ನವದೆಹಲಿ: ಮರಾಠ ಸಾಮ್ರಾಜ್ಯದ ಸಂಸ್ಥಾಪಕ ಛತ್ರಪತಿ ಶಿವಾಜಿ ಅವರ ಜನ್ಮದಿನದಂದು ಭಾನುವಾರ ಅವರಿಗೆ ಗೌರವ ಸಲ್ಲಿಸಿದ ಪ್ರಧಾನಿ ನರೇಂದ್ರ ಮೋದಿ, ಶಿವಾಜಿ ಮಹಾರಾಜರ ಧೈರ್ಯ ಮತ್ತು ಅವರ ಉತ್ತಮ ಆಡಳಿತವು ನಮಗೆಲ್ಲ ಸ್ಫೂರ್ತಿ ನೀಡುತ್ತದೆ ಎಂದು ಹೇಳಿದ್ದಾರೆ. 1630 ರಲ್ಲಿ ಜನಿಸಿದ ಶಿವಾಜಿ ತಮ್ಮ ಶೌರ್ಯ, ಹೋರಾಟದ ಕೆಚ್ಚು ಮತ್ತು ಗಟ್ಟಿ ನಾಯಕತ್ವಕ್ಕಾಗಿ ಗುರುತಿಸಲ್ಪಟ್ಟಿದ್ದಾರೆ.
ನಾನು ಛತ್ರಪತಿ ಶಿವಾಜಿ ಮಹಾರಾಜರ ಜಯಂತಿಯಂದು ಅವರಿಗೆ ಗೌರವ ಸಲ್ಲಿಸುತ್ತೇನೆ. ಅವರ ಧೈರ್ಯ ಮತ್ತು ಉತ್ತಮ ಆಡಳಿತದ ಮಾದರಿ ನಮಗೆ ಸ್ಫೂರ್ತಿ ನೀಡುತ್ತದೆ ಎಂದು ಮೋದಿ ಟ್ವೀಟ್ನಲ್ಲಿ ತಿಳಿಸಿದ್ದಾರೆ. ಶಿವಾಜಿ ಮಹಾರಾಜರಿಗೆ ನಮನ ಸಲ್ಲಿಸಿ ಮರಾಠಿಯಲ್ಲಿ ಕೂಡ ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ. ಕಳೆದ ಹಲವಾರು ವರ್ಷಗಳಿಂದ ತಾವು ಶಿವಾಜಿ ಮಹಾರಾಜರಿಗೆ ಗೌರವ ಸಲ್ಲಿಸಿದ ಸಂದೇಶಗಳನ್ನು ಮಿಕ್ಸಿಂಗ್ ಮಾಡಲಾದ ಆಡಿಯೋ ಮತ್ತು ವಿಡಿಯೋಗಳನ್ನು ಪ್ರಧಾನಿ ಟ್ಯಾಗ್ ಮಾಡಿದ್ದಾರೆ.
ಛತ್ರಪತಿ ಶಿವಾಜಿ ಮಹಾರಾಜ್ (1630-80) ಎಂದು ಜನಪ್ರಿಯವಾಗಿ ಕರೆಯಲ್ಪಡುವ ಶಿವಾಜಿ ಭೋಸ್ಲೆಯವರು ಮರಾಠ ಸಾಮ್ರಾಜ್ಯದ ಉದ್ದಗಲಕ್ಕೂ ಕೋಟೆ ಕೊತ್ತಲಗಳನ್ನು ನಿರ್ಮಿಸಿದ್ದಾರೆ. ಸುಮಾರು 300 ಕ್ಕೂ ಹೆಚ್ಚು ಕೋಟೆಗಳನ್ನು ಇವರು ನಿರ್ಮಾಣ ಮಾಡಿದ್ದಾರೆ. ಈ ಮೂಲಕ ತನ್ನ ಸಾಮ್ರಾಜ್ಯವು ಎಲ್ಲಾ ಸಮಯದಲ್ಲೂ ಸುರಕ್ಷತವಾಗಿರುವಂತೆ ಶಿವಾಜಿ ಮಹಾರಾಜರು ಕ್ರಮ ಕೈಗೊಂಡಿದ್ದರು.
ಶಿವಾಜಿ ಜಯಂತಿ ಅಥವಾ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿಯನ್ನು 1870 ರಲ್ಲಿ ಮೊಟ್ಟ ಮೊದಲಿಗೆ ಆಚರಿಸಲಾಯಿತು. ಮಹಾತ್ಮ ಜ್ಯೋತಿರಾವ್ ಫುಲೆ ಪ್ರಥಮ ಬಾರಿಗೆ ಶಿವಾಜಿ ಜಯಂತಿ ಆಚರಣೆಗೆ ಕರೆ ನೀಡಿದ್ದರು. ಪುಣೆಯಿಂದ ಸುಮಾರು 100 ಕಿಲೋಮೀಟರ್ ದೂರದಲ್ಲಿರುವ ರಾಯಗಢದಲ್ಲಿ ಶಿವಾಜಿ ಮಹಾರಾಜರ ಸಮಾಧಿ ಇದೆ. ಮಹಾರಾಷ್ಟ್ರದ ಪುಣೆಯಲ್ಲಿ ಪ್ರಥಮ ಬಾರಿಗೆ ಶಿವಾಜಿ ಮಹಾರಾಜರ ಜಯಂತಿ ಆಚರಿಸಲಾಯಿತು.