೋಜನೆ ಎಂದ ಕೇಂದ್ರ ಸಚಿವ
ಅಖಿಲೇಶ್ ಯಾದವ್ ಅವರ ಹೆಸರು ಉಲ್ಲೇಖ ಮಾಡದೇ ಟ್ವೀಟ್ ಮಾಡಿರುವ ಶಿವಪಾಲ್ ಯಾದವ್, 'ಆತನನ್ನು ತೃಪ್ತಿ ಪಡಿಸಲು ನನ್ನಲ್ಲಿರುವ ಆತ್ಮಗೌರವ ಕೆಳಗಿಟ್ಟು ಅತ್ಯಂತ ಕೆಳಮಟ್ಟಕ್ಕೆ ಇಳಿದೆ. ನಾನು ಆತನ ಮೇಲೆ ಇಷ್ಟೊಂದು ಕೋಪ ಗೊಂಡಿದ್ದೇನೆ ಎಂದರೆ, ಆತ ನನಗೆ ಎಷ್ಟೊಂದು ನೋವು ನೀಡಿದ್ದಾನೆ ಎಂಬುದನ್ನು ನೀವೂ ತಿಳಿದುಕೊಳ್ಳಿ. ನಾನು ಆತನಿಗೆ ನಡೆಯಲು ಕಲಿಸಿದ್ದೆ, ಆದರೆ ಆತ ನನ್ನನ್ನು ತುಳಿಯುತ್ತಿದ್ದಾನೆ. ನನ್ನನ್ನು ಆತ ಇಷ್ಟೊಂದು ನೋಯಿಸಿದ್ದಾನೆ ಎಂದು ನೀವು ಇದೀಗ ಅರ್ಥಮಾಡಿಕೊಳ್ಳಬಹುದು' ಎಂದಿದ್ದಾರೆ.
2017ರ ವಿಧಾನಸಭೆ ಚುನಾವಣೆಗೂ ಮುಂಚಿತವಾಗಿ ಬೇರೆ ಬೇರೆಯಾಗಿದ್ದ ಶಿವಪಾಲ್ ಯಾದವ್ ಹಾಗೂ ಅಖಿಲೇಶ್ ಇತ್ತೀಚಿನ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಗೂ ಮುಂಚೆ ಮೈತ್ರಿ ಮಾಡಿಕೊಂಡಿದ್ದರು. ಒಟ್ಟಿಗೆ ಚುನಾವಣೆಗೆ ಸ್ಪರ್ಧೆ ಸಹ ಮಾಡಿದ್ದರು. ಆದರೆ, ಮೈತ್ರಿಯಲ್ಲಿ ಇದೀಗ ಬಿರುಕು ಉಂಟಾಗಿದೆ. ಇದರ ಜೊತೆಗೆ ಶಿವಪಾಲ್ ಕಳೆದ ಕೆಲ ದಿನಗಳ ಹಿಂದೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನ ಭೇಟಿ ಮಾಡಿದ್ದು, ಪಕ್ಷದಲ್ಲಿ ಮತ್ತಷ್ಟು ಗೊಂದಲಕ್ಕೆ ಕಾರಣವಾಗಿದೆ.